ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಚುನಾವಣೆ-ಶೇ.98 ಮತದಾನ : ಎರಡು ಬಣಗಳ ಅಬ್ಬರದ ಪ್ರಚಾರದ ನಡುವೆಯೂ ಶಾಂತಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- `ಬನ್ನಿ ಶಿಕ್ಷಕರೇ ವಿಕಾಸಶೀಲ ಹೆಜ್ಜೆಗಳೊಂದಿಗೆ ಹೊಸ ಮನ್ವಂತರದತ್ತ ಸಾಗೋಣ’ ಎಂಬ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ಕರೆಗೆ ಓಗೊಟ್ಟ ಪ್ರಾಥಮಿಕ ಶಾಲಾ ಶಿಕ್ಷಕರು ಇಂದು ಮತದಾನದಲ್ಲಿ ಅತಿ ಹೆಚ್ಚು ಉತ್ಸಾಹದಿಂದ ಪಾಲ್ಗೊಂಡಿದ್ದು, ಶೇ.98.40 ರಷ್ಟು ಮತದಾನವಾಗಿದೆ.
ತಾಲ್ಲೂಕಿನಲ್ಲಿ 1131 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರಿದ್ದು, ಅವರ ಪೈಕಿ 1113 ಮಂದಿ ಮತ ಚಲಾಯಿಸಿದ್ದಾರೆ, ಅದರಲ್ಲಿ 452 ಮಂದಿ ಪುರುಷ ಮತದಾರರು ಹಾಗೂ 661 ಮಂದಿ ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಫಲಿತಾಂಶ ಮಧ್ಯರಾತ್ರಿ ವೇಳೆಗೆ ಹೊರ ಬರುವ ಸಾಧ್ಯತೆ ಇದೆ.
ಕಣದಲ್ಲಿ ಜಿಲ್ಲಾ ನೌಕರರ ಸಂಘ ಬೆಂಬಲಿತ ಅಶ್ವಥ್ಥನಾರಾಯಣ,ಎಂ.ನಾಗರಾಜ್ ನೇತೃತ್ವದ ಬಣ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಬಲಿತ ಅನಿಲ್ ಕುಮಾರ್ ನೇತೃತ್ವದ ಬಣ ಸೇರಿದಂತೆ ಈ ಎರಡು ಬಣಗಳ ತಲಾ 23 ಅಭ್ಯರ್ಥಿಗಳ ಆಯ್ಕೆಗೆ ಈ ಮತದಾನ ನಡೆಯಿತು.


ಅಬ್ಬರದ ಪ್ರಚಾರಮನವೊಲಿಕೆ ತಂತ್ರ


ಒಟ್ಟಾರೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಎರಡೂ ಬಣಗಳ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸಿದರಾದರೂ, ಪರಸ್ಪರ ಸೌಹಾರ್ದತೆಯಿಂದ ನಡೆದುಕೊಂಡಿದ್ದು ಸ್ವಾಗತಾರ್ಹವಾಗಿತ್ತು.
ನಗರದ ಮೆಥೋಡಿಸ್ಟ್ ಶಾಲೆಯಲ್ಲಿ ಈ ಸಂಬಂಧ ಮೂರು ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಮತದಾನ ಬೆಳಗ್ಗೆ 8 ರಿಂದ ಆರಂಭಗೊಂಡ ಮತದಾನದಲ್ಲಿ ತಾಲ್ಲೂಕಿನ ಶಿಕ್ಷಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು, ಮಧ್ಯಾಹ್ನ 1-30ರ ವೇಳೆಗೆ ಶೇ.60 ರಷ್ಟು ಮತದಾನವಾಗಿತ್ತು.
ಮತಗಟ್ಟೆಯ ಮುಂದೆ ಅಭ್ಯರ್ಥಿಗಳ ಪರ ಹತ್ತಾರು ಪೆಂಡಾಲ್ ನಿರ್ಮಿಸಿದ್ದು, ಶಿಕ್ಷಕರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದಲ್ಲದೇ ಮತಗಟ್ಟೆಗೆ ಬರುವ ಶಿಕ್ಷಕರ ಓಲೈಕೆಯೂ ಜೋರಾಗಿ ನಡೆದಿತ್ತು.
ಚುನಾವಣೆಗೆ ಮುನ್ನಾದಿನವೇ ಹಣ, ಉಡುಗೊರೆಗಳ ಆಮಿಷ ಒಡ್ಡಲಾಗಿತ್ತು ಎಂಬ ಆರೋಪಗಳು ಎರಡೂ ಕಡೆಗಳಿಂದ ಕೇಳಿ ಬಂದವಾದರೂ ಇದನ್ನು ಹಲವಾರು ಶಿಕ್ಷಕರು ನಿರಾಕರಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘ,ಜಿಲ್ಲಾ ಮುಖ್ಯ ಶಿಕ್ಷಕರ ಸಂಘ, ಶಿಕ್ಷಕ ಗೆಳೆಯರ ಬಳಗ, ದೈಹಿಕ ಶಿಕ್ಷಕರ ಸಂಘ ಸಂಘಟಿತವಾಗಿ 23 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.


ವ್ಯಕ್ತಿಕೇಂದ್ರೀಕೃತ ಸಂಘ ಬದಲಾವಣೆಯ ಗುರಿ


ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಜಿ.ಸುರೇಶ್‍ಬಾಬು ಚುನಾವಣೆ ಕುರಿತು ಮಾತನಾಡಿ, ಶಿಕ್ಷಕರ ಸಂಘದ ನಡುವೆ ಸಮನ್ವಯತೆ ಕಾಪಾಡಿಕೊಂಡರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ಎಂಬ ಸಂಘದ ರಾಜ್ಯಾಧ್ಯಕ್ಷರ ಕರೆಯ ಮೇರೆಗೆ ವ್ಯಕ್ತಿ ಕೇಂದ್ರೀಕೃತ ಸಂಘ ಬದಲಾವಣೆಯ ಪ್ರಯತ್ನ ನಡೆಸಿದ್ದೇವೆ ಎಂದರು.
ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಶಿಕ್ಷಕರು ಬದಲಾವಣೆ ಬಯಸಿದ್ದಾರೆ, ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ನೌಕರರ ಸಂಘವೂ ಸಾಥ್ ನೀಡಲಿದೆ ಎಂಬ ನಂಬಿಕೆ ಮೂಡಿಸಿದ್ದೇವೆ ಆದ್ದರಿಂದ ನೌಕರರ ಸಂಘದ ಬೆಂಬಲಿತ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು.
ನೌಕರರ ಸಂಘದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಜಿ.ಸುರೇಶ್‍ಬಾಬು, ಕೆ.ಎನ್.ಮಂಜುನಾಥ್, ರವಿಚಂದ್ರ, ಎಸ್.ಚೌಡಪ್ಪ, ಜಿ.ಶ್ರೀನಿವಾಸ್, ಆರ್.ಶ್ರೀನಿವಾಸನ್,ಕೊರಗೊಂಡನಹಳ್ಳಿ ನಾರಾಯಣಸ್ವಾಮಿ, ಎಂ.ನಾಗರಾಜ್, ಅಶ್ವಥ್ಥನಾರಾಯಣ, ವೀರಣ್ಣಗೌಡ, ನಾರಾಯಣಸ್ವಾಮಿ,ಎಂ.ಎನ್.ಶ್ರೀನಿವಾಸಮೂರ್ತಿ, ವೆಂಕಟಾಚಲಪತಿ, ಮಂಜುನಾಥ್ ಮತ್ತಿತರರು ಪ್ರಚಾರ ನಡೆಸಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಣದ ಅಭ್ಯರ್ಥಿಗಳ ಪರ ಅನಿಲ್ ಕುಮಾರ್,ಮುನಿರಾಜು, ಖಾದರ್ ಇಲಾಹಿ, ಆರ್.ಶ್ರೀಧರ್ ಮತ್ತಿತರರು ನೇತೃತ್ವ ವಹಿಸಿದ್ದರು.