ಬಿ.ಜೆ.ಪಿ ಪಕ್ಷ ಜನರ ಸಂಕಷ್ಟಕ್ಕೆ ಸಮರ್ಥವಾಗಿ ಸ್ಪಂದಿಸಿದೆ:ಕೇಶವ್ ಪ್ರಸಾದ್

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಕೋಲಾರ : ದೇಶ ಕೋವಿಡ್ ಸಂಕಷ್ಟಕ್ಕೆ ಸಿಲುಕಿದಾಗ ಬಿ.ಜೆ.ಪಿ ಪಕ್ಷ ಜನರ ಸಂಕಷ್ಟಕ್ಕೆ ನೆರವಾಗಿ ಸಮರ್ಥವಾಗಿ ಸ್ಪಂದಿಸಿದೆಯೆಂದು ಬಿ.ಜೆ.ಪಿ. ರಾಜ್ಯ ಕಾರ್ಯದರ್ಶಿ ಕೇಶವ್ ಪ್ರಸಾದ್ ಹೇಳಿದರು.
ನಗರದ ಡೂಂ ಲೈಟ್ ಸರ್ಕಲ್ ಬಳಿ ಕುಡಾ ಅಧ್ಯಕ್ಷ ಓಂ ಶಕ್ತಿ ಚಲಪತಿ ಅವರ ಕಛೇರಿಯ ಬಳಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ವತಿಯಿಂದ ಆಟೋ ಚಾಲಕರಿಗೆ ಆಹಾರ ಕಿಟ್‍ಗಳ ವಿತರಣೆ ಹಾಗೂ ಸಾರ್ವಜನಿಕರಿಗೆ ಕೊರೊನಾ ಲಸಿಕಾ ಅಭಿಯಾನಕ್ಕೆ ಅವರು ಚಾಲನೆ ನೀಡಿ ಮಾತನಾಡುತ್ತಾ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾದರೆ ಕರೋನ ಮೂರನೇ ಅಲೆ ಬರದಂತೆ ಎಚ್ಚರ ವಹಿಸ ಬೇಕೆಂದರು.
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಓಂ ಶಕ್ತಿ ಚಲಪತಿಯವರಂತೆ ಸೇವೆ ಹಾಗೂ ಸಮರ್ಪಣಾ ಮನೋಭಾವ ಬೆಳಸಿಕೊಳ್ಳುವಂತೆ ಕಿವಿ ಮಾತು ತಿಳಿಸಿದರಲ್ಲದೆ ದೇಶಕ್ಕೆ ಮೋದಿಯವರ ಸೇವೆ ಇನ್ನೂ ಹಲವಾರು ವರ್ಷಗಳು ಸಿಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂತಾರಾಷ್ಟ್ರೀಯ ದೇಹದಾಡ್ಯ ಪಟು ಹಾಗೂ ಪುರುಷೋತ್ತಮ ಚಲನಚಿತ್ರದ ನಾಯಕ ಜಿಮ್ ಎ.ವಿ.ರವಿ ಮಾತನಾಡಿ, ಭೇದಭಾವವಿಲ್ಲದೆ ವಿಶ್ವದ ಎಲ್ಲರನ್ನೂ ಪ್ರೀತಿಸುವ ಹಾಗೂ ಪ್ರಪಂಚದ ಎಲ್ಲಾ ಜನ ಪ್ರೀತಿಸುವ ಏಕೈಕ ವ್ಯಕ್ತಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ನಿಸ್ವಾರ್ಥ ಆದರ್ಶಗಳನ್ನು ಪಾಲಿಸೋಣವೆಂದರು.

ಮೋದಿ ದೇಶದ ಪ್ರಧಾನಿಗಳಾದ ಮೇಲೆ ಪ್ರಪಂಚದ ಇತರ ದೇಶಗಳು ಭಾರತವನ್ನು ಅತಿ ಗೌರವದಿಂದ ಕಾಣುತ್ತಿದ್ದು,ದೇಶದ ಜನತೆಗೆ ಬೇರೆ ದೇಶಗಳಲ್ಲಿ ಹೆಚ್ಚಿನ ಮರ್ಯಾದೆ ಸಿಗುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು,ಅವರ ಹುಟ್ಟು ಹಬ್ಬದಲ್ಲಿ ನಾವುಗಳು ಭಾಗವಹಿಸಿರುವುದಕ್ಕೆ ಸಂತೋಷವಾಗಿದೆಯೆಂದರು. ಕಾರ್ಯಕ್ರಮದ ಆಯೋಜಕರಾದ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಓಂ ಶಕ್ತಿ ಚಲಪತಿ ಮಾತನಾಡಿ, ಪ್ರಧಾನಿಗಳಾದ ನರೇಂದ್ರ ಮೋದಿಯವರ ಆಶಯದಂತೆ ಅವರ ಹುಟ್ಟು ಹಬ್ಬವನ್ನು ದೇಶದಲ್ಲಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಾಗೂ ಸೇವೆಗೆ ಸಮರ್ಪಣೆ ಮಾಡಿಕೊಳ್ಳುವ ಮೂಲಕ ಆಚರಿಸುತ್ತಿದ್ದು,ನಮ್ಮ ಪಕ್ಷ ಸದಾ ಸೇವೆ ಮತ್ತು ಸಮರ್ಪಣೆಗೆ ಸದಾ ಸಿದ್ದವಿರುತ್ತದೆಯೆಂದರು. ನನಗೆ ಅಧಿಕಾರ ಇರಲಿ ಬಿಡಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನನ್ನ ಸಂಪಾದನೆಯ ಒಂದು ಭಾಗವನ್ನು ಜನಸೇವೆಗೆ ಮೀಸಲಿಡುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಡಾ:ವೇಣುಗೋಪಾಲ್ ರೆಡ್ಡಿ, ಕೋಲಾರ ಜಿಲ್ಲಾ ಸಂಘಟನಾ ಪ್ರಭಾರಿ ಜಯಚಂದ್ರ ರೆಡ್ಡಿ, ಮುಖಂಡರುಗಳಾದ ಎಸ್.ಬಿ.ಮುನಿವೆಂಟಪ್ಪ, ಅಪ್ಪಿ ನಾರಾಯಣಸ್ವಾಮಿ, ಸಾಮಾ ಅನಿಲ್ ಕುಮಾರ್, ಬೈಚಪ್ಪ, ಕೆ.ಜಿ.ಮಂಜುನಾಥ್, ಮೋಹನ್, ಸುರೇಶ್, ರಾಜೇಶ್ವರಿ, ಅರುಣ,ಮಮತ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.