ಶ್ರೀರಾಮ ಶೋಭಾಯಾತ್ರೆಯಲ್ಲಿ ಕಲ್ಲು ತೂರಾಟ ಕಿಡಿಗೇಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ :ಕೆ.ನಾರಾಯಣಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಮುಳಬಾಗಿಲು; 9: ಶ್ರೀರಾಮ ಶೋಭಾಯಾತ್ರೆಯಲ್ಲಿ ಕಲ್ಲು ತೂರಾಟ ಮಾಡಿ ಶಾಂತಿ ಹದಗೆಡಿಸಿರುವ ಕಿಡಿಗೇಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ವತಿಯಿಂದ ಎರಡೂ ಜನಾಂಗದ ಶಾಂತಿ ಸಭೆ ನಡೆಸಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಜಾಬ್‍ನಿಂದ ಪ್ರಾರಂಭವಾದ ಧರ್ಮ ಯುದ್ಧ ದಿನೇದಿನೇ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಒಂದಲ್ಲಾ ಒಂದು ವಿವಾದವಾಗುವ ಮುಖಾಂತರ ಜನಸಾಮಾನ್ಯರು ಶಾಂತಿ ಸುವ್ಯವಸ್ಥೆಯಿಲ್ಲದೆ ಭಯಭೀತರಾಗಿ ಬದುಕಬೇಕಾದ ಪರಿಸ್ಥಿತಿಯಿದೆ.
ಜೊತೆಗೆ ನೆನ್ನೆ ಮುಳಬಾಗಿಲು ಶ್ರೀರಾಮ ಶೋಭಾಯಾತ್ರೆ ಶಾಂತಿಯುತವಾಗಿ ನಡೆಯುತ್ತಿತ್ತು. ಯಾತ್ರೆ ಆವಣಿ ಕಡೆ ಸಾಗುವಾಗ ಜಹಾಂಗೀರ್ ಮೊಹಲ್ಲಾ ವೃತ್ತದಲ್ಲಿ ಏಕಾಏಕಿ ಕಲ್ಲು ತೂರಾಟ ಮಾಡುವ ಮುಖಾಂತರ ಕಾನೂನು ಶಾಂತಿ ಕದಡುವ ಜೊತೆಗೆ ಜನಸಾಮಾನ್ಯರು ಭಯಭೀತರಾಗಿದ್ದಾರೆ. ಹಾಗೂ ಅದೇ ಸಮಯದಲ್ಲಿ ಆ ಜಾಗಕ್ಕೆ ಶೋಭಾಯಾತ್ರೆ ಹೋದಾಗ ವಿದ್ಯುತ್ ಅಡಚಣೆಯಾಗಲು ಕಾರಣವಾದರೂ ಏನು.
ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯೇ ಅಥವಾ ಕೋಮುಗಲಭೆ ಎಬ್ಬಿಸಲು ಕಿಡಿಗೇಡಿಗಳು ರೂಪಿಸಿರುವ ತಂತ್ರವೇ ಎಂಬುದನ್ನು ಪೊಲೀಸ್ ಅಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ ಶಾಂತಿ ಸೌಹಾರ್ಧತೆ ಕಾಪಾಡಲು ಜಿಲ್ಲಾಡಳಿತ ಪೊಲೀಸ್ ಇಲಾಖೆ ಜನಪ್ರತಿನಿಧಿಗಳ ಶಾಂತಿ ಸಭೆ ನಡೆಸಿ, ಮುಂದೆ ಇಂತಹ ಅಹಿತಕರ ಘಟನೆಯಾಗದಂತೆ ಮುಂಜಾಗ್ರತೆವಹಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.