

ಶ್ರೀನಿವಾಸಪುರ : ರಾಜಣ್ಣ ಮತ್ತು ಮಂಜುನಾಥ್ ಎಂಬುವರು ಸರ್ಕಾರಿ ನೌಕರರಾಗಿದ್ದು ಈ ವ್ಯಕ್ತಿಗಳು ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಬೇಲಿ ಹಾಕುತ್ತಿದ್ದು ಸುಮಾರು ಆರು ಏಳು ತೋಟಗಳಿಗೆ ಹೋಗುವಂತಹ ರೈತರಿಗೆ ಹಾಗೂ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪಕ್ಕದ ಜಮೀನುಗಳ ವಾರಸುದಾರರಾದ ಎಂ.ಅಶ್ವತ್ಥಪ್ಪ ,ರಾಮಪ್ಪ , ವೆಂಕಟೇಶಪ್ಪ, ಯಲ್ಲಪ್ಪ,ನಾರಾಯಣಸ್ವಾಮಿ ,ಲಕ್ಷ್ಮೀಸಾಗರ ನಾರಾಯಣಸ್ವಾಮಿ, ಚಲಪತಿ , ಪಾರ್ವತಮ್ಮ , ಜ್ಯೋತಮ್ಮ ಆರೋಪಿಸಿದ್ದಾರೆ.
ಹಲವು ವರ್ಷಗಳಿಂದ ರಾಜಕಾಲವೆಯನ್ನೇ ತೋಟಗಳಿಗೆ ಹೋಗುವ ರಸ್ತೆಯನ್ನಾಗಿ ಸಾರ್ವಜನಿಕರು ಬಳಕೆ ಮಾಡುತ್ತಿದ್ದ ರಾಜಕಾಲುವೆ ಜಾಗವನ್ನು ಶ್ರೀನಿವಾಸಪುರ ತಾಲ್ಲೂಕಿನ ಶೇಷಾಪುರ ಗ್ರಾಮದ ಮಜರಾ ನಾರಾಯಣಪುರ ಗ್ರಾಮದ ಲಕ್ಷ್ಮಮ್ಮ ನಾರಾಯಣಪ್ಪ ಮಕ್ಕಳಾದ ರಾಜಣ್ಣ, ಮಂಜುನಾಥ್ ಒತ್ತುವರಿ ಮಾಡಿಕೊಂಡು ಬೇಲಿ ಹಾಕುತ್ತಿದ್ದಾರೆ ಈ ವಿಚಾರವಾಗಿ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದು ಸ್ಥಳಕ್ಕೆ ಬಂದಂತಹ ತಾಲೂಕು ದಂಡಾಧಿಕಾರಿಗಳು ಪರಿಶೀಲನೆ ಮಾಡಿ ಯಾವುದೇ ಕಾರಣಕ್ಕೂ ಬೇಲಿ ಹಾಕದಂತೆ ಸೂಚನೆ ನೀಡಿದ್ದರು ತಾಲ್ಲೂಕು ದಂಡಾಧಿಕಾರಿಗಳ ಬದಲಾವಣೆಯಾದ ನಂತರ ಈಗ ಪುನಃ ಕಾಮಗಾರಿ ಆರಂಭ ಮಾಡಿದ್ದಾರೆಂದು ನಾರಾಯಣಪುರ ಗ್ರಾಮದ ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಜಕಾಲವೆಯನ್ನು ಕಬಳಿಕೆ ಮಾಡುತ್ತಿದ್ದು, ಅದರ ಜೊತೆಗೆ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಒತ್ತುವರಿಯಾಗಿರುವ ರಾಜಕಾಲುವೆ ಜಾಗವನ್ನು ಬಿಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಾರಾಯಣಪುರ ಗ್ರಾಮದ ಸಾರ್ವಜನಿಕರು ಹಾಗೂ ರೈತರು ಮನವಿ ಮಾಡಿದ್ದಾರೆ.