ಶ್ರೀನಿವಾಸಪುರದಲ್ಲಿ  ಏರ್ಪಡಿಸಿದ್ದ ಸಮರ್ಪಕ ಕಸ ವಿಲೇವಾರಿ ಅರಿವು ಕಾರ್ಯಾಗಾರವನ್ನು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಉದ್ಘಾಟಿಸಿ ಮಾತನಾಡಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ  ಏರ್ಪಡಿಸಿದ್ದ ಸಮರ್ಪಕ ಕಸ ವಿಲೇವಾರಿ ಅರಿವು ಕಾರ್ಯಾಗಾರವನ್ನು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಉದ್ಘಾಟಿಸಿ ಮಾತನಾಡಿದರು.
ಶ್ರೀನಿವಾಸಪುರ: ಮನೆಯಲ್ಲಿ ಬೀಳುವ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರು ತರುವ ವಾನದಲ್ಲಿ ಹಾಕಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಹೇಳಿದರು.
  ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ  ಏರ್ಪಡಿಸಿದ್ದ ಸಮರ್ಪಕ ಕಸ ವಿಲೇವಾರಿ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿರು.
  ಪಟ್ಟಣದ ಒಂದು ವಾರ್ಡ್‌ನಲ್ಲಿ ಈ ಬಗ್ಗೆ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇತರ ವಾರ್ಡ್‌ಗಳ ನಾಗರಿಕರು ಅನುಕರಣ ಯೋಗ್ಯ ಮಾದರಿಯನ್ನು ಅನುಸರಿಸಬೇಕು ಎಂದು ಹೇಳಿದರು.
  ಪುರಸಭೆಯ ಸ್ವಚ್ಛತಾ ರಾಯಭಾರಿ ಟಿ.ಎಸ್‌.ಮಾಯಾ ಬಾಲಚಂದ್ರ ಮಾತನಾಡಿ, ನಾಗರಿಕರು ಅನುಪಯುಕ್ತ ಪ್ಲಾಸ್ಟಿಕ್‌ ಸುಡುವ ಪರಿಪಾಠ ಬಿಡಬೇಕು. ಪ್ಲಾಷ್ಟಿಕ್‌ ಸುಡುವುದರಿಂದ ಜನ, ಜಾನುವಾರು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇಂದು ಪ್ಲಾಸ್ಟಿಕ್‌ ಸಮುದ್ರವನ್ನೂ ಮಾಲಿನ್ಯಗೊಳಿಸಿದೆ. ತಿನ್ನುವ ಉಪ್ಪಿನಲ್ಲೂ ಪ್ಲಾಸ್ಟಿಕ್‌ ಕಣಗಳು ಸೇರಿಕೊಂಡಿವೆ. ಗಾಳಿ ಹಾಗೂ ಮಳೆ ನೀರಿನಲ್ಲೂ ಪ್ಲಾಸ್ಟಿಕ್‌ ಹಾವಳಿ ಹೆಚ್ಚಿದೆ ಎಂದು ಹೇಳಿದರು.
  ನಾಗರಿಕರು ಪರಿಸರ ಸ್ನೇಹಿಯಲ್ಲದ ಪ್ಲಾಸ್ಟಿಕ್‌ ಚೀಲಗಳ ಬಳಕೆಯನ್ನು ನಿಲ್ಲಿಸಬೇಕು. ಬಟ್ಟೆ ಬ್ಯಾಗ್‌ ಸಂಸ್ಕೃತಿಯನ್ನು ಮತ್ತೆ ಪ್ರಾರಂಭಿಸಬೇಕು. ಇಲ್ಲವಾದರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಹೇಳಿದರು. 
  ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ ಮಾತನಾಡಿ, ಇದೊಂದು ಉಪಯುಕ್ತ ಕಾರ್ಯಕ್ರಮ. ಕಾರ್ಯಾಗಾರದಲ್ಲಿ ತಿಳಿದುಕೊಂಡ ವಿಷಯಗಳನ್ನು ಕಾರ್ಯರೂಪಕ್ಕೆ ತರಬೇಕು. ಪಟ್ಟಣದ ನೈರ್ಮಲ್ಯ ಕಾಪಾಡಬೇಕು. ಕಸದಿಂದ ಉಂಟಾಗುವ ಸಂಕಷ್ಟ ನಿವಾರಣೆಗೆ ನಾಗರಿಕರು ಸಹಕರಿಸಬೇಕು ಎಂದು ಹೇಳಿದರು.
  ಈ ಸಂದರ್ಭದಲ್ಲಿ ಸಮರ್ಪಕ ಕಸ ವಿಲೇವಾರಿ ಬಗ್ಗೆ ವೀಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು. ವಿಪ್ರ ಮಹಿಳಾ ಮಂಡಳಿ ವತಿಯಿಂದ ಖಾದಿಯಿಂದ ತಯಾರಿಸಿದ ಕೈ ಚೀಲಗಳನ್ನು ಬಿಡುಗಡೆ ಮಾಡಿ, ಉಚಿತವಾಗಿ ವಿತರಿಸಲಾಯಿತು.
  ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿ ರೆಡ್ಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ವಿಶ್ವನಾಥ್, ಪುರಸಭೆ ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್‌, ಪೃಥ್ವಿರಾಜ್‌, ಪರಿಸರ ಅಭಿಯಂತರ ಡಿ.ಶೇಖರ್‌ ರೆಡ್ಡಿ, ಎಂಜಿನಿಯರ್‌ ಶ್ರೀನಿವಾಸ್‌, ಶಾರದ, ವನಜಾಕ್ಷಿ, ಕಲಾ ಶಂಕರ್‌ ಇದ್ದರು.
ಶ್ರೀನಿವಾಸಪುರದಲ್ಲಿ  ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಶ್ರೀನಿವಾಸಪುರ: ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವುದರ ಮೂಲಕ ಅನಿವಾರ್ಯ ಸಂದರ್ಭದಲ್ಲಿ ಜೀವ ಉಳಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಹೇಳಿದರು.
  ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಪ್ರಯುಕ್ತ  ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಬಿಜೆಪಿ ವತಿಯಿಂದ ನಾಲ್ಕು ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ರಾಷ್ಟ್ರೋತ್ಥಾನ ರಕ್ತನಿಧಿಗೆ ರಕ್ತ ಸಂಗ್ರಹಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.
  ಡಾ. ಕೆ.ಎನ್‌.ವೇಣುಗೋಪಾಲ್‌ ಮಾತನಾಡಿ, ದೇಶದಲ್ಲಿ ರಕ್ತದ ಕೊರತೆ ಕಾಡುತ್ತಿದೆ. ಸಮಯಕ್ಕೆ ಸರಿಯಾಗಿ ಅಗತ್ಯವಾದ ರಕ್ತ ಸಿಗದೆ ಸಾವನ್ನಪ್ಪುವ ಸಂದರ್ಭಗಳೂ ಇರುತ್ತವೆ. ಇಂಥ ಪರಿಸ್ಥಿತಿಯನ್ನು ತಪ್ಪಿಸಲು ಯುವ ಸಮುದಾಯ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
  ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಸಾರ್ವಜನಿಕರು ರಕ್ತದಾನ ಮಾಡುವುದರ ಬಗ್ಗೆ ಇರುವ ತಪ್ಪು ತಿಳುವಳಿಕೆ ಬಿಡಬೇಕು. ಆರೋಗ್ಯವಂತ ಅರ್ಹ ವ್ಯಕ್ತಿ ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಕೊಟ್ಟಷ್ಟು ರಕ್ತ ಮತ್ತೆ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಅಪಘಾತ ಸಂಭವಿಸಿದಾಗ ಅಥವಾ ಇತರ ಅನಿವಾರ್ಯ ಸಂದರ್ಭದಲ್ಲಿ ಅಗತ್ಯ ಗುಂಪಿನ ರಕ್ತ ಸಿಗದಿದ್ದರೆ ಜೀವ ರಕ್ಷಣೆ ಕಷ್ಟವಾಗುತ್ತದೆ ಎಂದು ಹೇಳಿದರು.
  ಬಿಜೆಪಿ ಮುಖಂಡರಾದ ಎಂ.ಲಕ್ಷ್ಮಣಗೌಡ, ಜಯರಾಮರೆಡ್ಡಿ, ವೆಂಕಟೇಗೌಡ, ರಾಮಾಂಜಿ, ನಾಗರಾಜ್‌, ಸುರೇಶ್‌, ನಾರಾಯಣಸ್ವಾಮಿ, ಯಲ್ದೂರು ಪದ್ಮನಾಭ್‌, ಸುನಿಲ್‌ ಇದ್ದರು.
  ಶಿಬಿರದಲ್ಲಿ 100ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.