ಬೆಂಗಳೂರು: ಅಪಾರ್ಟ್‌ಮೆಂಟ್ ಗೋಡೆ ಕುಸಿದು ಬಳಿಯ ಶೆಡ್ಡಲ್ಲಿ ಮಲಗಿದ್ದ ನಾಲ್ವರು ಕಾರ್ಮಿಕರ ದಾರುಣ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಹಳ್ಳಿ ಬಳಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಗೋಡೆ ಕುಸಿದು ನಾಲ್ವರ ಸಾವನ್ನಪ್ಪಿರುವ ಕರಾಳ ಘಟನೆ ನಡೆದಿದೆ. ಮನೋಜ್ ಕುಮಾರ್ ಸದಯ್ (35), ರಾಮ್ ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದೆಯ (22) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

ಖಾಸಗಿ ಸಂಸ್ಥೆಯ ನಿರ್ಮಾಣ ಹಂತದ ಕಾಂಪೌಂಡ್ ಗೋಡೆ ಕಾರ್ಮಿಕರ ಶೆಡ್ ಮೇಲೆ ಕುಸಿದು ಕಾರ್ಮಿಕರು ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ನಾಲ್ವರನ್ನು ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ದುರ್ಘಟನೆ ನಡೆದ ಸಂದರ್ಭದಲ್ಲಿ ಒಟ್ಟು 8 ಜನ ಕಾರ್ಮಿಕರು ಶೆಡ್​​ನಲ್ಲಿದ್ದರು ಎನ್ನಲಾಗಿದ್ದು, ಮೃತರೆಲ್ಲರೂ ಉತ್ತರ ಭಾರತ ಮೂಲದವರು ಎನ್ನಲಾಗಿದೆ.

ಕಟ್ಟಡ ಕಾಮಗಾರಿ ಮಾಡಲು ಬಂದ ಕಾರ್ಮಿಕರು ಶೆಡ್ ನಲ್ಲಿ ಉಳಿದುಕೊಂಡಿದ್ದು, ರಾತ್ರಿ ವೇಳೆ ಮಲಗಿದ್ದ ಶೆಡ್ ಮೇಲೆಯೇ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಘಟನೆ ತಿರುಮಲಶೆಟ್ಟಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ವರು ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸಂಜೆ ಆಗ್ತಿದಂತೆ ವರುಣ ಆರ್ಭಟ ಜೋರಾಗ್ತಿದೆ. ಮೂರ್ನಾಲ್ಕು ದಿನಗಳಿಂದ ಸಂಜೆ ವೇಳೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದ್ದು, ನಿನ್ನೆ ರಾತ್ರಿ ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ. ನಗರದ ಶಿವನಂದ ಸರ್ಕಲ್, ಮಲ್ಲೇಶ್ವರಂ , ಶೇಷಾದ್ರಿ ಪುರಂ, ಮಾಗಡಿ ರೋಡ್ , ಮೆಜೆಸ್ಟಿಕ್, ಟೌನ್‌ಹಾಲ್, ಹೆಬ್ಬಾಳ, ಇಂದಿರಾನಗರ ಸೇರಿದಂತೆ ಹಲವೆಡೆ ಮಳೆ ಸುರಿದಿದೆ.