JANANUDI.COM NETWORK

ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲತೆ ಕಂಡು ಇದೀಗ ಲಸಿಕೆ ಒದಗಿಸುವುದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ.
ಲಸಿಕಾ ಕೇಂದ್ರದಲ್ಲಿಯೂ ರಾಜಕೀಯ ಮೇಳೈಸುತ್ತಿದ್ದು ತಾರತಮ್ಯತೆ ಧೋರಣೆಯನ್ನು ಅನುಸರಿಸಲಾಗುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದೆ. ಎಲ್ಲಾ ವಯೋ ವರ್ಗದವರಿಗೂ ಲಸಿಕೆ ನೀಡುವುದಾಗಿ ಭರವಸೆ ನೀಡಿರುವ ಸರ್ಕಾರ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಬೇಕಾದ ಮೊದಲ ಡೋಸನ್ನೇ ಇನ್ನೂ ಕೂಡ ನೀಡುವಲ್ಲಿ ಅಸಮರ್ಥವಾಗಿದೆ.
ರಾಜ್ಯ ಸರ್ಕಾರವು ಲಾಕ್ದೌನ್ ನಿಂದ ಸಂತ್ರಸ್ತರಾದ ಕಾರ್ಮಿಕ, ಶ್ರಮಿಕ ವರ್ಗದವರಿಗೆಂದು ಘೋಷಿಸಿರುವ ಪ್ಯಾಕೆಜ್ ಪಡೆಯಲು ವಿಧಿಸಲಾಗಿರುವ ಕಠಿಣ ಷರತ್ತುಗಳು ಮತ್ತು ನಿಯಮಗಳಿಂದಾಗಿ ಅರ್ಹರ ಕೈಸೇರದೆ ಘೋಷಿತ ಪ್ಯಾಕೇಜ್ “ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ”.
ಪ್ಯಾಕೇಜ್ ನಿಂದ ಕೈಬಿಡಲಾಗಿದ್ದ ಇತರ ಹಲವು ಶ್ರಮಿಕ ವರ್ಗ ಮತ್ತು ಕುಲ ಕಸುಬಾಧಾರಿತ ವೃತ್ತಿ ಬಾಂಧವರಿಗೆ ಪ್ಯಾಕೇಜ್ ನೀಡುವಂತೆ ಈಗಾಗಲೇ ನಾವು ಆಗ್ರಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೆ ಕಡೆಗಣಿಸಿರುವುದು ಈ ವರ್ಗದ ಜನರಿಗೆ ಮಾಡಿದ ವಂಚನೆಯಾಗಿರುತ್ತದೆ. ಸರ್ಕಾರದ ಈ ಎಲ್ಲ ವೈಫಲ್ಯತೆಯನ್ನು ಖಂಡಿಸಿ ಸಮಾನ ಮನಸ್ಕ ಜಾತ್ಯಾತೀತ ಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ (ಸಿ.ಪಿ.ಎಂ), ಜಾತ್ಯಾತೀತ ಜನತಾ ದಳ, ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ನಾಳೆ ಬೆಳಿಗ್ಗೆ, ದಿನಾಂಕ 22/06/2021, ಮಂಗಳವಾರ ದಂದು ಕುಂದಾಪುರ ಶಾಸಕರ ಕಚೇರಿಯ (ತಾಲೂಕು ಪಂಚಾಯತ್ ಕಛೇರಿ ,ಶಾಸ್ತ್ರಿ ಸರ್ಕಲ್ ಬಳಿ ) ಮುಂದೆ ಪ್ರತಿಭಟಿಸಿ ಅವ್ಯವ್ಯಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಲಾಗುವುದು.
ಆ ಪ್ರಯುಕ್ತ, ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಪದಾಧಿಕಾರಿಗಳು ಮತ್ತು ಮುಖಂಡರು,ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಸೇವಾದಳ, ಎನ್.ಎಸ್. ಯೂ. ಐ, ಕಿಸಾನ್ ಕಾಂಗ್ರೆಸ್, ಅಲ್ಪಸಂಖ್ಯಾತರ ಘಟಕ, ಹಿಂದುಳಿದ ವರ್ಗಗಳ ಘಟಕ, ಎಸ್.ಸಿ.ಎಸ್. ಟಿ ಘಟಕ, ಕಾನೂನು ಘಟಕ ಮತ್ತು ಎಲ್ಲ ಗ್ರಾಮೀಣ ಕಾಂಗ್ರೆಸ್ ಸಮಿತಿ,ಬೂತ್ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಎಲ್ಲಾ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಸದಸ್ಯರು, ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಳೆ ಬೆಳಿಗ್ಗೆ 10.30 ಕ್ಕೆ ಈ ಜನಾಗ್ರಹಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿ…
– ಬ್ಲಾಕ್ ಕಾಂಗ್ರೆಸ್ ಸಮಿತಿ, ಕುಂದಾಪುರ.