ಕೋವಿಡ್-19 ಜಾಗೃತಿ-ಮಣಿಪಾಲ್ ಆಸ್ಪತ್ರೆಯಿಂದ ಅಂತರ್ಜಾಲ ಸಮ್ಮೇಳನ ಪತ್ರಿಕೆಗಳಿಂದ ಸೋಂಕು ಹರಡುವಿಕೆಗೆ ಆಧಾರವಿಲ್ಲ-ಡಾ.ಸುನೀಲ್ ಕಾರಂತ್

 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋವಿಡ್-19 ಜಾಗೃತಿ-ಮಣಿಪಾಲ್ ಆಸ್ಪತ್ರೆಯಿಂದ ಅಂತರ್ಜಾಲ ಸಮ್ಮೇಳನ
ಪತ್ರಿಕೆಗಳಿಂದ ಸೋಂಕು ಹರಡುವಿಕೆಗೆ ಆಧಾರವಿಲ್ಲ-ಡಾ.ಸುನೀಲ್ ಕಾರಂತ್

 

 

ಕೋಲಾರ:- ಪತ್ರಿಕೆಗಳಿಂದ ಕೊರೋನಾ ಹರಡುತ್ತದೆ ಎಂಬುದಕ್ಕೆ ಈವರೆಗೂ ಯಾವುದೇ ಆಧಾರಗಳಿಲ್ಲ, ಏಕೆಂದರೆ ವೈರಸ್ ಪತ್ರಿಕೆಗಳ ಮೇಲೆ ಕೇವಲ 15 ರಿಂದ 20 ನಿಮಿಷ ಜೀವಂತವಾಗಿರುತ್ತದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಗಂಭೀರ ಆರೈಕೆ ವೈದ್ಯಕೀಯ ವಿಭಾಗದ ಚೇರ್ಮನ್ ಮತ್ತು ಸಲಹಾ ತಜ್ಞ ಡಾ.ಸುನೀಲ್ ಕಾರಂತ್ ತಿಳಿಸಿದರು.
ಮಣಿಪಾಲ್ ಆಸ್ಪತ್ರೆ ಹಾಗೂ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕೋವಿಡ್-19 ಸೋಂಕು ಕುರಿತು ಮಾಧ್ಯಮ, ವೃತ್ತಿಪರರು, ಪ್ರಕಕರ್ತರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ (ವೆಬಿನಾರ್)ಅಂತರಜಾಲ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.
ಅದೇ ರೀತಿ ಮಲ,ಮೂತ್ರಗಳಿಂದ ಹರಡಬದುದು ಎಂಬ ಸಂದೇಹವಿದ್ದು, ಅದು ಸಹಾ ಈವರೆಗೂ ದೃಢಪಟ್ಟಿಲ್ಲ ಎಂದು ಸ್ವಷ್ಟಪಡಿಸಿದರು.
ಕೋವಿಡ್-19ಕ್ಕೆ ಸಂಬಂಧಿಸಿದಂತೆ ವಹಿಸಬೇಕಾದ ಮುನ್ನಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ಸ್ಯಾನೀಟೈಸರ್ ಬಳಸಿ, ಸಾಮಾಜಿಕ ಅಂತರ ಕನಿಷ್ಟ 6 ಅಡಿಗಳಷ್ಟು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಮೊಬೈಲ್,ಕ್ಯಾಮರಾಗೆರೆಕಾರ್ಡಿಂಗ್ ಸ್ಟಿಕ್ ಬಳಸುವಂತೆ ಸೂಚಿಸಿ, ಆದಷ್ಟು ಆನ್‍ಲೈನೆ ವೇದಿಕೆಯನ್ನು ಸುದ್ದಿಗಾಗಿ ಬಳಸಿಕೊಳ್ಳಿ ಎಂದರು.
ಮೈಕ್ರೋಫೋನ್ ಬಳಸದಿರಿ ಬಳಸಿದರೆ ಅದನ್ನು ಸ್ಯಾನಿಟೈಸ್ ಮಾಡಿ ಸ್ವಚ್ಚಗೊಳಿಸಿಟ್ಟುಕೊಳ್ಳಿ ಎಂದರು.
ಸುದ್ದಿಗಾಗಿ ಓಡಾಡವ ಪತ್ರಕರ್ತರು ಮನೆಗೆ ಹೋದ ಕೂಡಲೇ ಸ್ಯಾನಿಟೈಸರ್‍ನಿಂದ ಕೈತೊಳೆದು ಮೊದಲು ಬಟ್ಟೆ ಬದಲಿಸಿ,ನಿಮ್ಮ ಶೂ,ಚಪ್ಪಲಿಗಳನ್ನು ನಿಮ್ಮ ಕುಟುಂಬದ ಇತರರ ಪಾದರಕ್ಷೆಗಳಿಂದ ಬೇರ್ಪಡಿಸಿ ಇಟ್ಟುಕೊಳ್ಳಿ ಎಂದು ಸೂಚಿಸಿದರು.
ಹೊರಗಿಂದ ತಂದ ಕ್ಯಾಮರಾ ಮತ್ತಿತರ ವಸ್ತುಗಳನ್ನು ಪ್ರತ್ಯೇಕವಾಗಿಟ್ಟು ನಾಳೆ ನೀವು ವೃತ್ತಿಪರತೆಗೆ ತೆರಳುವಾಗ ಅದನ್ನು ಬಳಸಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಬಳಸಿ ಮತ್ತು ಬೇಯಿಸಿದ ಆಹಾರ ಸೇವಿಸಿ ಜತೆಗೆ ಸಮತೋಲನ ಆಹಾರ ಬಳಸಲು ಸಲಹೆ ನೀಡಿದರು.
60 ವರ್ಷ ಮೇಲ್ಪಟ್ಟವರು, 10 ವರ್ಷ ಕೆಳವಿನ ವಯೋಮಿತಿಯವರು, ಆಸ್ಮಾ,ಡಯಾಬಿಟೀಸ್,ರಕ್ತದೊತ್ತಡ,ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಇವುವವರು ಮನೆಯಲ್ಲೇ ಇರಿ, ಇ-ಸೋರ್ಸ್ ಮಾಹಿತಿ ಪಡೆದು ಇಂಟರ್‍ನೆಟ್,ಮೊಬೈಲ್ ಬಳಸಿ ಸುದ್ದಿ ಮಾಡಿ ಎಂದು ಕಿವಿಮಾತು ಹೇಳಿದರು.
ಪತ್ರಕರ್ತರ ಸುದ್ದಿ ಸಂಗ್ರಹಕ್ಕೆ ಕ್ಷೇತ್ರ ಕಾರ್ಯ ನಡೆಸುವುದು ಕಡ್ಡಾಯವಾಗಿರುವುದರಿಂದ ಅವರ ಕುಟುಂಬಗಳ ಸಂರಕ್ಷಣೆ ಖಾತ್ರಿ ಮಾಡಿಕೊಳ್ಳಲು ವೆಬಿನಾರ್‍ನಲ್ಲಿ ಮಾಹಿತಿ ನೀಡಿದರು.

ಮಾಸ್ಕ್ ಕಡ್ಡಾಯವಾಗಿ ಬಳಸುವುದು ಮಾತ್ರ ಮುಖ್ಯವಲ್ಲ ನಿಮ್ಮ ಕೈಗಳಿಂದ ಪದೆ ಪದೇ ಮೂಗು,ಮುಖವನ್ನು ಸ್ಪರ್ಶಿಸುವುದನ್ನು ತಪ್ಪಿಸಬೇಕು, ಸಾಧ್ಯವಾದಷ್ಟು ಕೈಗಳನ್ನು ತೊಳೆಯುತ್ತಿರಬೇಕು, ಸ್ಯಾನಿಟೈಸರ್‍ಅನ್ನು ಜತೆಯಲ್ಲೇ ಇಟ್ಟುಕೊಂಡು, ಕೆಲಸದ ಜಾಗದಲ್ಲಿ ಬಾಗಿಲು,ಲಿಫ್ಟ್ ಬಟನ್‍ಗಳನ್ನು ಮುಟ್ಟಿದ ಕೂಡಲೇ ಸ್ಯಾನಿಟೈಸರ್‍ನಿಂದ ಕೈ ತೊಳೆದುಕೊಳ್ಳುವುದು ಸೂಕ್ತ ಎಂದರು.
ಪತ್ರಕರ್ತರು ನೆಗಡಿ, ಜ್ವರ,ಕಫದ ಲಕ್ಷಣಗಳು ಕಂಡು ಬಂದರೆ ಕೂಡಲೇ ಚಿಕಿತ್ಸೆಗೆ ಒಳಪಡಲು ಸಲಹೆ ನೀಡಿದ ಅವರು, ವೃತ್ತಿಪರರು ನೈರ್ಮಲ್ಯದ ಶಿಷ್ಟಾಚಾರ ಕಡ್ಡಾಯವಾಗಿ ಪಾಲಿಸಿ ಅಗತ್ಯವಾದಾಗೆಲ್ಲಾ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿ ಎಂದರು.
ಪತ್ರಕರ್ತರಿಗೆ ಅರಿವು
ಸಂಘದಿಂದ ಧನ್ಯವಾದ
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಂಘದ ಅಧ್ಯಕ್ಷ ವಿ.ಮುನಿರಾಜು, ಕೊರೋನಾ ಸಂಕಷ್ಟದಲ್ಲಿ ಜೀವದ ಹಂಗು ತೊರೆದು ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ, ಜನರಿಗೆ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಈ ಹಿನ್ನಲೆಯಲ್ಲಿ ಪತ್ರಕರ್ತರಿಗೆ ವೃತ್ತಿ ನಿರ್ವಹಣೆ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ನೀಡಲು ಮುಂದೆ ಬಂದಿದ್ದಕ್ಕಾಗಿ ಮಣಿಪಾಲ್ ಆಸ್ಪತ್ರೆಗೆ ಕೃತಜ್ಞತೆ ಸಲ್ಲಿಸಿದರು.
ಚಿಕಿತ್ಸೆಗೆ ಪತ್ರಕರ್ತರಿಗೆ
ಶೇ.25 ರಿಯಾಯಿತಿ
ಮಣಿಪಾಲ್ ಆಸ್ಪತ್ರೆಯ ವ್ಯವಸ್ಥಾಪಕ ಅರುಣ್ ಚಕ್ರವರ್ತಿ, ಮಣಿಪಾಲ್ ಆಸ್ಪತ್ರೆ ವತಿಯಿಂದ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ನೀಡುತ್ತಿದ್ದು, ಈ ಕಾರ್ಡನ್ನು ತೋರಿಸಿ ಯಾವುದೇ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಗೆ ಶೇ.25 ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲೆಯ 300 ಪತ್ರಕರ್ತರಿಗೆ ಆನ್‍ಲೈನ್ ಹೆಲ್ತ್ ಕಾರ್ಡ್ ನೀಡಲು ನಿರ್ಧರಿಸಿದ್ದು, ಯಾವುದೇ ಕಾಯಿಲೆಗಳಿಗೆ ನೀವು ಶೇ.25 ರಿಯಾಯಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.
ಈ ಸಂದಭದಲ್ಲಿ ಮಣಿಪಾಲ್ ಆಸ್ಪತ್ರೆಯ ಕೋಲಾರ ವಿಭಾಗದ ಸಂಯೋಜಕ ಸುನೀಲ್ ಹಾಜರಿದ್ದು, ಆಸ್ಪತ್ರೆ ಸೌಲಭ್ಯಗಳ ಕುರಿತು ಮಾಹಿತಿ ಬೇಕಾದಲ್ಲಿ ತಮ್ಮನ್ನು ಸಂಪರ್ಕಿಸಲು ಕೋರಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್, ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್ ಪತ್ರಕರ್ತರು ಉಪಸ್ಥಿತರಿದ್ದರು.