ಅನಧಿಕೃತ ವೈದ್ಯಕೀಯ ಕ್ಲಿನಿಕ್‌ಗಳನ್ನು ತಕ್ಷಣ ತೆರವುಗೊಳಿಸಿ – ಜಿಲ್ಲಾಧಿಕಾರಿ ಅಕ್ರಂ ಪಾಷ

ಕೋಲಾರ : ಜಿಲ್ಲೆಯಲ್ಲಿ ಅನಧಿಕೃತವಾಗಿ ಸ್ಥಾಪಿಸಲಾಗಿರುವ ವೈದ್ಯಕೀಯ ಕ್ಲಿನಿಕ್‌ಗಳನ್ನು ಹಾಗೂ ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಗಳನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು .

ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆ.ಪಿ.ಎಂ.ಇ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 106 ಅಕ್ರಮ ವೈದ್ಯಕೀಯ ಕ್ಲಿನಿಕ್‌ಗಳನ್ನು ಗುರುತಿಸಲಾಗಿದ್ದು , ಮುಂದಿನ 15 ದಿನಗಳೊಳಗೆ ಅನಧಿಕೃತ ಕ್ಲಿನಿಕ್‌ಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ || ಜಗದೀಶ್ ಅವರಿಗೆ ಆಗ್ರಹಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಅಕ್ರಮ ಕ್ಲಿನಿಕ್‌ಗಳು , ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಗಳ ಬಗ್ಗೆ ವಿವರವಾದ ಮಾಹಿತಿಯನ್ನು ಡಿ.ಹೆಚ್.ಓ ಅವರಿಗೆ ಕಾಲಕಾಲಕ್ಕೆ ನೀಡಬೇಕು.

ಡಿಹೆಚ್‌ಓ ರವರು ವಿಳಂಬ ನೀತಿಯನ್ನು ಅನುಸರಿಸದೇ ಸೀಜರ್‌ಗಳೊಂದಿಗೆ ಕ್ಷಿಪ್ರ ಗತಿಯಲ್ಲಿ ರೈಡ್‌ ನಡೆಸಿ ಅನಧಿಕೃತ ಸಂಸ್ಥೆಯನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಮತ್ತು ಇಂತಹ ಪ್ರಕರಣಗಳಿಗೆ ಪೂರಕ ದಾಖಲೆಗಳ ಸಾಕ್ಷಿಯನ್ನು ಹುಡುಕದೇ ವಿಡಿಯೋ ಚಿತ್ರೀಕರಣದಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪೂರಕ ಸಾಕ್ಷಾಧಾರಗಳನ್ನು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಲ್ಲಿ ಅನಧಿಕೃತ ಸಂಸ್ಥೆಗಳನ್ನು ಮುಚ್ಚುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು . ಯಾವುದೇ ಮುಲಾಜಿಗೆ ಒಳಪಡದೇ ತಮ್ಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ಅನಧಿಕೃತ ಕ್ಲಿನಿಕ್‌ಗಳು ಕಂಡು ಬಂದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಮೊದಲು ವೈದ್ಯರ ಹಾಗೂ ವೈದ್ಯಕೀಯ ಸಂಸ್ಥೆಯ ಅಥವಾ ವೈದ್ಯಕೀಯ ಉಪಕರಣಗಳ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ನೋಟೀಸ್ ನೀಡತಕ್ಕದ್ದು .

ನಿಗಧಿ ಅವಧಿಯೊಳಗೆ ಪೂರಕ ದಾಖಲೆಗಳನ್ನು ಸಲ್ಲಿಸದಿರುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು . ಈ ಮೂಲಕ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ಮಾತ್ರ ಲಭ್ಯವಾಗುವಂತೆ ನೋಡಿಕೊಳ್ಳುವುದು ಆರೋಗ್ಯ ಇಲಾಖೆಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು .

ಕೆ.ಪಿ.ಎಂ.ಇ ಕಾಯ್ದೆಯಡಿ ಜಿಲ್ಲಾ ಸಕ್ಷಮ ಪ್ರಾಧಿಕಾರದ ಎದುರು ಅನಧಿಕೃತ ಸಂಸ್ಥೆಗಳ ಮುಖ್ಯಸ್ಥರು ಹಾಜರಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ ತಮ್ಮ ಕ್ಲಿನಿಕ್‌ಗಳನ್ನು ಸಕ್ರಮಗೊಳಿಸಿ ಕೊಳ್ಳಲು ಸರ್ಕಾರವು ಅವಕಾಶ ಕಲ್ಪಿಸಿದ್ದಾಗ್ಯೂ ಹಲವು ಸಂಸ್ಥೆಗಳು ಈವರೆಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ . ನಕಲಿ ಕ್ಲಿನಿಕ್‌ಗಳು ಹಾಗೂ ನಕಲಿ ವೈದ್ಯರ ಹಿಡಿತದಿಂದ ಜಿಲ್ಲೆಯನ್ನು ಆದಷ್ಟು ಬೇಗ ಮುಕ್ತಗೊಳಿಸುವುದು ಹಾಗೂ ಸಾರ್ವಜನಿಕರ ಜೀವಗಳ ಸಂರಕ್ಷಣೆಗಾಗಿ ಜಿಲ್ಲಾಡಳಿತವು ಸದಾ ಬದ್ಧವಾಗಿರುತ್ತದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಐ.ಎಂಎ ಅಧ್ಯಕ್ಷ ಡಾ || ನಾರಾಯಣಸ್ವಾಮಿ , ಡಾ || ವಿಜಯಕುಮಾರ್ , ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ || ನಾರಾಯಣಸ್ವಾಮಿ , ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ || ಚಂದನ್ , ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ || ಪ್ರಸನ್ನ ಕುಮಾರ್ , ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .