ಕೆ.ಆರ್.ರಮೇಶ್ ಕುಮಾರ್ ಪಕ್ಷ ವಿರೋಧಿ ಚಟುವಟಿಕೆ ತೊಡಗಿದ್ದಾರೆಂದು ಆಧಾರ ರಹಿತ ಆಪಾದನೆ ಮಾಡುತ್ತಿರುವ ಶೇಷಾಪುರ ಗೋಪಾಲರ ಅಮಾನತಿಗೆ ಒತ್ತಡ

ಶ್ರೀನಿವಾಸಪುರ:  ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಆಧಾರ ರಹಿತ ಆಪಾದನೆ ಮಾಡುತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಶೇಷಾಪುರ ಗೋಪಾಲ್ ಅವರನ್ನು ಆ ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕೆ.ಕೆ.ಮಂಜುನಾಥರೆಡ್ಡಿ ಆಗ್ರಹಿಸಿದರು.

  ಪಟ್ಟಣದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಿದ ಶೇಷಾಪುರ ಗೋಪಾಲ್ ಅವರಿಗೆ, ಕೆ.ಆರ್.ರಮೇಶ್ ಕುಮಾರ್ ಅಥವಾ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.

  ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕೆ.ಆರ್.ರಮೇಶ್ ಕುಮಾರ್ ಬಿಜೆಪಿ ಬೆಂಬಲಿಸಿ, ಕೆ.ಎಚ್.ಮುನಿಯಪ್ಪ ಅವರ ಸೋಲಿಗೆ ಕಾರಣರಾಗಿದ್ದಾರೆ. ಆ ಕಾರಣಕ್ಕಾಗಿ ಅವರನ್ನು ಕಾಂಗ್ರೆಸ್‌ನಿAದ ಉಚ್ಚಾಟಿಸಬೇಕು ಎಂದು ಮಾಧ್ಯಮದ ಮೂಲಕ ಆಪಾದಿಸಲಾಗಿದೆ. ಆದರೆ ಅದಕ್ಕೆ ಯಾವುದೇ ಪುರಾವೆ ಇಲ್ಲ. ರಮೇಶ್ ಕುಮಾರ್ ಅಂಥ ಕೀಳು ರಾಜಕೀಯ ಮಾಡುವವರಲ್ಲ. ಶೇಷಾಪುರ ಗೋಪಾಲ್ ಜೆಡಿಎಸ್ ಅಭ್ಯರ್ಥಿ ಜತೆ ಚುನಾವಣಾ ಪ್ರಚಾರ ಮಾಡಿದ್ದಕ್ಕೆ ಆಧಾರವಿದೆ ಎಂದು ಹೇಳಿದರು.

  ಮುಖಂಡ ದರ್ಶನ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಮತದಾರರ ತೀರ್ಪಿಗೆ ತಲೆ ಬಾಗಲೇಬೇಕು. ಯಾವುದೇ ಒಬ್ಬ ವ್ಯಕ್ತಿಯಿಂದ ಸೋಲಿಸಲು ಸಾಧ್ಯವಿಲ್ಲ. ರಮೇಶ್ ಕುಮಾರ್ ಅವರನ್ನು ನಾನೇ ಸೋಲಿಸಿದೆ ಎಂದು ಶೇಷಾಪುರ ಗೋಪಾಲ್ ಹೇಳಿಕೊಳ್ಳುತ್ತಿರುವುದು ಸರಿಯಲ್ಲ. ರಮೇಶ್ ಕುಮಾರ್ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ ಎಂದು ಹೇಳುವುದರಲ್ಲೂ ಅರ್ಥವಿಲ್ಲ. ರಮೇಶ್ ಕುಮಾರ್ ಅವರಂಥ ಬುದ್ಧಿವಂತ ಹಾಗೂ ಸಮಾಜ ಮುಖಿ ರಾಜಕಾರಣಿ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಕ್ಕೆ ಬೇಕಾಗಿದೆ. ಆ ನಿಟ್ಟಿನಲ್ಲಿ ಪಕ್ಷ ಅವರನ್ನು ವಿಧಾನ ಪರಿಷತ್‌ಗೆ ಕಳಿಸಿಕೊಡಲು ನಿರ್ಧರಿಸಿದೆ ಎಂದು ಹೇಳಿದರು.

  ಶಾಸಕರಾದವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಬೇಕಾಗುತ್ತದೆ. ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಕೆ.ಆರ್.ರಮೇಶ್ ಕುಮಾರ್ ತಮ್ಮದೇ ಆದ ಯೋಜನೆ ರೂಪಿಸಿದ್ದರು. ಕೃಷಿ, ನೀರಾವರಿ, ಆರೋಗ್ಯ ಹಾಗೂ ಸಮುದಾಯ ಅಭಿವೃದ್ಧಿಗೆ ಬಗ್ಗೆ ತಮ್ಮದೇ ಆದ ಕನಸು ಕಟ್ಟಿಕೊಂಡಿದ್ದರು. ಈ ನಿಟ್ಟಿನಲ್ಲಿ ಹಾಲಿ ಶಾಸಕರು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

  ಮುಖಂಡರಾದ ಸೀತಾರಾಮರೆಡ್ಡಿ, ಎನ್.ತಿಮ್ಮಯ್ಯ, ಗೋಪಾಲ್ ಮಾತನಾಡಿದರು.

  ಮುಖಂಡರಾದ ಕಾಂಗ್ರೆಸ್ ಜಿಲ್ಲಾ ಸಮಾಜಿಕ  ಜಾಲ ತಾಣ ಅಧ್ಯಕ್ಷ ಕೆ.ಎನ್‌ .ಶ್ರೀನಿವಾಸ್., ಕೃಷ್ಣರೆಡ್ಡಿ,ಮಂಜುನಾಥ್ ರೆಡ್ಡಿ, ಅಯ್ಯಪ್ಪ, ಸಿ.ಮುನಿವೆಂಕಟಪ್ಪ,ವಿ.ಮುನಿಯಪ್ಪ, ಉಮಾದೇವಿ, ಗೋಪಾಲ್ ,ಹರೀಶ್ ಯಾದವ್,ವೇಣು, ಇದ್ದರು.

ಕುಂದಾಪುರ ಭಾ. ರೆ. ಕ್ರಾಸ್ ಸಂಸ್ಥೆ ಮತ್ತು ಭಂಡಾರ್ಕರ್ಸ್ ಕಾಲೇಜು ಜಂಟಿ ಆಶ್ರಯದಲ್ಲಿ ವಿಶ್ವ ರಕ್ತ ದಾನಿಗಳ ದಿನಾಚರಣೆ

ಕುಂದಾಪುರ; ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಭಂಡಾರ್ಕರ್ಸ್ ಆರ್ಟ್ಸ್ & ಸಯನ್ಸ್ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ವಿಶ್ವ ರಕ್ತ ದಾನಿಗಳ ದಿನಾಚರಣೆಯನ್ನು ಜೂನ್ 14 ರಂದು ಕಾಲೇಜಿನ ಅರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾಯಿತು.

ರೆಡ್ ಕ್ರಾಸ್ ಸಭಾಪತಿ ಎಸ್. ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲರಾದ ಡಾ. ಎನ್ ಪಿ. ನಾರಾಯಣ ಶೆಟ್ಟಿ ಉದ್ಘಾಟಿಸಿ ಭಾಷಣ ಮಾಡಿದರು. ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕಿ ಕು. ವಿದ್ಯಾರಾಣಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೊಫೆಸರ್ ಸತ್ಯನಾರಾಯಣ ಶುಭ ಹಾರೈಸಿದರು. ಸಂಯೋಜಕರುಗಳಾದ – ವಿದ್ಯಾರಾಣಿ, ಸುಪ್ರೀತಾ, ಕಲಾವತಿ, ಯೋಗೀಶ್ ಶಾನುಬಾಗ್, ಶೇಖರ್ ಬಿ. ಮತ್ತು ಸತೀಶ್ ಸಾಲಿಯನ್ ಹಾಗೂ 21 ರಕ್ತ ದಾನಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಖಜಾಂಚಿ ಶಿವರಾಮ ಶೆಟ್ಟಿ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ವೆಲ್ ಪ್ಹೇರ್ ಆಫೀಸರ್ ಢಾ ಶುಭಕರ್ ಆಚಾರ್ಯ, ರೆಡ್ ಕ್ರಾಸ್ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಮತ್ತು ಸದಾನಂದ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಸೋನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಮತ್ತು ಎಲ್ಲಾ ಆಹ್ವಾನಿತರಿಗೆ ಉಪಹಾರ ನೀಡುವ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.