

ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ “ಮೌಲ್ಯಾಧಾರಿತ ಶಿಕ್ಷಣ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಧ್ಯಾಪಕ ಚೇತನ್ ಕುಮಾರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ವಿದ್ಯಾರ್ಥಿಗಳು ಕಾಲದ ಬದಲಾವಣೆಗಳ ಜೊತೆಗೆ ಹೆಜ್ಜೆ ಹಾಕುವಾಗ ಸಮಯಪ್ರಜ್ಞೆ ಅತಿಮುಖ್ಯ. ಬದುಕಿನಲ್ಲಿ ಯಶಸ್ಸು ಎನ್ನುವುದು ಕಂಡಕಂಡಲ್ಲಿ ಬೆಳೆಯುವುದಿಲ್ಲ. ಯಶಸ್ಸು ಪವಿತ್ರ ಹೃದಯದ ಮಂದಾರ ಪುಷ್ಪ ವಾಗಿದೆ. ಈ ಯಶಸ್ಸನ್ನು ಪಡೆಯುವಾಗ ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿದೆ. ನಿರ್ಧಿಷ್ಟ ಗುರಿಯನ್ನು ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಪ್ರಯತ್ನ ಪಡಬೇಕು. ಹಾಗೇ ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಏಕೆಂದರೆ ಎಷ್ಟೋ ವಿದ್ಯಾರ್ಥಿಗಳು ತನ್ನ ಶೈಕ್ಷಣಿಕ ಹಂತದಲ್ಲಿ ಶಿಕ್ಷಕರು ಹಾಕಿಕೊಟ್ಟ ಉತ್ತಮ ಮಾರ್ಗದಲ್ಲಿಯೇ ನಡೆದು ಯಶಸ್ಸನ್ನು ಪಡೆಯುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಲಲಿತಾದೇವಿ ವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಮೈತ್ರಿ ಸ್ವಾಗತಿಸಿದರು.
ವಿದ್ಯಾರ್ಥಿಗಳಾದ ಸೌಮ್ಯ ಕಾರ್ಯಕ್ರಮ ನಿರ್ವಹಿಸಿ, ಚಂದ್ರಿಕಾ ಪರಿಚಯಿಸಿ ಪ್ರಿಯಾಂಕಾ ವಂದಿಸಿದರು.
