ಕೋಲಾರ,ಫೆ.2: ಮೇ ತಿಂಗಳಿನಲ್ಲಿ ಮಲೇಷ್ಯಾದ ಓಕಿನೋವಾ ಗೊಜೋ ರಿಯೋ ಇಫೋ ಕ್ರೀಡಾಂಗಣದಲ್ಲಿ ನಡೆಯುವ 20ನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಫ್ಗೆ ಅಂತರಾಷ್ಟ್ರೀಯ ಕ್ರೀಡಾಪಟು ಕೋಲಾರದ ನಿವಾಸಿ ರುಮಾನಾ ಕೌಸರ್ ಬೇಗ್ ಆಯ್ಕೆಯಾಗಿದ್ದಾರೆ.
ರುಮಾನಾ ಕೌಸರ್ ಬೇಗ್ ಕರಾಟೆ ಕ್ರೀಡೆಯಲ್ಲಿ ವಸತಿ ಶಾಲೆಗಳಲ್ಲಿ 3000 ಬಾಲಕಿಯರಿಗೆ ಆತ್ಮ ರಕ್ಷಣೆ ಕಲೆಯನ್ನು ಕರಾಟೆ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ಹೈದರಾಬಾದ್ ತೆಲಂಗಾಣ ರಾಜ್ಯದಲ್ಲಿ ನಡೆದ ಚಾಂಪಿಯನ್ಶಿಫ್ 2024ನ್ನು ಹಾಗೂ ಮೆರಿಟ್ ಸರ್ಟಿಫಿಕೇಟ್ ಸೇರಿದಂತೆ ರಾಜ್ಯ ಮಟ್ಟದಲ್ಲಿ 30 ಪದಕಗಳು ಮತ್ತು 100 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕರಾಟೆ ಟ್ರೋಫಿಗಳನ್ನು ಗಳಿಸಿದ ಸಾಧನೆಗಳ ದಾಖಲೆಯನ್ನು ಮಾಡಿದ್ದಾರೆ.
ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುವ ರುಮಾನಾ ಕೌಸರ್ ಬೇಗ್ ಇತ್ತೀಚೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಸಹ ಭಾಜನರಾಗಿದ್ದಾರೆ. ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿ ಕರಾಟೆ 2023, ಇಂಡಿಯಾ ಬುಕ್ ಆಫ್ ರೆಕಾರ್ಡ್ ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ತಂದೆ ರಶೀದ್ ಅಹಮದ್, ತಾಯಿ ಶಭಾನಾ, ಪತಿ ಕೌಸರ್ ಬೇಗ್ ಎಲ್ಲಾ ರೀತಿಯ ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.
Day: February 2, 2024
ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಹಲವು ಬಹುಮಾನ
ಕುಂದಾಪುರ (ಫೆ.02 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಿರಣ್ಸ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ವತಿಯಿಂದ ಕುಂದಾಪುರದಲ್ಲಿ ನಡೆದ ರಾಜ್ಯಮಟ್ಟದ ಇಂಟರ್ ಡೋ ಜೋ ಕರಾಟೆ ಚಾಂಪಿಯನ್ಶಿಪ್ ಕೆಡಿಎಫ್ ಕಪ್ 2024 ನಲ್ಲಿ ಭಾಗವಹಿಸಿ ಕುಮಿಟೆಯಲ್ಲಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಆರ್ಯನ್ ಕೆ, ಅರ್ನೋನ್, ಭುವನ್, ಸದ್ವಿತ್, ಮಹಮ್ಮದ್ ಶಾಝೀನ್, ಮಹಮ್ಮದ್ ನಭಾನ್, ಅಥರ್ವ, ಪ್ರತೀಕ್, ನುಝತ್ ಅಂಜುಮ್, ಧನ್ವಿತ್ ಹಾಗೂ ಅಕ್ಷಯ್ ಪ್ರಥಮ ಸ್ಥಾನವನ್ನು, ದಿಶಾ, ಶಿರಿಶ್, ತನ್ಮಯ್ ಮಹಮ್ಮದ್ ಝೈದ್, ರಶ್ವಿತ್, ಆಶಿಶ್, ಅಮೋಘ, ಅರ್ಜುನ್ ಶ್ರೇಯಸ್ ಹಾಗೂ ಪ್ರೀತಮ್ ದ್ವಿತೀಯ ಸ್ಥಾನವನ್ನು. ರಿಮಿತಾ, ಸಾನಿಧ್ಯ, ಅಭಿನ್, ಹರ್ಷಿತ್, ಪ್ರಮೀತ್, ಆರಾಧ್ಯ, ಅದ್ವಿತ್, ಸೃಜನ್, ಶ್ರೇಯನ್, ನಿವೇನ್, ಶ್ರೇಯಾ, ಮುಸೇಸ್, ಕೃತಿಕ್, ಸೃಜನ್, ಪ್ರೀತಮ್, ಆರವ್ ಹಾಗೂ ಪ್ರಥಮ್ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು. ಸಂಸ್ಥೆಯ ಕರಾಟೆ ಶಿಕ್ಷಕ ಸಂದೀಪ ತರಬೇತಿ ನೀಡಿದ್ದರು.
2024ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಡಾ| ಜೆರಾಲ್ಡ್ ಪಿಂಟೊ (ಜೆರಿ, ನಿಡ್ಡೋಡಿ) ಆಯ್ಕೆ
ಕೊಂಕಣಿ ಲೇಖಕ್ ಸಂಘ್ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಗೊಂಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ್ ಸಂಘ್ ನಿರ್ಧರಿಸಿತು.
ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
2024ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಸಾಹಿತಿ ಡಾ| ಜೆರಾಲ್ಡ್ ಪಿಂಟೊ (ಜೆರಿ, ನಿಡ್ಡೋಡಿ) ಇವರನ್ನು ಆಯ್ಕೆ ಮಾಡಲಾಗಿದೆ. ಈವರೆಗೆ, ಜೆರಿ ನಿಡ್ಡೋಡಿ ಅವರ 6 ಕಾದಂಬರಿಗಳು, 75 ಕತೆಗಳು ಹಾಗೂ 900ಕ್ಕೂ ಮೇಲ್ಪಟ್ಟು ಲೇಖನಗಳು ಕೊಂಕಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಕುಡ್ಮಿ ಕೊಂಕ್ಣಿ ಲೋಕ್ವೇದ್’ ಎಂಬ ಸಂಶೋಧನಾ ಗೃಂಥ ಹಾಗೂ ‘ವಿಸಾವ್ಯಾ ಶೆಕ್ಡ್ಯಾಚೆ ಕೊಂಕ್ಣಿ ಮ್ಹಾನ್ ಮನಿಸ್’ ಎಂಬ ಕೃತಿಯನ್ನು ಕರ್ನಾಟಕ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಪ್ರಕಟಿಸಿದ್ದಾರೆ. ಅವರು ಬರೆದ ಇನ್ನಿತರ ಪುಸ್ತಕಗಳಲ್ಲಿ ತುಜೆಂ ಶಿಕಾಪ್, ತುಜಿ ವೃತ್ತಿ, ಗ್ಯಾಲಕ್ಸಿ, ವಿಶ್ವ್ ವಿಜ್ಞಾನ್ ಪ್ರಮುಖವಾಗಿವೆ.
ಅವರಿಗೆ ಕೊಂಕ್ಣಿ ಕುಟಮ್ ಬಾಹ್ರೇಯ್ನ್ , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ದಾಯ್ಜಿ ದುಬಾಯ್, ದಿವೊ ಸಾಹಿತ್ಯ ಪ್ರಶಸ್ತಿ ಲಭಿಸಿವೆ.
‘ರಾಕ್ಣೊ’ ಸಂಪಾದಕೀಯ ಮಂಡಳಿಯ ಸದಸ್ಯರಾಗಿ, ‘ಆಮ್ಚೊ ಸಂದೇಶ್’ ಪತ್ರಿಕೆಯ ಸಂಪಾದಕರಾಗಿ, ‘ಮಿಲಾರ್ಚಿಂ ಲ್ಹಾರಾಂ’ ತ್ರೈಮಾಸಿಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕಥೊಲಿಕ್ ಸಭಾದ ಕೇಂದ್ರೀಯ ಅಧ್ಯಕ್ಷರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದ ಅವರು ಉಡುಪಿಯಲ್ಲಿ ‘ಕೊಂಕ್ಣಿ ಭಾಸ್, ಸಾಹಿತ್ಯ್ ಕಲಾ ಅನಿ ಸಾಂಸ್ಕೃತಿಕ್ ಸಂಘಟನ್’ ಎಂಬ ಸಂಘಟನೆಯನ್ನು ಸ್ಥಾಪಿಸಿ ಅನೇಕ ಕೊಂಕಣಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಎಂ.ಸಿ.ಸಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಫೆಬ್ರವರಿ 17, 2024ನೇ ಶನಿವಾರ ಸಂಜೆ 6.30ಕ್ಕೆ, ಸಂದೇಶ ಪ್ರತಿಷ್ಠಾನ, ಬಜ್ಜೋಡಿ, ಮಂಗಳೂರು, ಇಲ್ಲಿ ಜರಗಲಿರುವುದು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಸದಸ್ಯರು:
ರಿಚರ್ಡ್ ಮೊರಾಸ್ – ಸಂಚಾಲಕರು
ಡೊಲ್ಫಿ ಎಫ್. ಲೋಬೊ – ಸಮಿತಿ ಸದಸ್ಯರು
ಹೆನ್ರಿ ಮಸ್ಕರೇನ್ಹಸ್ – ಸಮಿತಿ ಸದಸ್ಯರು
ಜೆ. ಎಫ್. ಡಿಸೋಜಾ – ಸಲಹಾ ಸಮಿತಿ ಸದಸ್ಯರು