ಮಾವು ಬೆಳೆಗಾರರ ನೆರವಿಗೆ ಬರಲು ಸಿಎಂ , ಸಚಿವರಿಗೆ ಮನವಿ ಟನ್ ಮಾವಿಗೆ 10 ಸಾವಿರ ಬೆಂಬಲ ಬೆಲೆ ನೀಡಿ – ಡಾ ವೈ.ಎ. ನಾರಾಯಣಸ್ವಾಮಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : – ಬೆಲೆ ಕುಸಿತದಿಂದ ಸಂಕಷ್ಟಕ್ಕೊಳಗಾಗಿರುವ ಮಾವು ಬೆಳೆಗಾರರ ನೆರವಿಗೆ ಕೂಡಲೇ ರಾಜ್ಯ ಸರ್ಕಾರ ಧಾವಿಸಬೇಕು ಮತ್ತು ಪ್ರತಿ ಟನ್ ಮಾವಿಗೆ ೧೦ ಸಾವಿರ ರೂ ಬೆಂಬಲ ಬೆಲೆ ನೀಡಬೇಕು ಎಂದು ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಮುಖ್ಯಮಂತ್ರಿಗಳು ಹಾಗೂ ತೋಟಗಾರಿಕಾ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ .

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ತೋಟಗಾರಿಕಾ , ರೇಷ್ಮೆ ಸಚಿವ ಆರ್. ಶಂಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿರುವ ಅವರು , ಕೋಲಾರ , ಚಿಕ್ಕಬಳ್ಳಾಪುರ , ಬೆಂಗಳೂರು ಗ್ರಾಮಾಂತರ , ರಾಮನಗರ ಜಿಲ್ಲೆಗಳಲ್ಲಿ ಅತಿ ಹೆಚ್ಚು ರೈತರು ಮಾವು ಬೆಳೆಯುತ್ತಾರೆ , ರಾಜ್ಯದಲ್ಲಿ ಉತ್ಪತ್ತಿಯಾಗುವ ಶೇ .೭೦ ರಷ್ಟು ಮಾವು ಈ ಪ್ರದೇಶಗಳಲ್ಲೇ ಬೆಳೆಯುತ್ತಾರೆ ಎಂದು ಗಮನಕ್ಕೆ ತಂದಿದ್ದಾರೆ .

ದೇಶ ವಿದೇಶಗಳಿಗೂ ರಫ್ತಾಗುತ್ತಿದ್ದ ಮಾವಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ , ವ್ಯಾಪಾರಿಗಳು , ದಲ್ಲಾಳಿಗಳ ಹಾವಳಿಯಿಂದಾಗಿ ಪ್ರತಿ ಟನ್ ಮಾವಿಗೆ ೩ ಸಾವಿರದಿಂದ ೫ ಸಾವಿರದವರಗೂ ಬೆಲೆ ನಿಗದಿ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ . ಒಂದು ಎಕರೆ ಮಾವು ಬೆಳೆಯಲು ರೈತನಿಗೆ ೧೫ ರಿಂದ ೨೦ ಸಾವಿರ ರೂ ಖರ್ಚಾಗುತ್ತದೆ . ಇದರಿಂದ ರೈತರು ಬಹಳ ನಷ್ಟಕ್ಕೆ ಒಳಗಾಗಿದ್ದಾರೆ . ತಾನು ಬೆಳೆದ ಬೆಳೆಗೆ ಬೆಲೆ ಸಿಗದೇ ಆತ್ಮಹತ್ಯೆಗೆ ಶರಣಾಗುವ ಸ್ಥಿತಿಗೆ ರೈತ ತಲುಪಿದ್ದಾನೆ ಎಂದು ಗಮನಕ್ಕೆ ತಂದಿದ್ದಾರೆ .

ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ರಕ್ಷಣೆಗೆ ಬರಬೇಕು , ತಕ್ಷಣವೇ ಮಧ್ಯೆ ಪ್ರವೇಶಿಸಿ ಪ್ರತಿ ಟನ್ ಮಾವಿಗೆ ೧೦ ಸಾವಿರ ರೂಗಳ ಬೆಂಬಲ ಬೆಲೆ ಅಥವಾ ಒಂದು ಎಕರೆ ಮಾವಿನ ಬೆಳೆಗೆ ೨೫ ಸಾವಿರ ರೂಗಳ ವಿಶೇಷ ಪರಿಹಾರವನ್ನು ಘೋಷಿಸುವ ಮೂಲಕ ಮಾವು ಬೆಳೆಗಾರರ ಹಿತ ಕಾಯಬೇಕು ಎಂದು ಮನವಿ ಮಾಡಿದ್ದಾರೆ .