ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸಿ.ಎಸ್ ವೆಂಕಟೇಶ್ ಆಯ್ಕೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸಿ.ಎಸ್ ವೆಂಕಟೇಶ್ ಆಯ್ಕೆ
ಕೋಲಾರ:ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಸಿ.ಎಸ್ ವೆಂಕಟೇಶ್ ಅವರು ಆಯ್ಕೆಯಾದರು. 
 ಇಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಹರ್ಷಗುಪ್ತ ಅವರ ಅಧ್ಯಕ್ಷತೆಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ 07 ಅಭ್ಯರ್ಥಿಗಳು 09 ನಾಮಪತ್ರಗಳನ್ನು ಸಲ್ಲಿಸಿದ್ದರು. ಸಿ.ಎಸ್ ವೆಂಕಟೇಶ್, ಗೀತಮ್ಮ (02 ನಾಮಪತ್ರ), ಕೆ.ಎಸ್ ನಂಜುಡಪ್ಪ, ನಾರಾಯಣಸ್ವಾಮಿ, ಅರವಿಂದ್ ಕುಮಾರ್ (2 ನಾಮಪತ್ರ), ಹೆಚ್.ಎನ್ ಪ್ರಕಾಶ್ ಮತ್ತು ಶಾಹಿದ್ ಷಹಬಾಜ್ ಇವರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳನ್ನು ವಾಪಸ್ ಪಡೆಯಲು 15 ನಿಮಿಷಗಳ ಕಾಲ ಅವಕಾಶ ಕಲ್ಪಿಸಲಾಯಿತು. ಈ ಅವಧಿಯಲ್ಲಿ ಸಿ.ಎಸ್ ವೆಂಕಟೇಶ್ ಮತ್ತು ನಾರಾಯಣಸ್ವಾಮಿ ಅವರನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದರು.  ಹಾಗಾಗಿ, ಅಂತಿಮ ಕಣದಲ್ಲಿ ಸಿ.ಎಸ್ ವೆಂಕಟೇಶ್ ಮತ್ತು ನಾರಾಯಣಸ್ವಾಮಿ ಅವರು ಉಳಿದರು. 
ಚುನಾವಣೆಯನ್ನು ಇಬ್ಬರು ಅಭ್ಯರ್ಥಿಗಳ ಪರ ಮತ್ತು ವಿರುದ್ದ ಕೈಎತ್ತುವ ಮೂಲಕ ಹಾಗೂ ಸಹಿ ಪಡೆಯುವ ಮೂಲಕ ಮತ ಚಲಾಯಿಸಿ ದಾಖಲಿಸಲಾಯಿತು. ಸಿ.ಎಸ್ ವೆಂಕಟೇಶ್ ಅವರ ಪರವಾಗಿ 22 ಮತಗಳು ವಿರುದ್ಧವಾಗಿ 07 ಮತಗಳು ದಾಖಲಾದವು. ಅದೇ ರೀತಿ ನಾರಾಯಣಸ್ವಾಮಿ ಅವರ ಪರ 7 ಮತಗಳು ಹಾಗೂ ವಿರುದ್ಧ 23 ಮತಗಳು ದಾಖಲಾದವು. 
 ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಹೆಚ್.ವಿ ದರ್ಶನ್, ಅಪರ ಜಿಲ್ಲಾಧಿಕಾರಿಗಳಾದ ಹೆಚ್. ಪುಷ್ಪಲತಾ ಅವರು ಉಪಸ್ಥಿತರಿದ್ದರು.