“ಮಗರೀಬ್” – ಇಳಿಸಂಜೆಯ ಗಜಲ್ ಗಳು” ಪುಸ್ತಕ  ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿಂಧನೂರಿನಲ್ಲಿ  ಬಿಡುಗಡೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
“ಮಗರೀಬ್” – ಇಳಿಸಂಜೆಯ ಗಜಲ್ ಗಳು” ಪುಸ್ತಕ  ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿಂಧನೂರಿನಲ್ಲಿ  ಬಿಡುಗಡೆ
ಬರೆದುಬಿಡಬಹುದಾದ ಕಾವ್ಯವೊಂದನ್ನು ಪುಸ್ತಕವನ್ನಾಗಿಸುವ ಸಂತೋಷ ಅಷ್ಟಿಷ್ಟಲ್ಲ. ಆದರೆ ಪುಸ್ತಕ ಕೈಗೆ ಬಂದಾಗ ಅದನ್ನು ಹಿಡಿದು ನೋಡುವುದು ಹಸಿ ಬಾಣಂತಿ ತನ್ನ ಮಗುವನ್ನು ಮೊದಲ ಬಾರಿಗೆ ನೋಡಿದಷ್ಟೇ ಖುಷಿ. ಏನೋ ಗೊತ್ತಿಲ್ಲ ಈ ಗಜಲ್ ಸಹವಾಸಕ್ಕೆ, ಸಾಂಗತ್ಯಕ್ಕೆ ಬಿದ್ದ ನಾನು ಅದನ್ನೇ “ಮಗರೀಬ್” – ಇಳಿಸಂಜೆಯ ಗಜಲ್ ಗಳು” ಅನ್ನೋ ಪುಸ್ತಕ ಮಾಡಲು ನಿರ್ಧರಿಸಿದ್ದು ಕೆಲವೇ ಕೆಲವು ದಿನಗಳ ಹಿಂದೆ. ಈಗಾಗಲೇ ಬರೆದಿದ್ದ ಎಲ್ಲಾ ಗಜಲ್ ಗಳನ್ನು ಅಳೆದು ತೂಗಿ ಅತ್ಯುತ್ತಮ ಎನ್ನಿಸುವ 52 ನ್ನು ಆಯ್ದು ಪುಸ್ತಕ ಮಾಡಲು ಹೊರಟಿದ್ದು 4 ದಿನಗಳ ಹಿಂದೆ..!
ನನ್ನ ಹೆಗಲ ಮೇಲಿನ ಜವಾಬ್ದಾರಿಯನ್ನು ಸಹೋದರ ಸಮಾನರಾದ ಶ್ರೀ Allagiri Raj  ಸರ್ ಮೇಲೆ ಮುನ್ನುಡಿ ಬರೆವ ನೆಪದಲ್ಲಿ ಹಾಕಿಬಿಟ್ಟೆ. ನೀವ್ ನಂಬೋದಿಲ್ಲ ಸರಿ ರಾತ್ರಿ ಒಂದು ಗಂಟೆವರೆಗೂ ಕುಳಿತು ಈ ಪುಸ್ತಕವನ್ನು ತಮ್ಮ ಮೌಲ್ಯಯುತ ಮುನ್ನುಡಿ ಸಮೇತ ರೆಡಿ ಮಾಡಿಸಿಕೊಟ್ಟರು. ಇದೇ ತಿಂಗಳು 22ಕ್ಕೆ 10 ನೇ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನನ್ನದೇ ಊರಾದ ಸಿಂಧನೂರಿನಲ್ಲಿ ನಡೆಯುತ್ತಿರುವುದರಿಂದ ಅಂದೇ ಬಿಡುಗಡೆ ಮಾಡಿಸಿಬಿಡುವ ಅವಸರದಲ್ಲಿ ಇದ್ದುದರಿಂದ ಕೇವಲ 4 ದಿನಗಳಲ್ಲಿ ಗುರು ಸಮಾನರಾದ, ದ್ರೋಣಾಚಾರ್ಯ ಶ್ರೀ ಅಲ್ಲಾಗಿರಿರಾಜ ಅವರೇ ಮುಂದೇ ನಿಂತು ಮುನ್ನುಡಿ ಬರೆದು ಪುಸ್ತಕ ರೆಡಿ ಮಾಡಿಸಿಕೊಟ್ಟಿದ್ದಾರೆ. ಅವರಿಗೆ ಮೊದಲ ಸಲಾಂ ಸಲ್ಲುತ್ತವೆ. ನಾನು ಬರೆಯುವುದನ್ನೇ ನಿಲ್ಲಿಸಿದ ಸಂದರ್ಭದಲ್ಲಿ ಈ ಮುಖಪುಸ್ತಕ ನನ್ನಲ್ಲಿ ಹೊಸ ಹುರುಪು ತುಂಬಿದೆ. ಬರೆದದ್ದನ್ನು ಓದಿ, ಬೆನ್ನು ತಟ್ಟಿ, ಬುದ್ದಿ ಮಾತು ಹೇಳಿ, ಲೈಕ್ಸ್, ಲವ್ಸ್, ಸ್ಮೈಲಿಸ್ ಜೊತೆ ಕೆಂಪು ಮುಖವನ್ನು ತೋರಿ ಸರಿದಾರಿಗೆ ತಂದಿದೆ. ಹೀಗಾಗಿ ಈ ಮೊದಲ ಸಂತಸವನ್ನು ನಿಮ್ಮೊಂದಿಗೆ ಮೊದಲು ಹಂಚಿಕೊಳ್ಳಬೇಕು ಅನ್ನೋದು ನನ್ನ ಆಸೆ.
ಮಗರೀಬ್ ಅಂದರೆ ಅದೊಂದು ಉರ್ದು ಪದ. ಇದರ ಅರ್ಥ ಕನ್ನಡದಲ್ಲಿ ‘ಇಳಿಸಂಜೆ’ ಎನ್ನುವ ಅರ್ಥವಿದೆ. ನನ್ನ ಜೀವನದಲ್ಲಿ ಇಳಿಸಂಜೆಯು ಹಲವಾರು ವಿಷಯಕ್ಕೆ ಸಾಕ್ಷಿಯಾಗಿದೆ. ನನ್ನ ಮೊದಲ ಹಸಿವು, ಪ್ರೀತಿ, ತೊರೆದ ಹುಡುಗಿ, ಕಣ್ಣೀರು, ಸುಡುವ ಬೆಂಕಿಯಂತ ನೆನಪುಗಳು ಎಲ್ಲದಕ್ಕೂ ಈ ಇಳಿಸಂಜೆ ಸಾಕ್ಷಿ ಪ್ರಜ್ಞೆಯಂತೆ ಸದಾ ನಿಂತಿದೆ. ಹೀಗಾಗಿ ಈ ಟೈಟಲ್ ನಂಗೆ ತುಂಬಾ ಅಂದ್ರೆ ತುಂಬಾ ಇಷ್ಟ ಆಗೋಯ್ತು. ಇಲ್ಲಿರುವ ಈ ಗಜಲ್ ಪುಸ್ತಕಕ್ಕೆ ಮುಖಪುಟ ಹಾಗೂ ಒಳ ಚಿತ್ರ ರಚಿಸಿಕೊಟ್ಟ ತಮ್ಮನಂಥ ಗೆಳೆಯ Arun Kumar K ಗೆ ಹೃತ್ಪೂರ್ವಕ ನೆನಿಕೆಗಳು ಸಲ್ಲುತ್ತವೆ. ಅಂದವಾಗಿ ಟೈಪಿಸಿದ ಗುರೂಜಿ Basavaraj Angadi Chalagera ಅಣ್ಣಾ Rajesab Pothnal ಇವರೆಲ್ಲರೂ ಇದಕ್ಕೆ ಕಾರಣರು.
ಮುಖ್ಯವಾಗಿ ನನ್ನೆಲ್ಲ ಗಜಲ್ ಓದಿ ಕಾಮೆಂಟ್ ಮಾಡಿ ಹುರಿದುಂಬಿಸಿದ ಮುಖಪುಟದ
ವೆಂಕಟೇಶ್ ಶೆಟ್ಟಿ, ಲಿಂಗರಾಜ್ ಭದ್ರಾಪುರ, ವನಶ್ರೀ ಲಿಂಗರಾಜ್, ವೀರು ಆರ್ ದೇಶನೂರ್, ಹಿರೇಬಸಯ ಜಂಗಿನಮಠ, ರಾಘವ ಇತಿಗಿ, ಉಮೇಶ್ ಕುಮಾರ್ ಜಿ, ಬಾಲು ಸರ್, ಶಂಕರ್ ದೇವರು, ದುರುಗಪ್ಪ ಗುಡದೂರು,
ಶಂಕರ್ ಗುರುಕರ್, ಬಸವರಾಜ್ ಬದರ್ಲಿ, ಮಹಂತೇಶ್ ಬಿರಾದಾರ್, ಶಂಕರ್, ರಾಜು ಬೈಡಾಗಿ, ಅಶೋಕ್ ಹೊಸಮಣಿ, ಮಹೇಶ್ಕುಮಾರ್, ಇಲ್ಲಿ ಹೆಸರಿಸಿದೆ ಇರುವ ಸರ್ವರನ್ನು ಹಾಗೂ ಇತರರನ್ನು ನಾನು ನೆನೆಯುತ್ತೇನೆ. ಹಾಗೂ ನನ್ನ ಹತ್ತನೇ, ಪಿಯುಸಿ, ಡಿ ಎಡ್ ಮಿತ್ರವೃಂದವನ್ನು, ಶಾಲೆಯ ಮುಖ್ಯಗುರುಗಳು ಮತ್ತು ಸಿಬ್ಬಂದಿ ವರ್ಗವನ್ನು ನೆನೆಯುತ್ತೇನೆ.
ಇಡೀ ಸಂಕಲನದಲ್ಲಿ ಪ್ರೀತಿ, ಮೋಸ, ಸತ್ಯ, ನಾಡು, ನುಡಿ, ಬಡತನ, ತಂದೆ ತಾಯಿ, ಇಂತಹ ಹಲವು ವಿಭಿನ್ನ ವಿಷಯಗಳ ರಸದೌತಣವಿದೆ.
ಸಾಂಕೇತಿಕ ಬಿಡುಗಡೆ ಕಾರ್ಯಕ್ರಮಕ್ಕೆ ಬರುವಿರಿ ಎನ್ನುವ ಶುಭ ಹಾರೈಕೆಯೊಂದಿಗೆ…
“ಈ ನನ್ನ ಇಳಿಸಂಜೆಯ ನಶೆಯು ನನ್ನಂತೆ ನಿಮ್ಮನ್ನು ಅವರಿಸಿಕೊಳ್ಳಲಿ” – ಸಾವನ್ ಕೆ ಸಿಂಧನೂರು