ಭಾರತ ಸೇವಾದಳ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ; ಸಮಾನತೆ ಸಾರುವ ಸಂವಿಧಾನದ ಕೊಡುಗೆ- ಜಯದೇವ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಅಂಬೇಡ್ಕರ್ ವಿಶ್ವದ ಎಲ್ಲಾ ಧರ್ಮಗ್ರಂಥಗಳು ಹಾಗೂ ಸಂವಿಧಾನಗಳನ್ನು ಅಧ್ಯಯನ ಮಾಡಿ ಸರ್ವರಿಗೂ ಸಮಾನ ಅವಕಾಶಗಳುಳ್ಳ ಸಂವಿಧಾನವನ್ನು ನೀಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್‍ಎಸಿ ಘಟಕದ ಅಧ್ಯಕ್ಷ ಕೆ.ಜಯದೇವ ತಿಳಿಸಿದರು.
ನಗರದ ಭಾರತ ಸೇವಾದಳ ಕಚೇರಿಯಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 130 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮಾನವೀಯತೆ ಸೌಹಾರ್ದತೆ ಮತ್ತು ಭ್ರಾತೃತ್ವ, ಜಾತ್ಯತೀತ ಮನೋಧರ್ಮದ ತಳಹದಿಯಲ್ಲಿ ಭಾರತದ ಸಂವಿಧಾನ ರಚನೆಯಾಗಿದೆ, ಶೋಷಣೆ, ಅಸಮಾನತೆ ತೊಡೆದು ಹಾಕಲು ಭಾರತಕ್ಕೆ ಇದೇ ಅಸ್ತ್ರವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಭಾರತ ಸೇವಾದಳ ಜಿಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್, ವಿಶ್ವದಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನದ ಸಂಕೇತವಾಗಿರುವುದು ಭಾರತದ ಹೆಗ್ಗಳಿಕೆಯಾಗಿದೆಯೆಂದು ಹೇಳಿದರು.
ಆಕ್ಸ್‍ಫರ್ಡ್‍ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯದ ಪುಸ್ತಕಗಳನ್ನು ದಿನವಿಡೀ ಓದುತ್ತಿದ್ದ ದಿದ ಏಕೈಕ ವಿದ್ಯಾರ್ಥಿ ಅಂಬೇಡ್ಕರ್ ಆಗಿದ್ದು, ಕಠಿಣ ಪರಿಶ್ರಮ, ಸತತ ಅಭ್ಯಾಸ ಹಾಗೂ ಪರಿಶುದ್ಧ ಮನಸ್ಸಿನ ಪ್ರಾಮಾಣಿಕ ಪ್ರಯತ್ನದಿಂದ ಎಂತ ಬಡತನದಲ್ಲಿ ಹುಟ್ಟಿದ್ದರೂ ದೊಡ್ಡ ಸಾಧನೆ ಮಾಡಬಹುದು ಎನ್ನುವುದಕ್ಕೆ ಅಂಬೇಡ್ಕರ್ ಇಂದಿಗೂ ನಿದರ್ಶನವಾಗಿದ್ದಾರೆ, ದೇಶದಲ್ಲಿ ಸಂವಿಧಾನ ಅನುಷ್ಠಾನದಲ್ಲಿರುವವರೆವಿಗೂ ಅಂಬೇಡ್ಕರ್ ಮತ್ತು ಅವರ ಆಶಯಗಳಿಗೆ ಸಾವಿಲ್ಲ ಎಂದು ಘೋಷಿಸಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್‍ರ ಆದರ್ಶಗಳು ಒಂದು ದಿನದ ಸ್ಮರಣೆಯಾಗದೆ ದೇಶದ ಪ್ರತಿಯೊಬ್ಬ ನಾಗರೀಕರ ನಿತ್ಯದ ಅನುಸರಣೆಯಾಗಬೇಕಿದೆ ಎಂದು ಹೇಳಿದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಹಾಗೂ ರೋಟರಿ ಸೆಂಟ್ರಲ್ ಅಧ್ಯಕ್ಷ ಎಸ್.ಸುಧಾಕರ್, ಪದಾಧಿಕಾರಿಗಳಾದ ವಿ.ಪಿ.ಸೋಮಶೇಖರ್, ಡಿ.ಮುನೇಶ್, ರಾಜೇಶ್‍ಸಿಂಗ್, ಸಂಪತ್‍ಕುಮಾರ್, ಫಾಲ್ಗುಣ, ಶಿವಕುಮಾರಗೌಡ, ಕಿಲಾರಿಪೇಟೆ ಮುನಿವೆಂಕಟಯಾದವ್, ಇಳಂಗೋವನ್ ಇತರರು ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿದರು.
ರಾಜೇಶ್‍ಸಿಂಗ್‍ರಿಂದ ಸಿಹಿ ವಿತರಣೆಯಾಯಿತು. ಸೇವಾದಳ ನಿಯಮಗಳಂತೆ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯವಾಯಿತು.