ಸಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಬಾಬಾ ಸಾಹೇಬರ ಪಾತ್ರ ಹಿರಿದು : ಬೆಸ್ಕಾಂ ಎಂಜಿನಿಯರ್ ಎಲ್.ನಟರಾಜ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಬಾಬಾ ಸಾಹೇಬರ ಪಾತ್ರ ಹಿರಿದು ಎಂದು ಜಿಲ್ಲಾ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಎಲ್.ನಟರಾಜ್ ಹೇಳಿದರು.
ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ತಾಲ್ಲೂಕು ಬೆಸ್ಕಾಂ ನೌಕರರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿ, ಅಂಬೇಡ್ಕರ್ ಅವರ ಜೀವನ ಸಮಾಜದ ಎಲ್ಲ ವರ್ಗದ ಜನರಿಗೂ ಪ್ರೇರಕ ಶಕ್ತಿಯಾಗಿದೆ. ಅವರ ಆದರ್ಶ ನಡೆ ಎಲ್ಲ ಕಾಲಕ್ಕೂ ಅನುಕರಣೀಯವಾಗಿದೆ ಎಂದು ಹೇಳಿದರು.
ತಾಲ್ಲೂಕು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ ಮಾತನಾಡಿ, ಬೆಸ್ಕಾಂ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಇಲಾಖೆಯಿಂದ ನೀಡಲಾಗಿರುವ ಸುರಕ್ಷತಾ ಉಪಕರಣಗಣನ್ನು ಬಳಸಿಕೊಳ್ಳಬೇಕು. ಅಗತ್ಯವಿದ್ದಾಗ ಅಧಿಕಾರಿಗಳ ಸಲಹೆ ಪಡೆಯಬೇಕು. ಸೂಚನೆಗಳನ್ನು ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ, ಸಂಘದ ಅಧ್ಯಕ್ಷ ಕೆ.ಮೋಹನಾಚಾರಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಸಂಘಟನಾ ಕಾರ್ಯದರ್ಶಿ ಕೆ.ರವಿಕುಮಾರ್, ಮುಖಂಡರಾದ ಬಿ.ವಿ.ಆಂಜನೇಯಪ್ಪ, ನರಸಿಂಹಮೂರ್ತಿ, ಪ್ರಕಾಶ್, ವಿಜಯಕುಮಾರ್, ಸುಬ್ರಮಣಿ, ಆರ್.ಚಂದ್ರು, ಆರ್.ಕೆ.ಬಾಬು, ರಾಮಾಂಜನೇಯ, ಎಸ್.ಎನ್.ಗಂಗರಾಜು, ಆನಂದ್, ನಂಜುಂಡೇಶ್ವರ, ದೇವರಾಜ್, ರಾಜಣ್ಣ, ಎನ್.ವಿ.ಶ್ರೀನಿವಾಸ್ ಇದ್ದರು.