ಶಿರ್ವ ಸಂತ ಮೇರಿ ಮಹಾ ವಿದ್ಯಾಲಯದಲ್ಲಿ ಐಟಿ ಪ್ರಾಜೆಕ್ಟ್ ಪ್ರದರ್ಶನ

ಶಿರ್ವ:ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪೈಪೋಟಿಯು ಹೆಚ್ಚುತ್ತಿದೆ. ಭವಿಷ್ಯದ ಸವಾಲುಗಳನ್ನು ಯುವಕರು ಎದುರಿಸಬೇಕಾಗಿದ್ದಲಿ ತಮ್ಮ ಶಿಕ್ಷಣದ ಜೊತೆಗೆ ವಿವಿಧ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಕಲಿಯುವ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ ಮೂಲಕ ಐಟಿ ಪ್ರಾಜೆಕ್ಟ್ ಪ್ರದರ್ಶನ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ! ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಶುಭ ಹಾರೈಸಿದರು.

ಇಂದು ಈ ರೀತಿಯ ಅಭಿವೃದ್ಧಿಶೀಲ ಯೋಜನೆಗಳು ಮತ್ತು ಪ್ರದರ್ಶನಗಳು ವಿದ್ಯಾರ್ಥಿಗಳಿಗೆ ಉದ್ಯಮದ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ ಮತ್ತು ವಿವಿಧ ಐಟಿ ಕೌಶಲ್ಯಗಳನ್ನು ಸುಧಾರಿಸಲು ಪ್ರಾಯೋಗಿಕ ಕಲಿಕೆಯ ಮೂಲವಾಗಿದೆ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಶ್ರೀ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಅವರು ಮಾರ್ಗದರ್ಶನ ನೀಡಿ ಪ್ರಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿಪ್ರೊ ಕ್ಯಾಂಪಸ್ ಪ್ಲೇಸ್ಮೆಂಟ್ ಡ್ರೈವಲ್ಲಿ ಆಯ್ಕೆಯಾದ ಶೆಟ್ಟಿ ತರುಣ್ ರಮೇಶ್, ಶ್ರೀ ದೇವಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕೆಂಜಾರ್ ಮೇಧಾ ಫೆಸ್ಟ್ 23 ರಲ್ಲಿ ನಡೆದ ಕೋಡಿಂಗ್ ಸ್ಪರ್ಧೆಯಲ್ಲಿ ಅನೀಶ್ ಭಟ್ ಮತ್ತು ಶೆಟ್ಟಿ ವಿಶಾಲ್ ಶುಭಕರ್ ಅವರು 1500 ನಗದು ಬಹುಮಾನದೊಂದಿಗೆ ಪ್ರಥಮ ಬಹುಮಾನ ಪಡೆದ ಇವರನ್ನು ಅಭಿನಂದಿಸಲಾಯಿತು.

ಬಿಸಿಎ ವಿದ್ಯಾರ್ಥಿಗಳಿಂದ ಏರ್ಪಡಿಸಿದ ವಿವಿಧ ಐಟಿ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ದಿವ್ಯಶ್ರೀ ಬಿ, ಸುಷ್ಮಾ, ಪ್ರಕಾಶ್, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ-ಅಧ್ಯಾಪಕೇತರ ಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆಲಿಸ್ಟರ್ ಸುಜಾಯ್ ಡಿಸೋಜ, ಅನುಪ್ ನಾಯಕ ಸಹಕರಿಸಿದರು.ಕು. ಮಾನ್ವಿತ ಮತ್ತು ಬಳಗ ಪ್ರಾರ್ಥಿಸಿದರು. ಕು.ವೀಕ್ಷಾ ಶೆಟ್ಟಿ ಸ್ವಾಗತಿಸಿ, ಕು. ಅನಘ ವಂದಿಸಿದರು. ಕು. ಸಂಜನಾ ಕಾರ್ಯಕ್ರಮ ಸಂಯೋಜಿಸಿದರು.

ಎಂಐಟಿಕೆ ಮೂಡ್ಲಕಟ್ಟೆಯಲ್ಲಿ ಮಿಲಾಪ್ 2023 ಕಾರ್ಯಕ್ರಮ

ಎಂಐಟಿಕೆ ಮೂಡ್ಲಕಟ್ಟೆ ಕಾಲೇಜಿನಲ್ಲಿ ಹಳೆವಿದ್ಯಾರ್ಥಿಗಳ ಸಮ್ಮಿಲನ ಮಿಲಾಪ್ 2023” ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. 2008ರಿಂದ ಹಿಡಿದು 2022ರವರೆಗೆ ಪದವಿ ಪಡೆದ ನೂರಾರು ವಿದ್ಯಾರ್ಥಿಗಳ ಅತ್ಯುತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂರವರು ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು ಮತ್ತು ವಿದ್ಯಾರ್ಥಿಗಳ ಪದೋನ್ನತಿ ಅರಿತು ಹೆಮ್ಮೆ ವ್ಯಕ್ತಪಡಿಸಿದರು. ಉಪಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿಸೋಜ, ಡೀನ್ ಟಿಪಿಐಆರ್ ಪ್ರೊ. ಅಮೃತಮಾಲಾ, ಪ್ರೊ. ಬಾಲನಾಗೇಶ್ವರ, ಪ್ರೊ. ಸೂಕ್ಷ್ಮ ಅಡಿಗರವರು ಈ ಕಾರ್ಯಕ್ರಮ ಸಂಯೋಜಿಸಿದ್ದರು.
ಹಳೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಐಎಂಜೆ ಸಂಸ್ಥೆಗಳ ನಿರ್ದೇಶಕರಾದ ಪ್ರೋ. ದೋಮಚಂದ್ರಶೇಖರ್ರವರು ಕಾಲೇಜಿನ ಪೂರ್ವ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಅಭಿವೃದ್ಧಿಯಲ್ಲಿ ತಮ್ಮನ್ನು ಹೇಗೆ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡರು. ಹಳೆವಿದ್ಯಾರ್ಥಿಗಳಿಗಾಗಿ ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಒಟ್ಟಿನಲ್ಲಿ ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬಂದಿತು.