ಕುಂದಾಪುರ (ಎ. 14) : ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ವ್ಯವಹಾರ ಜ್ಞಾನ ಅತಿ ಮುಖ್ಯ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕಾದರೆ ಮಕ್ಕಳಿಗೆ ಎಲ್ಲರೊಂದಿಗೆ ಬೆರೆಯಲು ಮಾತಿನ ಕೌಶಲ್ಯ, ಲೆಕ್ಕಾಚಾರದ ವಿಚಾರ ತಿಳಿದಿರಬೇಕೆಂದು ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್ ಸಂಸ್ಥೆ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ನ 10ನೇ ದಿನದಲ್ಲಿ ಶಾಲಾ ವಠಾರದಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಯುತ ವಿಜಯ್ ರವರು ಮಾತನಾಡಿದರು. ಅವರು ಡಾ. ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನಗೈದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ| ಚಿಂತನಾ ರಾಜೇಶ್ ರವರು ವ್ಯಾಪಾರದ ಸಮಯದಲ್ಲಿ ಗ್ರಾಹಕರೊಂದಿಗೆ ಹೇಗೆ ಮಾತನಾಡಬೇಕು ಎಂಬುದನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು. ಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕೇತರರು ಮತ್ತು ಪೋಷಕರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಅತ್ಯಂತ ಉತ್ಸಾಹದಿಂದ ಚಟುವಟಿಕೆಯಲ್ಲಿ ಪಾಲ್ಗೊಂಡರು. ಶಿಕ್ಷಕಿ ಪವಿತ್ರಾ ಪುತ್ರನ್ ಎಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Day: April 14, 2024
ಗ್ರಾಮೀಣ ಕ್ರೀಡೆಗಳಿಗೆ ಜೀವತುಂಬಿದ ಕೆಸರು ಗದ್ದೆಯಲ್ಲೊಂದಿನ
ಕುಂದಾಪುರ (ಎ.13) : ಇಂದಿನ ಮಕ್ಕಳು ಕ್ರಿಯಾಶೀಲರಾಗಬೇಕಾದರೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವು ಬಹುಮುಖ್ಯ, ದೇಹ ಮತ್ತು ಮನಸ್ಸನ್ನು ಸದೃಢವಾಗಿರಿಸಿಕೊಳ್ಳಬೇಕಾದರೆ ದೈಹಿಕ ಚಟುವಟಿಕೆಗಳು ಅತಿ ಮುಖ್ಯ. ಅದು ಇಂತಹ ಕ್ಯಾಂಪ್ ಗಳಿಂದ ಸಾಧ್ಯ ಎಂದು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ. ಶುಭೋದ್ ಶೆಟ್ಟಿ ಹೇಳಿದರು. ಅವರು ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳು ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಬೇಸಿಗೆ ಶಿಬಿರದ 9ನೇ ದಿನವಾದ ಹಾಲಾಡಿಯ ಮುದೂರಿನ ಕೆಸರುಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇನ್ನೋರ್ವ ಅತಿಥಿ ಸಿವಿಲ್ ಇಂಜಿನಿಯರ್ ರೂಪೇಶ್ ಶೆಟ್ಟಿಯವರು ಮಾತನಾಡುತ್ತಾ ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆ ಮತ್ತು ಕುಂದಗನ್ನಡದಲ್ಲಿ ಮರೆಯಾಗುತ್ತಿರುವ ಕೆಲವು ಪದಗಳನ್ನು ನೆನಪಿಸಿದರು.
ಶ್ರೀಮತಿ ಸುಶೀಲ ಚಂದ್ರಶೇಖರ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಹಳ್ಳಿ ಹಾಡುಗಳನ್ನು ಹಾಡಿದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಲೋಚನ ಶೆಟ್ಟಿಯವರು ತಾವು ಕುಂದಾಪುರ ಕನ್ನಡದಲ್ಲಿ ರಚಿಸಿರುವ ಸ್ವರಚಿತ ಕವಿತೆಯನ್ನು ಹಾಡಿ ವಿದ್ಯಾರ್ಥಿಗಳ ಮನಸ್ಸನ್ನು ಸೂರೆಗೊಳ್ಳುವಂತೆ ಮಾಡಿದರು. ಬಳಿಕ ವಿದ್ಯಾರ್ಥಿಗಳು ದೇಶಿ ಆಟಗಳಾದ ಕುಂಟಬಿಲ್ಲೆ, ಲಗೋರಿ, ಚೆನ್ನಿಮಣಿ, ಕಪ್ಪೆಜಿಗಿತವನ್ನು ಆಡಿ ಸಂತೋಷಪಟ್ಟರು. ನಂತರ ಕೆಸರುಗದ್ದೆಯಲ್ಲಿ ವಾಲಿಬಾಲ್, ತ್ರೋಬಾಲ್, ಗೋರಿ ಆಟ, ನಿಧಿ ಶೋಧನೆ ಮುಂತಾದ ಆಟಗಳನ್ನು ಆಡಿ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಜೀವಕಳೆ ತುಂಬಿದರು. ಹಾಲಾಡಿ ವಲಯದ ರಾಜ್ಯಮಟ್ಟದಲ್ಲಿ ವಿಜೇತರಾದ ಹಗ್ಗ ಜಗ್ಗಾಟದ ತಂಡದವರಿಂದ ಹಗ್ಗಜಗ್ಗಾಟ ಪ್ರದರ್ಶನ ನಡೆಯಿತು. ಶಿಕ್ಷಕಿ ಸ್ವಪ್ನಾ ಸತೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ಸಿ.ಟಿ.ರವಿ ವ್ಯಂಗ್ಯ
ಶ್ರೀನಿವಾಸಪುರ : ಈ ಹಿಂದೆ ಬಿಜೆಪಿ ಆಡಳಿತದಲ್ಲಿ ರಾಜ್ಯ ಕೆರೆ, ಕುಂಟೆ ಹಾಗೂ ಡ್ಯಾಮ್ಗಳಲ್ಲಿ ಸದಾ ನೀರು ಹರಿಯುತ್ತಿತ್ತು. ಕೆರೆಗಳ ಕಟ್ಟೆಯ ಮೇಲೆಯೂ ಹರಿಯುತ್ತಿತ್ತು. ಆದರೆ ಇಂದು ಮೂಕ ಜೀವಿಗಳು ನೀರು ಕುಡಿಯಲು ನೀರಿಲ್ಲದೆ ಪರದಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು.
ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತದ ಹೋಳೂರು ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಎನ್ಡಿಎ ಅಭ್ಯರ್ಥಿಯ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸಕಾಲದಲ್ಲಿ ಮಳೆಯಿಲ್ಲ. ಬೆಳೆಯಿಲ್ಲ, ಜನತೆ ಸುಭೀಕ್ಷವಾಗಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬಂದ ಮೇಲೆ ಅಂತೂ ರಾಜ್ಯದ ಜನತೆ ಬರವನ್ನು ಎದುರಿಸುತ್ತಿದ್ದಾರೆ. ರಾಜ್ಯಕ್ಕೆ ಸಿದ್ದರಾಮಯ್ಯನವರು ಒಂದು ರೀತಿ ಐರನ್ಲೆಗ್ ತರಹ ಎಂದರು.
ಈ ಹಿಂದೆ ರಷ್ಯಾ , ಉಕ್ರೇನ್ ನಡುವೆ ನಡೆದ ಯುದ್ದದಲ್ಲಿ ೪೮ ಗಂಟೆಗಳ ಕಾಲ ಯುದ್ದವನ್ನು ನಿಲ್ಲಿಸಿ ನಮ್ಮ ದೇಶದ ೨೩ ಸಾವಿರ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದರು. ಇದೆಲ್ಲವೂ ನರೇಂದ್ರ ಮೋದಿ ಪ್ರದಾನ ಮಂತ್ರಿ ಆದರೆ ಸಾಧ್ಯ ಎಂದರು.ನರೇAದ್ರ ಮೋದಿ ಎಂದರೆ ಎಲ್ಲಾ ಭಯೋತ್ಪಾದಕರಿಗೂ ಭಯ. ಪಾಕಿಸ್ತಾನ್, ಕೆನಡಾ, ಇರಾನ್ ದೇಶಗಳಲ್ಲಿ ೨೩ ಭಯೋತ್ಪದಾಕರು ಅಪರಚಿತ ವ್ಯಕ್ತಿ ಗುಂಡಿಗೆ ಬಲಿಯಾಗಿದ್ದಾರೆ .
ಸಿದ್ದರಾಮಯ್ಯ ನವರು ನರೇಂದ್ರ ಮೋದಿರುವ ಎಲ್ಲಾ ಸುಳ್ಳಿನ ಕಂತೆ ಎಂದು ಹೇಳುತ್ತಾರೆ ಆದರೆ ನರೇಂದ್ರ ಮೋದಿ ರವರು ಜನ್ಧನ್, ಮನೆ ಮನೆಗೆ ಶೌಚಾಲಯ, ಉಚಿತ ಗ್ಯಾಸ್ , ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಸೌಭಾಗ್ಯ ಯೋಜನೆ ಮೂಲಕ ವಿದ್ಯುತ್ ಸಂಪರ್ಕ, ಮನೆ ಮನೆಗೆ ಜಲಜೀವನ್ ಯೋಜನೆ ಅಡಿಯಲ್ಲಿ ಶುದ್ದ ನೀರು, ಕೋವಿಡ್ ಸಮಯದಲ್ಲಿ ಉಚಿತವಾಗಿ ಲಸಿಕೆ , ಗರೀಭ್ ಯೋಜನೆ ಮೂಲಕ ೧೦ ಕೆಜಿ ಅಕ್ಕಿ ಕೊಟ್ಟಿರುವುದು, ಬೀದಿ ಬದಿ ವ್ಯಾಪಾರಿಗಳಿಗೆ ಸಾಲಕೊಟ್ಟಿರುವುದು, ವಿಶ್ವಕರ್ಮ ಯೋಜನೆ ಅಡಿಯಲ್ಲಿ ೧೮ ವಿವಿಧ ಕುಲಕಸಬು ಮಾಡುತ್ತಿರುವವರಿಗೆ ೧೫ ಸಾವಿರ ಸಬ್ಸಡಿಯಲ್ಲಿ ೮೫ ಸಾವಿರ ಸಾಲ, ಆಯುಷ್ಮಾನ್ ಯೋಜನೆಯಲ್ಲಿ ಕುಟುಂಬದವರಿಗೆ ೫ಲಕ್ಷ ನೀಡುತ್ತಿರುವುದು , ಕಿಸಾನ್ ಸನ್ಮಾನ್ ಯೋಜನೆಯಲ್ಲಿ ರೈತರ ಖಾತೆ ಹಣ ಬೀಳುತ್ತಿರುವುದು ಇವೆಲ್ಲವೂ ಸುಳ್ಳ ಎಂದು ಸಿದ್ದರಾಮಯ್ಯ ರವರನ್ನ ಪ್ರಶ್ನಿಸಿದರು?
ಕೋವಿಡ್ ಸಮಯದಲ್ಲಿ ಅಮೇರಿಕಾ ದೇಶವು ಒಂದು ಬಾರಿ ಕೋವಿಡ್ ಟೆಸ್ಟ್ಗೆ ೭ ಸಾವಿರು ಚಾರ್ಜ್ ಮಾಡುತ್ತಿತ್ತು, ಆಲ್ಲದೆ ಒಮ್ಮೆ ಲಸಿಕೆ ಹಾಕಿಸಿಕೊಳ್ಳಲು ೩೪ ಸಾವಿರ, ಹಾಗೆ ೩ ಲಸಿಕೆಗಳಿಗೆ ೧.೨೦ ಸಾವಿರ ರೂಗಳು ಆಗುತ್ತವೆ. ಆದರೆ ನರೇಂದ್ರ ಮೋದಿ ರವರು ದೇಶದ ಜನತೆ ನನ್ನ ಪರಿವಾರವು ಎಂಬ ನಿಟ್ಟಿನಲ್ಲಿ ಜಾತಿ ಬೇದವಿಲ್ಲದೆ ಉಚಿತವಾಗಿ ಲಸಿಕೆಗಳನ್ನು ನೀಡಿ ದೇಶದ ಜನತೆ ಜೀವವನ್ನು ಕಾಪಾಡಿದರು ಎಂದರು.
ವ್ಯಕ್ತಿಗಿಂತ ಪಕ್ಷ ಮುಖ್ಯ , ಪಕ್ಷಕ್ಕಿಂತ ದೇಶ ಮುಖ್ಯ. ಒಂದು ಓಟಿನಿಂದ ಒಂದು ಸೀಟು ಬರಲು ಸಾಧ್ಯ. ಆ ಸೀಟಿನಿಂದ ಒಂದು ಸುಭದ್ರ ಸರ್ಕಾರ ರಚನೆ ಮಾಡಲು ಸಾಧ್ಯ. ನಾವು ಜೆಡಿಎಸ್ ಪಕ್ಷಕ್ಕೆ ಮೂರು ಕ್ಷೇತ್ರದಲ್ಲಿ ಮೂಯ್ಯೀ ಹಾಕುತ್ತೇವೆ ಆದರೆ ಜೆಡಿಎಸ್ ಪಕ್ಷ ೨೫ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮೂಯ್ಯೀ ಹಾಕುತ್ತಾರೆಂದರು. ಆದ್ದರಿಂದ ದೇಶದ ಸುಭ್ರದತೆಗಾಗಿ ಎನ್ಡಿಎ ಆಭ್ಯರ್ಥಿ ಮಲ್ಲೇಶ್ಬಾಬು ರವರನ್ನ ಅತ್ಯಧಿಕ ಮತವನ್ನು ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಸಂಸದ ಮುನಿಸ್ವಾಮಿ ಮಾತನಾಡಿ ಈ ಭಾಗದಲ್ಲಿ ೨೫ ಸಾವಿರ ಎಕರೆಯಷ್ಟು ಭೂಮಿಯನ್ನು ಅರಣ್ಯ ಇಲಾಖೆಯು ರೈತರ ಭೂಮಿಯನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ನಾನು ಅನೇಕ ಹೋರಾಟ ಮಾಡಿದ್ದೇವೆ ಈ ಹೋರಾಟಕ್ಕೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೆಂಬಲ ನೀಡಿದ್ದರು. ದೇಶದ ಹಿತಕ್ಕಾಗಿ ಎನ್ಡಿಎ ಆಭ್ಯರ್ಥಿ ಗೆಲ್ಲುಸುವಂತೆ ಮನವಿ ಮಾಡಿದರು.
ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಮಾತನಾಡಿ ನೀವು ಕಾಲಿಂದನಿAದ ಹೇಳಿದರೆ ನಮ್ಮ ಅಭ್ಯರ್ಥಿ ಕೈನಿಂದ ಮಾಡುವಂತಹ ಸ್ವಭಾವ ಆದ್ದರಿಂದ ಮಲ್ಲೇಶ ಬಾಬು ರವರಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು ನನ್ನನ್ನು ಯಾವ ರೀತಿ ಗೆಲ್ಲಿಸಿದರು ಅದೇ ರೀತಿಯಾಗಿ ಮಲ್ಲೇಶ್ ಬಾಬುರವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಎನ್ಡಿಎ ಅಭ್ಯರ್ಥಿ ಮಲ್ಲೇಶ್ ಬಾಬುರವರು ಮಾತನಾಡಿ ದೇಶಕ್ಕೆ ನರೇಂದ್ರ ಮೋದಿ ರವರು ಮತ್ತೊಮ್ಮೆ ಪ್ರಧಾನಮಂತ್ರಿಗಳು ಆಗಬೇಕೆಂದು ಇಂದಿನ ಚುನಾವಣೆಯು ಕೇವಲ ದೇಶದ ಜನತೆ ನೋಡುತ್ತಿಲ್ಲ ಇಡೀ ಪ್ರಪಂಚವೇ ಕಾದು ನೋಡುತ್ತಿದೆ. ಇಂತಹ ನಾಯಕತ್ವ ದೇಶಕ್ಕೆ ಬೇಕಾಗಿದೆ ಪ್ರಪಂಚದ ನಾಯಕರು ಮೋದಿ ಅವರಿಗೆ ಮತ ಹಾಕಲು ಕೇವಲ ನಮಗೆ ಮಾತ್ರ ಅದೃಷ್ಟವಂತರು . ಕೋಲಾರಕ್ಕೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾಡಬೇಕು ಎಂದು ನನ್ನ ಯೋಜನೆಯಲ್ಲಿ ಇದೆ ಹಾಗೂ ರೈತರಿಗೆ ಉದ್ಯೋಗ ಬೇಕಾದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವ ಸರ್ಕಾರ ಬರಬೇಕು ನಾನು ಈಗಾಗಲೇ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಅತೀ ಕಡಿಮೆ ಅಂತರದಲ್ಲಿ ಸೋತಿದ್ದೇನೆ ಇಂದು ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ಮಾಡಿದರು.
ಯಲ್ದೂರು, ಹೋಳೂರು, ದಳಸನೂರು, ಸುಗುಟೂರು ಗಳಲ್ಲಿ ಅಭ್ಯರ್ಥಿ ಮತಯಾಚನೆ ಮಾಡಿದರು. ಎಂಎಲ್ಸಿ ಗೋವಿಂದರಾಜು, ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ, ಜೆಡಿಎಸ್ ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ತಾಲೂಕು ಬಿಜೆಪಿ ಅಧ್ಯಕ್ಷ ರೋಣೂರು ಚಂದ್ರಶೇಖರ್, ಎಪಿಎಂಸಿ ಮಾಜಿ ನಿರ್ದೇಶಕ ಸುಗುಟೂರು ಚಲಪತಿ,ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಇಂದಿರಾಭವನ್ ರಾಜಣ್ಣ, ಶ್ರೀನಿವಾಸ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗೊತ್ಗುಂಟೆ ಕೃಷ್ಣಾರೆಡ್ಡಿ, ಮುಖಂಡರಾದ ಕೆ.ವಿ.ಶಿವಾರೆಡ್ಡಿ, ಎಸ್.ಬಿ.ಮುನಿವೆಂಕಟಪ್ಪ, ಎಸ್ಎಲ್ಎನ್ ಮಂಜುನಾಥ್, ಗಣೇಶ್, ಬ್ಯಾಲಹಳ್ಳಿ ಶಂಕರೇಗೌಡ, ಕೃಷ್ಣಾರೆಡ್ಡಿ, ಯಲ್ದೂರು ಮಣಿ, ಹೊಸಹಳ್ಳಿ ಬಾಬು, ಷೋರೂಂ ನಾರಾಯಣಸ್ವಾಮಿ , ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಎನ್. ನಾರಾಯಣಗೌಡ ಹಾಗು ಕಾರ್ಯಕರ್ತರು ಇದ್ದರು.
ಪಿತೃಗಳಿಗೆ ಪಿತೃ ಭಕ್ತಿ ತೋರುವುದಾದರೂ ಹೇಗೆ” –ಕಾಡುವ ಪ್ರಶ್ನೆಗೆ ವಿಲಿಯಮ್ ಶೇಕ್ಸ್ ಪಿಯರ್ ಉತ್ತರ
ರಚನೆ:- ಬಿ.ಆರ್. ರವೀಂದ್ರ, ವಕೀಲರು ಮತ್ತು ಸಾಹಿತಿಗಳು ಕೋಲಾರ.
ಈಗ ಸಮಾಜದಲ್ಲಿ ತಂದೆ ತಾಯಿಗಳಿಗೆ ತಮ್ಮ ವೃದ್ಧಾಪ್ಯದಲ್ಲಿ ಯಾರು ಚೆನ್ನಾಗಿ ನೋಡಿಕೊಳ್ಳಬಹುದು ಎನ್ನುವ ಅನುಮಾನದ ದೃಷ್ಟಿಯಿಂದ ಕಾಣುವುದು ಹೆಚ್ಚಾಗಿ ಮಕ್ಕಳ ಮನದಲ್ಲಿ ಮೂಡುವ ಪ್ರಶ್ನೆ ಪಿತೃಗಳಿಗೆ ಪಿತೃ ಭಕ್ತಿ ತೋರುವುದಾದರೂ ಹೇಗೆ? ಎಂದು, ಸಾಧಾರಣವಾಗಿ ಸಮಾಜದಲ್ಲಿ ಒಟ್ಟು ಕುಟುಂಬಗಳು ಮರೆಯಾದ ನಂತರ ಪೋಷಕರಿಗೆ ಈ ರೀತಿಯ ಭಯ, ಆತಂಕ ಇರುವ ಮಕ್ಕಳಲ್ಲಿ ಸಾಕುವವರು ಯಾರು? ಬಿಟ್ಟು ಹೋಗುವವರು ಯಾರು? ಹೀಗೆ ಹಲವಾರು ಚಿಂತೆ, ಆಲೋಚನೆಗಳಲ್ಲಿ ಬಿದ್ದು ಮಾತಿನ ಮೋಸದ ಜಾಲಕ್ಕೆ ಸಿಲುಕಿ ಮೋಸ ಹೋಗುತ್ತಾರೆ. ಆಗ ಪ್ರಾಮಾಣಿಕ ಮಕ್ಕಳಲ್ಲಿ ಮೂಡುವ ಪ್ರಶ್ನೆ “ಪಿತೃಗಳಿಗೆ ಪಿತೃ ಭಕ್ತಿ ತೋರುವುದಾದರೂ ಹೇಗೆ”? ಎಂದು.
ಈ ವಿಚಾರವನ್ನು ಈಗ ಏಕೆ ಪ್ರಸ್ತಾಪ ಮಾಡುತ್ತಿದ್ದೇನೆ ಎಂದರೆ, ಮೊದಲು ಹೆಚ್ಚಾಗಿ ತಂದೆ ತಾಯಂದಿರು ತಮ್ಮ ಆಸ್ತಿಯನ್ನು ಮಕ್ಕಳಿಗೆ “ವಿಲ್” (ಮರಣ ಶಾಸನ) ಪತ್ರದ ಮೂಲಕ ಅಂದರೆ ತಮ್ಮ ಮರಣಾನಂತರ ತಮ್ಮ ಆಸ್ತಿ ತಮ್ಮ ಮಕ್ಕಳಿಗೆ ಸೇರತಕ್ಕದ್ದು ಎಂದು ಬರೆದುಕೊಡುತ್ತಿದ್ದರು, ಸರಿಯಾಗಿ ಮಕ್ಕಳು ನೋಡಿಕೊಳ್ಳದಿದ್ದರೆ ವಿಲ್ ಪತ್ರವನ್ನು ರದ್ದುಮಾಡುತ್ತಿದ್ದರು, ಆದರೆ ವಿಲ್ ಪತ್ರದ ಮೂಲಕ ಹಕ್ಕು ಪಡೆಯುವಲ್ಲಿ ಸಾಕಷ್ಟು ತೊಡಕುಗಳು ಇರುವುದನ್ನು ಅರಿತ ಮಕ್ಕಳು ಈಗ ತಕ್ಷಣವೇ ಹಕ್ಕು ವರ್ಗಾವಣೆಯಾಗುವ “ದಾನ ಪತ್ರ”, “ಹಕ್ಕು ಬಿಡುಗಡೆ ಪತ್ರ” “ವಿಭಾಗ ಪತ್ರದ” ಮೂಲಕ ಆಸ್ತಿ ಪಡೆದು ನಂತರ ಬರೆದುಕೊಟ್ಟವರನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಇತ್ತೀಚೆಗೆ ಹಿರಿಯ ವಯಸ್ಕರು “ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ಕಲ್ಯಾಣ ಅಧಿನಿಯಮ 2007” ರ ಅಡಿಯಲ್ಲಿ ಸಲ್ಲಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕಾಯ್ದೆಯ ಉದ್ದೇಶ ಹಿರಿಯ ನಾಗರೀಕರಿಂದ ಪಾಲನೆ ಮಾಡುವುದಾಗಿ ನಂಬಿಸಿ ಮೋಸ ಮಾಡಿ ಆಸ್ತಿ ಬರೆಸಿಕೊಂಡು ನಂತರ ಅವರನ್ನು ಪಾಲನೆ ಮಾಡದೆ ನಿರ್ಲಕ್ಷ್ಯ ಮಾಡಿದವರಿಂದ ಆಸ್ತಿಯನ್ನು ಪುನಃ ಅಂತಹ ಹಿರಿಯ ನಾಗರೀಕರಿಗೆ ಕೊಡಿಸುವುದು ಹಾಗೂ ಹಿರಿಯ ನಾಗರೀಕರ ಜೀವನ ಮತ್ತು ಭದ್ರತೆಗಾಗಿ ಜೀವನಾಂಶ ಕೊಡಿಸುವುದರ ಮೂಲಕ ಹಿರಿಯ ನಾಗರೀಕರಿಗೆ ಜೀವನ ಭದ್ರತೆಯನ್ನು ಒದಗಿಸುವುದಾಗಿದೆ.
ಸಾಕಷ್ಟು ಪ್ರಕರಣಗಳ ವಿಚಾರಣೆಯನ್ನು ಕಂಡಾಗ ಗಮನಿಸಿದ ಅಂಶವೆಂದರೆ, ಹೆಚ್ಚು ಮಕ್ಕಳಿರುವ ಪೋಷಕರು ಹಾಗೂ ಕೆಲವೊಮ್ಮೆ ಒಬ್ಬರೇ ಮಗ ಅಥವಾ ಮಗಳು ಇರುವ ಪೋಷಕರು ಸಹ ತಮ್ಮ ವೃದ್ಧಾಪ್ಯದಲ್ಲಿ ಯಾರು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುಬಹುದು ಎನ್ನುವ ಗೊಂದಲದಲ್ಲಿ ಆ ಕ್ಷಣದಲ್ಲಿ ಯಾರು ತಮ್ಮನ್ನು ಸಿಹಿಯಾದ ಮಾತುಗಳಿಂದ ಬೆರಗು ಮಾಡುತ್ತಾರೋ, ತಿಂಡಿ ತಿನಿಸು ಕೊಡಿಸಿ ಬಣ್ಣದ ಮಾತನಾಡಿದವರಿಗೆ ನಂಬಿ ಆಸ್ತಿ ಬರೆದುಕೊಟ್ಟು, ಆ ನಂತರ ಆಸ್ತಿ ಕೈ ಸೇರಿದ ತಕ್ಷಣ ಆ ಮಗ ಅಥವಾ ಮಗಳು ಆ ವೃದ್ಧರನ್ನು ಮನೆಯಿಂದ ಹೊರ ಹಾಕಿದಾಗ ಬೇರೆ ದಾರಿ ಕಾಣದೆ ಈ ಮೊದಲು ಯಾರು ತಮ್ಮನ್ನು ಸಾಕುವುದಿಲ್ಲ ಎಂದು ನಿರ್ಲಕ್ಷ್ಯ ಮಾಡಿದ್ದರೋ, ಯಾರಿಗೆ ಆಸ್ತಿಯನ್ನು ಬರೆದುಕೊಟ್ಟಿರುವುದಿಲ್ಲವೋ ಅಂತಹ ಮಕ್ಕಳ ಬಳಿ ಆಶ್ರಯ ಪಡೆಯುತ್ತಾರೆ, ಆಗ ತಾವು ಮೊದಲು ಮೋಸಹೋಗಿದ್ದೇವೆ ಎಂದು ಜ್ಞಾನೋದಯವಾಗಿ ಈ ಕಾಯ್ದೆಯ ಅಡಿಯಲ್ಲಿ ಮೋಸ ಮಾಡಿದ ಮಕ್ಕಳ ಮೇಲೆ ದಾವೆಯನ್ನು ಹೂಡುತ್ತಾರೆ.
ಈ ರೀತಿಯ ಪ್ರಕರಣ, ಸನ್ನಿವೇಶ ಕಂಡಾಗಲೆಲ್ಲಾ ನನಗೆ ಮೂಡುವ ಪ್ರಶ್ನೆ, ಪಿತೃಗಳಿಗೆ ಪಿತೃ ಭಕ್ತಿ ತೋರುವುದಾದರೂ ಹೇಗೆ? ಎಂದು. ಏಕೆಂದರೆ ಕೇವಲ ಬಣ್ಣದ ಮಾತುಗಳನ್ನು ಜನ ನಂಬಿದರೆ ಹೇಗೆ?, ಎಲ್ಲಾ ಮಕ್ಕಳು ತಡಬಡ ಮಾತಾಡುವುದಿಲ್ಲ, ತಮ್ಮಲ್ಲಿ ಆಂತರೀಕವಾಗಿ ಅಡಗಿರುವ ಪ್ರೀತಿಯನ್ನು ಎಲ್ಲರಂತೆ ವ್ಯಕ್ತಪಡಿಸುವುದಿಲ್ಲ, ಕೆಲವರು ಸೂಕ್ಷ್ಮ ಮತಿಗಳಾಗಿರುತ್ತಾರೆ. ಒಳಗೇ ತಮ್ಮ ತಂದೆ ತಾಯಿಗಳನ್ನು ಅಪಾರವಾಗಿ ಪ್ರೀತಿಸುತ್ತಾರೆ, ಆದರೆ ಆ ಪ್ರೀತಿಯನ್ನು ವ್ಯಕ್ತಪಡಿಸಲು ಆಗುವುದಿಲ್ಲ, ನಾನು ಕೆಲವು ದಿನಗಳ ಹಿಂದೆ ಓದಿದ ವಿಚಾರ ಒಬ್ಬ ಮಗ ತನ್ನ ತಾಯಿಯನ್ನು ಸೈಕಲ್ ನಲ್ಲಿ ಕೂರಿಸಿಕೊಂಡು ದೇಶದ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಸಿದ ಸಂಗತಿ, ಹಾಗೆಯೇ ಇತ್ತೀಚೆಗೆ ಮಧ್ಯಪ್ರದೇಶದ ಉಜ್ಜಯಿನಿಯ ರೌನಕ್ ಗುರ್ಜರ್ ತನ್ನ ತಾಯಿಗೆ ತನ್ನ ತೊಡೆಯ ಚರ್ಮದಿಂದ ಪಾದರಕ್ಷೆ ತಯಾರಿಸಿಕೊಟ್ಟ ವಿಚಾರ. ಬಹಳ ಹಿಂದೆ ಅಂದರೆ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನ ಕಾಲದಲ್ಲಿ ಬಸವಣ್ಣನಿಗೆ ಹರಳಯ್ಯನವರು ತಮ್ಮ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ತಾಯಾರಿಸಿಕೊಟ್ಟ ಪ್ರಸಂಗವನ್ನು ಕೇಳಿದ್ದೇವೆ, ಆದರೆ ಅಂತಹ ವ್ಯಕ್ತಿ ಮತ್ತು ಪ್ರಸಂಗ ಇಪ್ಪತ್ತೊಂದನೆಯ ಶತಮಾನದಲ್ಲಿ ಸಹ ಮರಕಳಿಸಿರುವುದು ನಿಜಕ್ಕೂ ತುಂಬಾ ಅಚ್ಚರಿಯ, ಅಪರೂಪದಲ್ಲಿ ಅಪರೂಪದ ಘಟನೆಯಾಗಿದೆ. ಆದರೆ ಎಲ್ಲರೂ ಈ ರೀತಿ ತಮ್ಮ ಪಿತೃ ಪ್ರೇಮವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ, ಹಾಗೆಯೇ ಪುರಾಣಗಳಲ್ಲಿ ಬರುವ ಶ್ರವಣಕುಮಾರನಂತೆ ತನ್ನ ತಂದೆ ತಾಯಿಯ ಸೇವೆ ಮಾಡಲೂ ಆಗುವುದಿಲ್ಲ. ಆಧುನಿಕ ಯುಗಕ್ಕೆ ತಕ್ಕಂತೆ, ತಮ್ಮ ತಮ್ಮ ಕೆಲಸದ ಒತ್ತಡದ ನಡುವೆಯೂ ತಮ್ಮ ಪೋಷಕರನ್ನು ಪ್ರೀತಿಸುವವರು ಇದ್ದಾರೆ, ಆದರೆ ಅವರಿಗಿಂತ ಬಿಡುವಾಗಿ ಇದ್ದು ಬಣ್ಣದ ಮಾತಾಡಿ, ಚಾಡಿ ಹೇಳುವುದರ ಮೂಲಕ ವೃದ್ಧರನ್ನು ವಂಚಿಸುವವರು ಇದ್ದಾರೆ ಹೀಗೆ ವಂಚಿಸಿದ ಪ್ರಸಂಗದ ಬಗ್ಗೆ ನನಗೆ ಬಹಳ ಕಾಡಿದ, ಬಹಳ ದಿನಗಳ ಹಿಂದೆ ನಾನು ಓದಿದ ಕೃತಿ “ಕಿಂಗ್ ಲಿಯರ್” ಅದು ಬಹಳ ಸ್ವಾರಸ್ಯಕರವಾಗಿದೆ.
ಪಿತೃಗಳಿಗೆ ಪಿತೃ ಭಕ್ತಿ ಹೇಗೆ ತೋರಿದರೆ ಪೋಷಕರು ಬಹಳ ಬೇಗ ನಂಬುತ್ತಾರೆ ಮುಂದಿನ ದುರಂತಕ್ಕೆ ಹೇಗೆ ಕಾರಣವಾಗುತ್ತಾರೆ ಎನ್ನುವುದಕ್ಕೆ ಉತ್ತರ ವಿಲಿಯಮ್ ಶೇಕ್ಸ್ ಪಿಯರ್ ರವರ ಪ್ರಸಿದ್ಧ ದುರಂತ ನಾಟಕ “ಕಿಂಗ್ ಲಿಯರ್” ಈ ನಾಟಕದಲ್ಲಿ ಬರುವ ತಂದೆಯ ಪಾತ್ರ ತನ್ನ ಮಕ್ಕಳು ತನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂದು ತಿಳಿದುಕೊಳ್ಳಲು ಹೋಗಿ ಮೋಸ ಹೋದ ದುರಂತ ಪ್ರಸಂಗ. ಬ್ರಿಟನ್ ರಾಜ ಕಿಂಗ್ ಲಿಯರ್ ತನ್ನ ವೃದ್ಧಾಪ್ಯದಲ್ಲಿ ತನ್ನ ಮೂರು ಜನ ಮಕ್ಕಳಿಗೆ ರಾಜ್ಯವನ್ನು ಹಂಚಲು ತೀರ್ಮಾನಿಸುತ್ತಾನೆ. ಆದರೆ ಹಂಚುವ ಮುನ್ನ ತನ್ನನ್ನು ಯಾರು ಹೆಚ್ಚು ಪ್ರೀತಿ ಮಾಡಿದರೆ ಅವರಿಗೆ ಮಾತ್ರ ರಾಜ್ಯ ಹಂಚಲು ನಿರ್ಧರಿಸುತ್ತಾನೆ. ಅದರಂತೆ ತನ್ನ ಮಕ್ಕಳು ಗೊನೆರಿಯಲ್ , ರೇಗನ್ ಮತ್ತು ಕಾರ್ಡೆಲಿಯಾ ರವರನ್ನು ಕರೆದು ನನ್ನನ್ನು ಯಾರು ಅತ್ತ್ಯುತ್ತಮವಾಗಿ ಪ್ರೀತಿಸುತ್ತೀರಿ, ಅದು ಹೇಗೆ? ಎಂದು ಹೇಳಿ? ಪ್ರೀತಿಗೆ ತಕ್ಕಂತೆ ರಾಜ್ಯ ಹಂಚುವುದಾಗಿ ಹೇಳಿದಾಗ, ಆತನ ಹಿರಿಯ ಮಗಳು ಗೊನೆರಿಯಲ್ ಹೇಗಾದರೂ ನಾಟಕ ಮಾಡಿ ಹೆಚ್ಚು ಪಾಲು ಪಡೆಯಬೇಕು ಎಂದು “ತನ್ನ ತಂದೆಯನ್ನು ಪದಗಳಲ್ಲಿ ವರ್ಣಿಸಲಾಗದಷ್ಟು ಪ್ರೀತಿಸುತ್ತೇನೆ, ಆತ ತನ್ನ ಕಣ್ಣುಗಳ ಬೆಳಕಿಗಿಂತ ಹೆಚ್ಚು ಪ್ರಿಯ” ಎಂದು ವರ್ಣಿಸಿದಳು. ಈ ಮಾತುಗಳಿಂದ ಸಂತೃಪ್ತನಾದ ಅರಸ ತನ್ನ ರಾಜ್ಯದ ಮೂರನೇ ಒಂದು ಭಾಗವನ್ನು ಕೊಡುತ್ತಾನೆ, ತನ್ನ ಮೇಲಿನ ಪ್ರೀತಿ ವ್ಯಕ್ತಪಡಿಸಲು ತನ್ನ ಎರಡನೆ ಮಗಳು ರೇಗನ್ ಗೆ ಕೇಳುತ್ತಾನೆ, ಆಗ ರೇಗನ್ ತಾನು ಮಾತುಗಳಲ್ಲಿ ಅಕ್ಕನನ್ನು ಮೀರಿಸಬೇಕು ಎಂದು ಯೋಚಿಸಿ “ತಾನು ತನ್ನ ತಂದೆಯನ್ನು ತನ್ನ ಅಕ್ಕ ಪ್ರೀತಿಸಿದಕ್ಕಿಂತ ಹೆಚ್ಚಾಗಿ ಪ್ರೀತಿಸುವೆ, ತನ್ನ ತಂದೆಗಿಂತ ಬೇರೆ ಸುಖ ಸಂತೋಷ ಈ ಪ್ರಪಂಚದಲ್ಲಿ ಇಲ್ಲ” ಎಂದು ಹೇಳುತ್ತಾಳೆ. ಇದರಿಂದ ಮತ್ತಷ್ಟು ಸಂತೋಷಗೊಂಡ ರಾಜ ತನ್ನ ಎರಡನೆ ಮಗಳಿಗೆ ಮೂರನೇ ಒಂದು ಭಾಗ ನೀಡುತ್ತಾನೆ. ಈಗ ಮೂರನೆ ಮಗಳು ತನ್ನನ್ನು ಇನ್ನಷ್ಟು ಮಾತಿನಿಂದ ಖುಷಿಪಡಿಸಬಹುದು ಎಂದು ತನ್ನ ಕಡೆಯ ಮಗಳು ಕಾರ್ಡೆಲಿಯಾಳನ್ನು ಕೇಳುತ್ತಾನೆ, ಆಕೆ ತನ್ನ ಅಕ್ಕಂದಿರಂತೆ ನಟನೆ ಮಾಡದೆ ಪ್ರಾಮಾಣಿಕವಾಗಿ “ಒಬ್ಬ ಮಗಳಾಗಿ ತಾನು ತನ್ನ ತಂದೆಯನ್ನು ಬಾಧ್ಯತಾ ಪೂರ್ವಕವಾಗಿ ಪ್ರೀತಿಸುತ್ತೇನೆ, ಹೆಚ್ಚಾಗಿಯೂ ಅಲ್ಲ, ಕಡಿಮೆಯೂ ಅಲ್ಲ”. ಎಂದು ಹೇಳುತ್ತಾಳೆ. ಅತಿಯಾದ ವರ್ಣನೆಯನ್ನು ನಿರೀಕ್ಷೆ ಮಾಡಿದ್ದ ರಾಜ ಸಪ್ಪೆ ಉತ್ತರ ಕೇಳಿ ಕೋಪಗೊಂಡು ಮಗಳನ್ನು ನಿಂದಿಸಿ ಯಾವ ಭಾಗವನ್ನು ಕೊಡದೆ ಕಳಿಸುತ್ತಾನೆ, ಆ ಉಳಿದ ಒಂದು ಭಾಗವನ್ನು ತನ್ನ ಇಬ್ಬರು ಮಕ್ಕಳಿಗೆ ಹಂಚುತ್ತಾನೆ. ರಾಜ್ಯದ ಅಧಿಕಾರ ಕಳೆದುಕೊಂಡ ಮೇಲೆ ಕಿಂಗ್ ಲಿಯರ್ ನನ್ನು ಆತನಿಂದ ರಾಜ್ಯ, ಅಧಿಕಾರ ಪಡೆದ ಇಬ್ಬರು ಮಕ್ಕಳು ಸರಿಯಾಗಿ ಸಾಕದೆ ಕೀಳಾಗಿ ಕಂಡು ಅರಮನೆಯಿಂದ ಹೊರ ಹಾಕುತ್ತಾರೆ. ಹೀಗೆ ಅಧಿಕಾರ ಅಂತಸ್ತು ಕಳೆದುಕೊಂಡು ಹುಚ್ಚನಂತೆ ಬೀದಿಗೆಬಿದ್ದ ತಂದೆಯನ್ನು ಕಡೆಗೆ ಕಾಪಾಡಲು ಯಾವ ಭಾಗವನ್ನು ಪಡೆಯದ ಕಡೆಯ ಮಗಳು ಓಡೋಡಿ ಬರುತ್ತಾಳೆ, ಆಗ ತನ್ನನ್ನು ಕ್ಷಮಿಸು ಎಂದು ಅವಳ ಕಾಲಿಗೆ ಕಿಂಗ್ ಲಿಯರ್ ಬೀಳುತ್ತಾನೆ. ಹೀಗೆ ಸಮಾಜದಲ್ಲಿ ನಿಜವಾದ ಪ್ರೀತಿಯನ್ನು ಹೃದಯದಿಂದ ಕಾಣಲಾಗದೆ ಪದಗಳಲ್ಲಿ ಹುಡುಕಲು ಹೋಗಿ ಮೋಸ ಹೋಗುತ್ತಾರೆ.
ವಯಸ್ಸಾದವರ ಚಿಂತೆ, ಚಿಂತನೆ, ಆಲೋಚನೆ ಏನೇ ಇರಲಿ, ಅವರು ಆಸ್ತಿ ನೀಡಲಿ, ನೀಡದಿರಲಿ, ಆದರೆ ಮಕ್ಕಳಾದ ನಾವು ತನ್ನ ತಾಯಿಗೆ ತನ್ನ ಚರ್ಮದಿಂದ ಚಪ್ಪಲಿ ಮಾಡಿಕೊಟ್ಟ ರೌನಕ್ ಗುರ್ಜರ್ ಹೇಳುವಂತೆ “ಸ್ವರ್ಗವು ಪೋಷಕರ ಪಾದದ ಮೇಲೆ ಇದೆ, ತಂದೆ ಸ್ವರ್ಗಕ್ಕೆ ಮೆಟ್ಟಿಲು, ತಾಯಿ ಆ ಮೆಟ್ಟಿಲು ಹತ್ತಲು ಮಾರ್ಗ ತೋರುವವಳು” ಇದನ್ನು ಅರಿಯಬೇಕು ಅಷ್ಟೇ.
ರೋಜರಿ ಕ್ರೆಡಿಟ್ ಸೊಸೈಟಿ ಒಂದು ಸಾವಿರ ಕೋಟಿ ದಾಟಿದ ಸಂಭ್ರಮ – ಸಂಸ್ಥೆಯ ಅಧ್ಯಾತ್ಮಿಕ ನಿರ್ದೇಶಕ ವಂ|ಸ್ಟ್ಯಾನಿ ತಾವ್ರೊರವರಿಗೆ ಬಿಳ್ಕೊಡುಗೆಯ ಸನ್ಮಾನ
ಕುಂದಾಪುರ, ಎ.14: 1992 ರಲ್ಲಿ ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯಿಂದ ಸ್ಥಾಪಿಸಲ್ಪಟ್ಟ ರೋಜರಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಸಂಸ್ಥೆ ಕೇವಲ 3 ದಶಕಗಳಲ್ಲಿ 1 ಸಾವಿರ ಕೋಟಿ ವ್ಯವಹಾರ ನಡೆಸಿದ್ದು, ಒಂದು ನೂತನ ಮೈಲಿಕಲ್ಲು ಆಗಿ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಸುಂದರ ಗರಿ ದೊರಕಿ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದ್ದು ಸಾಕ್ಶಿಯಾದಂತಾಗಿದೆ. ಈ ಮೈಲಿಕಲ್ಲು ಸೊಸೈಟಿಯ ಅಧ್ಯಕ್ಷರ, ನಿರ್ದೇಶಕರ, ಅಧಿಕಾರಿಗಳ, ಸಿಬಂದಿ ವರ್ಗದಲ್ಲಿ ಸಂಭ್ರಮ ನೆಲಸಿದೆ.
ಈ ಸಂಭ್ರಮವನ್ನು ಅಧ್ಯಕ್ಷರ, ನಿರ್ದೇಶಕರ, ಅಧಿಕಾರಿಗಳ, ಸಿಬಂದಿಯೊಂದಿಗೆ ಆಚರಿಸಲು ಎ.13 ರಂದು ಸೊಸೈಟಿಯ ಸ್ವ ಸಭಾಭವನದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಒಂದು ಕೋಟಿ ವ್ಯವಹಾರ ದಾಟಿದ ಹಿನ್ನೆಲೆಯಲ್ಲಿ ಸೊಸೈಟಿಯ ಬಗ್ಗೆ ಮಾತನಾಡಲು ಪತ್ರಕರ್ತ ಕೆ.ಸಿ.ರಾಜೇಶ್ ಅವರನ್ನು ವಿಶೇಷವಾಗಿ ಆಮಂತ್ರಿಸಲಾಗಿತ್ತು. ಅವರು ಸೊಸೈಟಿಯ ಆರಂಭ, ಬೆಳೆದು ಬಂದ ರೀತಿ ಎಳೆ ಎಳೆಯಾಗಿ ವಿವರಿಸಿದರು, ಕ್ರೈಸ್ತ ಸಮಾಜದ ಹಿರಿಯರು ಒಟ್ಟು ಸೇರಿ ಒಂದು ರೂಪಾಯಿ ಇಲ್ಲದೆ ಆರಂಭಿಸಿದ ಸಂಸ್ಥೆ, ಕಥೊಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷ ದಿ.ಜಿ.ಎಲ್.ಡಿಲೀಮಾ, ರೋಜರಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆಲ್ಫೊನ್ಸ್ ಲೋಬೊ ಮತ್ತು ಇತರ ನಿರ್ದೇಶಕರಿಂದ ಹಿಡಿದು ಉತ್ತಮವಾಗಿ ವ್ಯವಹರಿಸಿದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಅದಾಗ್ಯೂ ಕೆಲವು ವರ್ಷಗಳಿಂದ ಚುಕ್ಕಾಣಿ ಹಿಡಿದ ಸಂಸ್ಥೆಯ ಅಧ್ಯಕ್ಷರಾದ ಜೋನ್ಸನ್ ಡಿ ಆಲ್ಮೇಡಾ ಇವರ ತಂಡ ಸಂಸ್ಥೆ ಬಹು ಬೇಗನೆ ಬೆಳೆಯುವಲ್ಲಿ ದಾಪುಕಾಲು ಹಾಕಿ, ಸಂಸ್ಥೆಗಳ ಶಾಖೆಗಳ ಸಂಖ್ಯೆ ದ್ವಿಗುಣವಾಗಿ ಬೆಳೆಯುತ್ತಾ, ಇದೀಗ ಕುಂದಾಪುರ ತಾಲೂಕಿನ ಹೊರಗೆಯು ತೆರೆದುಕೊಂಡು 12 ಶಾಖೆಗಳನ್ನು ಸ್ಥಾಪಿಸಿ ಉಡುಪಿ ಜಿಲ್ಲೆಯಾದ್ಯಂತ ಸೊಸೈಟಿ ಹೆಮ್ಮರವಾಗಿ ಬೆಳೆದು ನಿಂತಿದೆ.
ಒಂದು ಕಾಲದಲ್ಲಿ ಹಣವಿಲ್ಲದೆ ಆರಂಭವಾದ ಸಂಸ್ಥೆ, ಇಂದು 1 ಸಾವಿರ ಕೋಟಿ ವ್ಯವಹಾರ ನಡೆದು, ಹೆಮ್ಮರವಾಗಿ ಬೆಳೆದು ನಿಂತಿರಬೇಕಿದ್ದರೆ ಬ್ಯಾಂಕಿನ ಅಧ್ಯಕ್ಷರ, ನಿರ್ದೇಶಕರುಗಳ, ಸಂಸ್ಥೆಯ ಅಧಿಕಾರಿಗಳ, ಸಿಬಂದಿ ವರ್ಗದವರ ತ್ಯಾಗ ಸೇವೆ ಕಾರಣವಾಗಿದೆ. ಈ ಸಂಸ್ಥೆ ಆರಂಭ ಮತ್ತು ಬೆಳವಣಿಗೆಯನ್ನು ನೋಡಿ ಇತರರಿಗೆ ಇದು ಪ್ರೇರಣೆಯಾಗಿ ಇತರರು ಅನೇಕ್ ಸೊಸೈಟಿಗಳನ್ನು ಆರಂಭಿಸಿದರು, ರೋಜರಿ ಸೊಸೈಟಿಯ ಬೆಳವಣಿಗೆಯಿಂದ ಒಂದು ಹೊಸ ಶಕೆ ಆರಂಭ ಆಯಿತು. ಅಧ್ಯಕ್ಷರ ಮತ್ತು ನಿರ್ದೇಶಕರ ಚಿಂತನೆ, ಯೋಜನೆಗಳಿಂದ ರೋಜರಿ ಸೊಸೈಟಿಯ ಬೆಳವಣಿ ಆಗಿತು ಎಂಬುದರಲ್ಲಿ ಸತ್ಯವಿದೆ, ಕೇವಲ ಚಿಂತನೆ ಯೋಜನೆಗಳಿಂದ ಸಂಸ್ಥೆಗಳ ಸಫಲವಾಗುವುದಿಲ್ಲ, ಅದನ್ನು ಅಧಿಕಾರಿ ವರ್ಗ, ಸಿಬಂದಿ ವರ್ಗ ಪ್ರಯತ್ನ ಪಟ್ಟು ಕಾರ್ಯಘತ ಮಾಡಬೇಕಿದೆ, ಇದು ಇಲ್ಲಿ ಆಗಿದೆ. ಇನ್ನೂ ಕೂಡ ಬೆಳೆಯುವಲ್ಲಿ ಆಲೋಚನೆಗಳು ಚಿಂತನೆಗಳು ಮಾಡಬೇಕಾಗಿದೆ’ ಎಂದು ಹೇಳಿ ಅವರು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು, ರೋಜರಿ ಸೊಸೈಟಿಯ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಸ್ಟ್ಯಾನಿ ತಾವ್ರೊ ಇವರಿಗೆ ಸದ್ಯದಲ್ಲೆ ವರ್ಗಾವಣೆ ಇರುವುದರಿಂದ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಎಲ್.ಸಿಡಿ ಟಿವಿಯನ್ನು ಕಾಣಿಕೆಯಾಗಿ ನೀಡಲಾಯಿತು. ಸೊಸೈಟಿಯ ನಿರ್ದೇಶಕ ವಿಲ್ಸನ್ ಡಿಸೋಜಾ ಫಾ|ಸ್ಟ್ಯಾನಿಯವರ ಧಾರ್ಮಿಕ ಬದುಕಿನ ಚಿತ್ರಣವನ್ನು ಮುಂದಿಟ್ಟರು.
ಸನ್ಮಾನಕ್ಕೆ ಉತ್ತರವಾಗಿ ಫಾ|ಸ್ಟ್ಯಾನಿ ತಾವ್ರೊ “ರೋಜರಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಲಿ. ಕುಂದಾಪುರ, ಇಂದು ಬೆಳೆಯುತ್ತಾ, 1 ಕೋಟಿ ವ್ಯವಹಾರ ದಾಟಿ ಹೊಸ ದಾಖಲೆ ಮಾಡಿದೆ, ಇದು ರೋಜರಿ ಮಾತೆಯ ಆಶಿರ್ವಾದ ಮತ್ತು ಬ್ಯಾಂಕಿನ ಅಧ್ಯಕ್ಷರ, ನಿರ್ದೇಶಕರುಗಳ, ಸಂಸ್ಥೆಯ ಅಧಿಕಾರಿಗಳ, ಸಿಬಂದಿ ವರ್ಗದವರ ಸೇವೆ ಅದರ ಹಿಂದಿದೆ. ವಾಹನವು ಘಾಟಿಯಲ್ಲಿ ಹಲವು ಕಶ್ಟದ ತಿರುವುಗಳನ್ನು ಸಾಗಿ ತಿರುವುಗಳು ಮುಗಿದ ನಂತರ ವಾಹನವು ನಿರಾಂತಕವಾಗಿ ಸಾಗಬಹುದು, ಹಾಗೇ ಸೊಸೈಟಿ ಹಲವರು ಕಶ್ಟ ಸಾಹಸದ ನಡುವೆ, ಈಗ ಬೆಳೆದಿದೆ, ಈಗ ಸೊಸೈಟಿ ನಿರಾಂತಕವಾಗಿ ಸಾಗಿ ಇನ್ನು ಹಲವು ಸಾವಿರ ಕೋಟಿಗಳ ವ್ಯವಹಾರ ನಿರ್ಮಿಸಿ ಸಮಾಜದ ಏಳಿಗಾಗಿ ಶ್ರಮಿಸಲಿ ಎಂದು ಹರಸುತ್ತಾ, ಸನ್ಮಾನಕ್ಕೆ ಉತ್ತರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ.ಅಶ್ವಿನ್ ಆರಾನ್ನ ಶುಭ ಕೋರಿ, ಭೋಜನದ ಮೇಲೆ ಆಶಿರ್ವಾದಿಸಿದರು.
ಸಂಸ್ಥೆಯ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ಸ್ವಾಗತಿಸಿ ಸಂಸ್ಥೆಯ ಆಗು ಹೋಗುಗಳನ್ನು ತಿಳಿಸಿ 1 ಸಾವಿರ ಕೋಟಿ ವ್ಯವಹಾರ ದಾಟಲು ಹಿಂದಿನ ನಿರ್ದೇಶಕರು, ಮತ್ತು ಇಂದು ನನ್ನ ಜೊತೆ ಇರುವ ಎಲ್ಲಾ ನಿರ್ದೇಶಕರು, ಅಧಿಕಾರಿಗಳು ಸಿಬಂದಿ ವರ್ಗದ ಸೇವೆ ಸಹಕಾರ ಕಾರಣವಾಗಿದೆಯೆಂದು ಅವರಿಗೆ ಕ್ರತ್ಞತೆಗಳನ್ನು ಸಲ್ಲಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಕಿರಣ ಲೋಬೊ ಅತಿಥಿಗಳಿಗೆ ಪುಷ್ಪ ನೀಡಿ ಗೌರವಿಸಿದರು. ವೇದಿಕೆಯಲ್ಲಿ ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ಶಾಂತಿ ಕರ್ವಾಲ್ಲೊ, ಶಾಂತಿ ಡಯಾಸ್, ವಿನೋದ್ ಕ್ರಾಸ್ಟೊ, ಒಝ್ಲಿನ್ ರೆಬೆಲ್ಲೊ, ಪ್ರಕಾಶ್ ಲೋಬೊ, ಮೈಕಲ್ ಪಿಂಟೊ, ಟೆರೆನ್ಸ್ ಸುವಾರಿಸ್, ಬ್ಯಾಪ್ಟಿಸ್ಟ್ ಡಾಯಾಸ್,ತೀಯೊದರ್ ಒಲಿವೆರಾ ಮತ್ತಿತರರು ಉಪಸ್ಥಿತರಿದ್ದರು.
ನಿರ್ದೇಶಕಿ ಡಾಯನಾ ಡಿಆಲ್ಮೇಡಾ ನಿರೂಪಿಸಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಮೇಬಲ್ ಡಿಆಲ್ಮೇಡಾ ವಂದಿಸಿದರು.