ಶ್ರೀನಿವಾಸಪುರ: ಹಂತ ಹಂತವಾಗಿ ತಾಲ್ಲೂಕಿನ ಎಲ್ಲ ಹೋಬಳಿಗಳ ಆಯ್ದ ಕೆರೆಗಳಿಗೆ ನೀರು ಹರಿಸುವ ಕಾರ್ಯ ಪ್ರಗತಿಯಲ್ಲಿದೆ :ಶಾಸಕ ಕೆ.ಆರ್‌.ರಮೇಶ್‌ ಕುಮಾರ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ:  ಹಂತ ಹಂತವಾಗಿ ತಾಲ್ಲೂಕಿನ ಎಲ್ಲ ಹೋಬಳಿಗಳ ಆಯ್ದ ಕೆರೆಗಳಿಗೆ ನೀರು ಹರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್ ಹೇಳಿದರು.  ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೋಚಿಮುಲ್‌ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಟ್ರಸ್ಟ್ ವಗಿಯಿಂದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ವಿವಿಧ ಸೌಲಭ್ಯ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೆರೆಗಳನ್ನು ತುಂಬಿಸಿದರೆ ಗ್ರಾಮೀಣ ಪ್ರದೆಶದಿಂದ ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುವುದು ತಪ್ಪುತ್ತದೆ ಎಂದು ಹೇಳಿದರು.  ಎತ್ತಿನ ಹೊಳೆಯಿಂದ ನೀರು ತರುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಆದರೆ ಕೆಸಿ ವ್ಯಾಲಿ ನೀರು ಫಲ ನೀಡಿದೆ. ಮುಂದಿನ ದಿನಗಳಲ್ಲಿ ನೀರಿನ ಹರಿವನ್ನು ಹೆಚ್ಚಿಸಲಾಗುವುದು. ಇದರಿಂದ ರೈತ ಮಕ್ಕಳು ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತದೆ. ರೈತರ ಬವಣೆ ರೈತರಿಗಷ್ಟೇ ಗೊತ್ತು ಎಂದು ಹೇಳಿದರು.    ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಡಿಸಿಸಿ ಬ್ಯಾಂಕ್‌ ವತಿಯಿಂದ ಸ್ತ್ರೀ ಶಕ್ತಿ ಸಂಘಗಳ ಮೂಲಕ ತಲಾ ರೂ.50 ಸಾವಿರ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಸಾಲದ ಮೊತ್ತವನ್ನು ರೂ.1 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ಅನುಕೂಲಕರವಾಗಿಲ್ಲ. ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದಾಗ ಬಡವರ ಪರ ಕಾರ್ಯಗಳಿಗೆ ಯಾವುದೇ ಅಡ್ಡಿ ಇರಲಿಲ್ಲ ಎಂದು ಹೇಳಿದರು.     ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ಮಾತನಾಡಿ, ತಾಲ್ಲೂಕಿನಲ್ಲಿ 163 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ದಿನವೊಂದಕ್ಕೆ 65 ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಸ್ವಂತ ಕಟ್ಟಡ ಇಲ್ಲದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಿಸಲು ಆರ್ಥಿಕ ನೆರವು ನೀಡಲಾಗುವುದು. ಅಗತ್ಯ ಇರುವ ಕಡೆ ಬಿಎಂಸಿ ಘಟಕಗಳನ್ನು ಪ್ರಾರಂಭಿಸಲಾಗುವುದು. ಸಾಮೂಹಿಕ ಹಾಲು ಕರೆಯುವ ಯಂತ್ರಗಳನ್ನು ಒದಗಿಸಲಾಗುವುದು. ಪಟ್ಟಣದಲ್ಲಿ ಸ್ವಂತ ಕ್ಯಾಂಪ್‌ಕಚೇರಿ ನಿರ್ಮಿಸಲಾಗುವುದು ಎಂದು ಹೇಳಿದರು.  ಈ ಸಂದರ್ಭದಲ್ಲಿ 171 ಆಶಾ ಕಾರ್ಯಕರ್ತೆಯರಿಗೆ ತಲಾ ರೂ.3000 ವಿತರಿಸಲಾಯಿತು. ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ಯಾನಿಟೈಸರ್‌, ಸ್ಯಾನಿಟೈಸರ್‌ ಸ್ಟ್ಯಾಂಡ್‌ ಹಾಗೂ ಮಾಸ್ಕ್‌ಗಳನ್ನು ವಿತರಿಸಲಾಯಿತು.  ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್‌.ವಿ.ತಿಪ್ಪಾರೆಡ್ಡಿ, ಕ್ಯಾಂಪ್‌ಕಚೇರಿ ಉಪ ವ್ಯವಸ್ಥಾಪಕ ಡಾ. ಶ್ರೀಕಾಂತ್‌, ಸಹ ವ್ಯವಸ್ಥಾಪಕ ನರಸಿಂಹಯ್ಯ, ಮುಖಂಡರಾದ ದಿಂಬಾಲ ಅಶೋಕ್‌, ವೆಂಕಟಶಿವಾರೆಡ್ಡಿ, ಮುನಿವೆಂಕಟಪ್ಪ, ಸುರೇಶ್‌ ಬಾಬು, ವೆಂಕಟರೆಡ್ಡಿ, ಕೆ.ಕೆ.ಮಂಜು, ಬಾಬುರೆಡ್ಡಿ, ಎಸ್‌.ವಿ.ಸುಧಾಕರ್‌, ಡಾ. ಶ್ರೀನಿವಾಸ್, ಎಂ.ನಾಗರಾಜ್‌, ಕೆ.ಎಚ್.ಸಂಪತ್‌ ಕುಮಾರ್‌ ಇದ್ದರ.