ಮಳೆಯಿಂದ ಹಾನಿಯಾಗಿರುವ ರೈತರಿಗೆ ಕೂಡಲೆ ಪರಿಹಾರ ವಿತರಿಸಿ-ಗೀತಮ್ಮ ಆನಂದರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಮಳೆಯಿಂದ ಹಾನಿಯಾಗಿರುವ ರೈತರಿಗೆ ಕೂಡಲೆ ಪರಿಹಾರ ವಿತರಿಸಿ-ಗೀತಮ್ಮ ಆನಂದರೆಡ್ಡಿ
ಕೋಲಾರ, ಜೂನ್ 17 ಮೇ ತಿಂಗಳಲ್ಲಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ಜಿಲ್ಲೆಯ ರೈತರ ಬೆಳೆ ನಷ್ಟ ಹೊಂದಿದ್ದು, ಕೂಡಲೇ ಎಲ್ಲಾ ರೈತರಿಗೂ ಪರಿಹಾರ ವಿತರಿಸುವ ವ್ಯವಸ್ಥೆ ಮಾಡುವಂತೆ ಕೃಷಿ ಮತ್ತು ತೋೀಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಮ್ಮ ಆನಂದರೆಡ್ಡಿ ಅವರು ತಿಳಿಸಿದರು.
 ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕು. ಸೌಲಭ್ಯಗಳನ್ನು ಒದಗಿಸಲುವಲ್ಲಿ ಯಾವುದೇ ರಾಜಕೀಯ ಮಾಡಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕರ್ತವ್ಯದ ವೇಳೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ವಿಜಯ್ ಕುಮಾರ್ ಅವರಿಗೆ ತಿಳಿಸಿದರು. 
 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ. ಜಗದೀಶ್ ಅವರು ಮಾತನಾಡಿ, ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಜಿಲ್ಲೆಗೆ 8 ಸ್ಥಾನ ಬಂದಿದ್ದು, ಈ ಬಾರಿ 5 ನೇ ಸ್ಥಾನದೊಳಗೆ ಬರುವಂತೆ ನೋಡಿಕೊಳ್ಳಬೇಕು. ಪ್ರತಿ ತಿಂಗಳು ಪರೀಕ್ಷೆ ನಡೆಸಿ ಮೌಲ್ಯಮಾಪನ ವರದಿಯನ್ನು ವಸ್ತುನಿಷ್ಠವಾಗಿ ನೀಡಿ ಇದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಒತ್ತು ನೀಡಿ ಫಲಿತಾಂಶವನ್ನು ಹೆಚ್ಚಿಸಬಹುದಾಗಿದೆ. ಇದೇ ಯೋಜನೆಯನ್ನು ಅನುಸರಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ 3 ನೇ ಸ್ಥಾನಕ್ಕೆ ಬಂದಿದೆ. ನಮ್ಮ ಜಿಲ್ಲೆಯಲ್ಲಿ ಪ್ರಯತ್ನ ಪಟ್ಟರೆ ಮೊದಲ ಸ್ಥಾನಕ್ಕೆ ಬರಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರದ ರತ್ನಯ್ಯ ಅವರಿಗೆ ಸೂಚಿಸಿದರು. 
 ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಗಳನ್ನು 3 ಕಂತುಗಳಲ್ಲಿ ನೀಡಲಾಗುತ್ತಿದೆ. ಈ ಯೋಜನೆಗೆ ನಮ್ಮ ಜಿಲ್ಲೆಯಿಂದ 3 ಲಕ್ಷದ 3 ಸಾವಿರ ರೈತರನ್ನು ನೊಂದಾಯಿಸಬೇಕಿದೆ. ಜೂನ್ 25 ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಜೂನ್ 25 ರೊಳಗೆ ನೊಂದಣಿಯಾದ ರೈತರಿಗೆ ಮೊದಲ ಕಂತಿನ 2 ಸಾವಿರ ಬಿಡುಗಡೆಯಾಗುತ್ತದೆ. ನೊಂದಣಿ ಅರ್ಜಿಗಳು ರೈತ ಸಂಪರ್ಕ ಕೇಂದ್ರಗಳು, ಗ್ರಾಮ ಪಂಚಾಯಿತಿಗಳು ಹಾಗೂ ಕೃಷಿ ಇಲಾಖೆಯ ಕಛೇರಿಗಳಲ್ಲಿ ದೊರೆಯುತ್ತವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 
 ಕೋಲಾರ ಜಿಲ್ಲೆಯಲ್ಲಿ ಕಳೆದ ವರ್ಷ ನಕಲಿ ಕ್ಲಿನಿಕ್‍ಗಳನ್ನು ಬಂದ್ ಮಾಡಿಸಿದ್ದು, ಇನ್ನೂ ಕೆಲವರು ಆಂಧ್ರದ ಗಡಿ ಭಾಗಗಳಲ್ಲಿ ತೆರೆದಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಂಡು ಕ್ಲಿನಿಕ್ ಬಂದ್ ಮಾಡಿಸಲು ಆಂಧ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಔಷಧಿಗಳನ್ನು ಹೊರಗಡೆಯಿಂದ ಖರೀದಿಸುವಂತೆ ಚೀಟಿಗಳನ್ನು ಬರೆದುಕೊಡುವಂತಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ಷರ ಬರದವರಿಗೆ ವಾರ್ಡನ್ ಜವಾಬ್ದಾರಿ ನೀಡಿದ್ದು, ಅವರ ಬದಲಿಗೆ ಹೊಸದಾಗಿ ನೇಮಕವಾಗಿರುವ ಅಡುಗೆಯವರು ಪಿಯುಸಿ, ಪದವಿ ಶಿಕ್ಷಣ ಪಡೆದಿದ್ದು, ಅಂತಹವರಿಗೆ ಜವಾಬ್ದಾರಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಸಿಂಧು ಅವರಿಗೆ ತಿಳಿಸಿದರು. 
 ಜಿಲ್ಲೆಯಲ್ಲಿ 24 ಪಬ್ಲಿಕ್ ಶಾಲೆಗಳು ಪ್ರಾರಂಭವಾಗಿದ್ದು, ಇಲ್ಲಿ ಈ ಹಿಂದೆ ಇದ್ದ 30 ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವನ್ನು 60 ಕ್ಕೆ ಹೆಚ್ಚಿಸಲಾಗಿದೆ. 60ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದರೆ ಅವರಿಗೂ ದಾಖಲಾತಿ ನೀಡಿ ಅವರಿಗೆ ಶಿಕ್ಷಣ ನೀಡಲು ತಗಲುವ ವೆಚ್ಚವನ್ನು ಸಿಎಸ್‍ಆರ್ ಅನುದಾನ ಅಥವಾ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಭರಿಸಲು ತೀರ್ಮಾನಿಸಲಾಗಿದೆ ಎಂದರು. 
 ಪಡಿತರ ಚೀಟಿ ಹೊಂದಿರುವ ಸದಸ್ಯರ ಬಯೋಮೆಟ್ರಿಕ್ ಪಡೆಯಲು ಆಹಾರ ಇಲಾಖೆ ವತಿಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡುತ್ತಿದ್ದು, ವಾರ್ಡ್‍ವಾರು ಅಥವಾ ಹಳ್ಳಿವಾರು ಯಾರು ಯಾವ ದಿನ ಬರಬೇಕು ಎಂದು ಪಟ್ಟಿ ಪ್ರಕಟಿಸಬೇಕು. ಇದರಿಂದ ಸಾರ್ವಜನಿಕರು ಕೆಲಸ ಬಿಟ್ಟ ದಿನವೆಲ್ಲಾ ಕಾಯುವುದು ತಪ್ಪುತ್ತದೆ. ಈ ಬಾರಿ ಕುಡಿಯುವ ನೀರಿನ ಪೂರೈಕೆಗೆ 38 ಕೋಟಿ ಹಣ ಬಿಡುಗಡೆಯಾಗಿದ್ದು, ಶಾಶ್ವತ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. 
 ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರು ಆದ ಎಂ.ಬಿ ಶ್ರೀನಿವಾಸ್ ಅವರು ಮಾತನಾಡಿ, ಬಹುತೇಕ ಶಿಕ್ಷಕರು ಪಾಠ ಮಾಡುವುದುನ್ನು ಬಿಟ್ಟು ರಾಜಕೀಯ ಮಾಡುವುದರಲ್ಲಿ ಮುಳುಗಿದ್ದಾರೆ. ರಾಜಕೀಯ ಬಿಟ್ಟು ಪಾಠ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಜಿಲ್ಲೆಯು ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಧ್ಯವಿದೆ ಎಂದರು. 
 ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು..