ಕುಂದಾಪುರ:ಡಿ.13 ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯ 1 ನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೇಟ್ ಕರ್ನಾಟಕ ಸ್ಟೇಟ್ ಆಸೋಸಿಸಿಯೆನ್ ಮತ್ತು ದ.ಕನ್ನಡ ಆಸೋಸಿಸಿಯೆನ್ ವತಿಯಿಂದ ಮಂಗಳೂರಿನಲ್ಲಿ ನಡೆದ 5 ನೇ ಕೆ.ಸಿ.ಎ. ಟ್ರೋಪಿಯಲ್ಲಿ ಅಂಡರ್ 7 ರ ಕೆಟಗರಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಹಾಗೆಯೇ ಮಣಿಪಾಲದಲ್ಲ್ ನಡೆದ 16 ನೇ ಕಾಲ್ಯ ದೇವರಾಯ ಶೆಣೈ ಮೆಮೊರಿಯಲ್ ಟೂರ್ನಮೆಂಟನಲ್ಲಿ 7 ನೇ ಕೆಟಗರಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಈ ಸಾಧಕನನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ.ಚಿಂತನ ರಾಜೇಶ್ ಮತ್ತು ಶಾಲೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.
Day: December 13, 2023
ಅನುದಾನ ವ್ಯಾಪಗತವಾಗದಂತೆ ನಿಗಧಿತ ಗುರಿಯನ್ನು ಸಾಧಿಸಿ – ಜಿಲ್ಲಾಧಿಕಾರಿ ಅಕ್ರಂ ಪಾಷ
ಕೋಲಾರ : ಇಲಾಖೆಗಳಿಗೆ ನಿಗಧಿಪಡಿಸಲಾಗಿರುವ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿಯಲ್ಲಿ ನೀಡಲಾಗಿರುವ ಗುರಿ ಸಾಧಿಸಿ ಆಯಾ ಸಮುಧಾಯದವರಿಗೆ ಲಭ್ಯವಾಗಬೇಕಾದ ಸೌಲಭ್ಯಗಳನ್ನು ತಲುಪಿಸುವುದು ಪ್ರತಿಯೊಬ್ಬ ಇಲಾಖೆಯ ಅಧಿಕಾರಿಗಳ ಜವಬ್ದಾರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಣದಲ್ಲಿ ನಿಗಧಿಪಡಿಸಲಾಗಿದ್ದ 2023-24ನೇ ಸಾಲಿನ ವಿವಿಧ ಇಲಾಖೆಗಳಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ 2023-ನವೆಂಬರ್ ಅಂತ್ಯಕ್ಕೆ ವೇಳೆಗೆ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಿಗಧಿಪಡಿಸಲಾಗಿರುವ ಯೋಜನೆಯಡಿ ಎಲ್ಲಾ ಇಲಾಖೆಗಳಲ್ಲಿ ಬರುವ ಸೌಲಭ್ಯಗಳನ್ನು ನಿಗಧಿತ ಸಮುಧಾಯಗಳಿಗೆ ತಲುಪುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಸರ್ಕಾರದ ನಿರೀಕ್ಷೆಗಳಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ತಮ್ಮ ಇಲಾಖೆಯ ಮುಖ್ಯಸ್ತರು ನಿಗಧಿಪಡಿಸಿರುವ ಗುರಿಯನ್ನು ಸಾಧಿಸಲು ಕ್ರಿಯಾ ಯೋಜನೆಯನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ಪ್ರಸ್ತುತ 2023ನೇ ಸಾಲಿನ ನವೆಂಬರ್ ಅಂತ್ಯದ ವೇಳೆಗೆ ವಿವಿಧ ಇಲಾಖೆಗಳಿಂದ ನಿಗಧಿಪಡಿಸಿರುವ ಗುರಿಗಳಿಗೆ ವಿಶೇಷ ಘಟಕ ಯೋಜನೆಯಡಿ ಜಿಲ್ಲೆಗೆ ಒಟ್ಟು 16739.33 ಲಕ್ಷಗಳು ಹಂಚಿಕೆಯಾಗಿದ್ದು ಒಟ್ಟು
811.89 ಲಕ್ಷಗಳು ಬಿಡುಗಡೆಯಾಗಿರುತ್ತದೆ.
ಗಿರಿಜನ ಉಪ ಯೋಜನೆಯಡಿಯಲ್ಲಿ ಒಟ್ಟು 5018.94 ಲಕ್ಷಗಳು ಹಂಚಿಕೆಯಾಗಿದ್ದು, ಒಟ್ಟು 1553.51 ಲಕ್ಷಗಳು ಬಿಡುಗಡೆಯಾಗಿರುತ್ತದೆ. ಈ ಪೈಕಿ 2023 ನವೆಂಬರ್ ಅಂತ್ಯದ ವೇಳೆಗೆ ವಿಶೇಷ ಘಟಕ ಯೋಜನೆಯಡಿ ಶೇ.71 ಹಾಗೂ ಗಿರಿಜನ ಉಪಯೋಜನೆಯಡಿ ಶೇ.68 ಮೊತ್ತದ ಅನುದಾನ ವೆಚ್ಚ ಮಾಡಲಾಗಿದೆ. ಪ್ರಸ್ತುತ 3ನೇ ತ್ರೈಮಾಸಿಕದ ಅನುದಾನದ ಬಿಡುಗಡೆಯಾಗಿದ್ದು, ಶೀಘ್ರವಾಗಿ ಶೇ.100 ರಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮ ವಹಿಸಬೇಕು. ಈ ಮೂಲಕ ರಾಜ್ಯದ ಪ್ರಗತಿಯಲ್ಲಿ ಜಿಲ್ಲೆಯ ಸಾಧನೆಯು ಉನ್ನತ ಮಟ್ಟ ತಲುಪುವಂತೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀನಿವಾಸ್, ಕೃಷಿ ಜಂಟಿ ನಿರ್ದೇಶಕಿ ಸುಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕಿ ಸೌಮ್ಯ ವರ್ಣಿಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೃಷ್ಣಮೂರ್ತಿ, ತೋಟಗಾರಿಕ ಉಪನಿರ್ದೇಶಕರಾದ ಕುಮಾರಸ್ವಾಮಿ, ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ
ಕುಂದಾಪುರ: “ವಿದ್ಯಾರ್ಥಿಗಳು ದಿನನಿತ್ಯದ ಜೀವನದಲ್ಲಿ ಮಾಡುವ ಚಟುವಟಿಕೆಗಳಲ್ಲೇ ಕಾರ್ಯಸಂಸ್ಕ್ರತಿಯನ್ನು ಬೆಳೆಸಿಕೊಳ್ಳಬೇಕು. ತಮಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಂಡು ಸ್ವಾವಲಂಬನೆ ಬೆಳೆಸಿಕೊಳ್ಳುವುದನ್ನು ವಿದ್ಯಾರ್ಥಿ ಹಂತದಿಂದಲೇ ರೂಢಿ ಮಾಡಿಕೊಳ್ಳಬೇಕು ಹಾಗೂ ತಾವು ಯಾವುದೇ ವೃತ್ತಿಯನ್ನು ಕೈಗೊಂಡರೂ ಅದನ್ನು ಶೃದ್ಧೆಯಿಂದ ಮಾಡಬೇಕು ” ಎಂದು ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ
ಶ್ರೀ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಕೆ.ಎ.ಎಸ್, ಎಡಿಶನಲ್ ಕಮೀಶನರ್, ಬಿ.ಬಿ.ಎಮ್.ಪಿ, ಬೆಂಗಳೂರು- ಇವರು ಅಭಿಪ್ರಾಯ ಪಟ್ಟರು.
ಕಾಲೇಜಿನ ಸಂಚಾಲಕರೂ, ಬೈಂದೂರಿನ ಮಾಜಿ ಶಾಸಕರೂ ಆದ ಶ್ರೀ. ಬಿ. ಎಮ್ ಸುಕುಮಾರ್ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯಾದ ಕುಂದಾಪುರ ಎಜುಕೇಶನ್ ಸೊಸೈಟಿಯ ಜೊತೆ ಕಾರ್ಯದರ್ಶಿ ಶ್ರೀ ಸುಧಾಕರ ಶೆಟ್ಟಿ ಭಾಂಡ್ಯ, ಸದಸ್ಯರಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಮತ್ತು ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಉಮೇಶ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ವಾರ್ಷಿಕ ವರದಿಯನ್ನು ವಾಚಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈ ಯವರು ಶೈಕ್ಷಣಿಕ, ಸಾಂಸ್ಕ್ರತಿಕ, ಕ್ರೀಡಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ ಸುಷ್ಮಾ ಶೆಣೈ, ಗಣಿತ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಶುಭಾ ಎಮ್, ರಸಾಯನ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಾನೀಸ್ ನತಾಶಾ ಡಿಸೋಜಾ ಹಾಗೂ ಜೀವಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ ಅಕ್ಷತಾ ಕೆ. ಎನ್ ರವರು ವಿವಿಧ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ವಿದ್ಯಾರ್ಥಿನಿಯರಾದ ಸೌಮ್ಯ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು, ನಮೃತಾ ಧನ್ಯವಾದ ಸಲ್ಲಿಸಿದರು. ಶೈಮಾ ಅತಿಥಿ ಪರಿಚಯ ಮಾಡಿದರು. ರಿಶೆಲ್ ಮತ್ತು ಮೇಘನಾ ಇವರು ಕಾರ್ಯಕ್ರಮ ನಿರೂಪಿಸಿದರು.
ತೆಕ್ಕಟ್ಟೆ:10 ಸಾವಿರ ಲಂಚ ಪಡೆದುಕೊಳ್ಳುವಾಗ ಪಿಡಿಓ ಜಯಂತ್ ನನ್ನು ಲೋಕಾಯುಕ್ತರು ಬಲೆಗೆ ಕೆಡವಿದ್ದಾರೆ
ಕುಂದಾಪುರ: ಕುಂದಾಪುರದ ತೆಕ್ಕಟ್ಟೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತರ ಬಲೆಗೆ ಕೆಡವಿದ್ದಾರೆ. ಬಸವ ವಸತಿ ಯೋಜನೆಯಲ್ಲಿ ಮಂಜೂರಾಗಿದ್ದ ಮನೆಯ ಅನುದಾನ ಬಿಡುಗಡೆಗೆ ಲಂಚದ ಬೇಡಿಕೆ ಇಟ್ಟ ಆರೋಪಿ ಪಿಡಿಓ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿ ನಡೆದಿದೆ.
ಬೇಳೂರು ಗ್ರಾಮ ಪಂಚಾಯಿತಿ ಪಿ ಡಿ ಓ ಜಯಂತ್ ಎಂಬತ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಆರೋಪಿ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗೆಬೆಟ್ಟು ನಿವಾಸಿ ರಾಧಾ ಮರಕಾಲ್ತಿ ಎಂಬುವರ ಜಾಗದಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರಾಗಿದ್ದು ಅನುದಾನ ಬಿಡುಗಡೆಗೆ 10 ಸಾವಿರ ರೂಪಾಯಿ ಲಂಚ ನೀಡುವಂತೆ ಆರೋಪಿತ ಪಿಡಿಒ ಜಯಂತ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ರಾಧಾ ಮರಕಾಲ್ತಿಯವರ ಪುತ್ರಿ ಸುಜಾತ ಎಂಬುವರು ಉಡುಪಿ ಲೋಕಾಯುಕ್ತ ಇಲಾಖೆಗೆ ಲಿಖಿತ ದೂರು ನೀಡಿದ್ದರು. ದೂರನ್ನು ಆಧರಿಸಿದ ಲೋಕಾಯುಕ್ತ ಪೊಲೀಸರು ಮಂಗಳೂರು ಲೋಕಾಯುಕ್ತ ಅಧೀಕ್ಷಕ ಸಿ ಎ ಸೈಮನ್ ಅವರ ಮಾರ್ಗದರ್ಶನದಲ್ಲಿ ತೆಕ್ಕಟ್ಟೆಯ ಜಂಕ್ಷನ್ ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ.ಸೈಮನ್ ಮಾರ್ಗ ದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಕೆ.ಸಿ.ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ರಫೀಕ್ ಎಂ. ಹಾಗೂ ಸಿಬ್ಬಂದಿ ನಾಗೇಶ್ ಉಡುಪ, ರಾಘವೇಂದ್ರ, ನಾಗರಾಜ್, ರೋಹಿತ್, ಮಲ್ಲಿಕಾ, ಸತೀಶ್ ಹಂದಾಡಿ, ಅಬ್ದುಲ್ ಜಲಾಲ್, ಪ್ರಸನ್ನ ದೇವಾಡಿಗ, ರಾಘವೇಂದ್ರ ಹೊಸ್ಕೋಟೆ, ಸತೀಶ್ ಆಚಾರ್ಯ, ಸೂರಜ್ ಈ ಕಾರ್ಯಾಚರಣೆ ನಡೆಸಿದ್ದಾರೆ.
ಬಗರ್ ಹುಕುಂ ಸಾಗುವಳಿ ರೈತರ ತೆರವು ಕಾರ್ಯಾಚರಣೆ ಕೈಬಿಡಬೇಕು : ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ
ಶ್ರೀನಿವಾಸಪು: ಸರ್ಕಾರ, ಬಗರ್ ಹುಕುಂ ಸಾಗುವಳಿ ರೈತರ ತೆರವು ಕಾರ್ಯಾಚರಣೆ ಕೈಬಿಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಆಗ್ರಹಿಸಿದರು.
ಪಟ್ಟಣದ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಗರ್ ಹುಕುಂ ಸಾಗುವಳಿ ರೈತರನ್ನು ಅರಣ್ಯ ಇಲಾಖೆ ಮೂಲಕ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆಪಾದಿಸಿದರು.
ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ರೈತ ಕುಟುಂಬಗಳು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದು, ರಾಜ್ಯದ ಕೃಷಿ ಉತ್ಪಾದನೆಗೆ ದೊಡ್ಡ ಕುಡುಗೆ ನೀಡಲಾಗುತ್ತಿದೆ. ಬಹುತೇಕ ದಲಿತ, ಅತಿ ಹಿಂದುಳಿದ ವರ್ಗದ ರೈತರು ಬಗರ್ ಹುಕುಂ ಸಕ್ರಮಾತಿಗಾಗಿ ನಿಯಮಾನುಸಾರ ಅರ್ಜಿ ಸಲ್ಲಿಸಿ, ಭೂಮಿ ಹಕ್ಕಿಗಾಗಿ ಕಾದು ಕುಳಿತಿದ್ದಾರೆ. ಆದರೆ ಸರ್ಕಾರ ಈ ರೈತರ ಭೂಮಿ ಕಿತ್ತುಕೊಳ್ಳುವ ಕ್ರಮ ಅನುಸರಿಸುತ್ತಿದೆ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ಸರ್ಕಾರ ಗೋಮಾಳ ಸೇರಿದಂತೆ ಎಲ್ಲ ಬಗರ್ ಹುಕುಂ ಸಾಗುವಳಿಗೆ ಇರುವ ಅಡ್ಡಿ ನಿವಾರಿಸಬೇಕು. ಡೀಮ್ಡ್ ಅರಣ್ಯ ಎಂದು ವರ್ಗೀಕರಿಸಿರುವ ಎಲ್ಲ ಕಂದಾಯ ಭೂಮಿಯನ್ನು ಮತ್ತೆ ಕಂದಾಯ ಭೂಮಿಯಾಗಿ ಪರಿವರ್ತಿಸಬೇಕು. ಕಂದಾಯ ಭೂಮಿ ಅರಣ್ಯ ಇಂಡೀಕರಣ ರದ್ದುಪಡಿಸಬೇಕು. ಈ ಪ್ರಕ್ರಿಯೆ ನಿಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಕೆಪಿಆರ್ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಂ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ಸದಸ್ಯ ಎಸ್.ಎಂ.ನಾಗರಾಜ್ ಇದ್ದರು.
ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಶೀಘ್ರವಾಗಿ ಮುಗಿಸಿ ಜಿಲ್ಲಾಧಿಕಾರಿ ಸೂಚನೆ
ಕೋಲಾರ : ಜಿಲ್ಲೆಯಲ್ಲಿ ಒಟ್ಟು 2180 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ಒಟ್ಟು 462 ಕಟ್ಟಡಗಳು ಬಾಡಿಗೆಯ ಕಟ್ಟಡಗಳಾಗಿವೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ ನಿವೇಶನ ಲಭ್ಯತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕುವಾರು ನಿವೇಶನ ಇರುವ ಹಾಗೂ ಇಲ್ಲದೆ ಇರುವ ಅಂಗನವಾಡಿ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಜಾಗ ಇದೆಯೇ ಎಂಬ ಮಾಹಿತಿಯನ್ನು ಪಡೆದರು.
ತಮ್ಮ ಶಾಲಾ ವ್ಯಾಪ್ತಿಯಲ್ಲಿ ಇರುವ ಅಂಗನವಾಡಿ ಕಟ್ಟಡಗಳ ಬಗ್ಗೆ ಶಿಕ್ಷಣ ಇಲಾಖೆಯವರ ಜೊತೆ ಮಾತನಾಡಿ ತಮ್ಮ ಹಂತದಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿದರು.
ನಗರ ಪ್ರದೇಶ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಹೊಸ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಖಾಲಿ ಸ್ಥಳವನ್ನು ನೀಡುವಂತೆ ಹಾಗೂ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡಿರುವ ಹೊಸ ಕಟ್ಟಡಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಶಾಸಕರು ಹಾಗೂ ಸಂಸದರ ಅನುದಾನದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನಗಳ ಪಟ್ಟಿಮಾಡಿ ಮುಂದಿನ ಸಭೆಗೆ ಬರುವ ಮುನ್ನ ವರದಿಯನ್ನು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಂಶಿಕೃಷ್ಣ, ಡಿ.ಡಿ.ಪಿ.ಐ. ಕೃಷ್ಣಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸುಮ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಇಓ ಗಳು, ಸಿ.ಡಿ.ಪಿ.ಒ ಗಳು, ನಗರಸಭೆ ಹಾಗೂ ಪುರಸಭೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.