ಕೋಲಾರ – ಬ್ಯಾಂಕ್‍ನ ಹಿಂದಿನ ದುಸ್ಥಿತಿ ನೆನಪಿಸಿಕೊಳ್ಳಿ, ಅದೇ ಸ್ಥಿತಿಗೆ ಮತ್ತೆ ಹೋದರೆ ಅದಕ್ಕೆ ಅಧಿಕಾರಿ,ಸಿಬ್ಬಂದಿಯೇ ಜವಾಬ್ದಾರರಾಗುತ್ತೀರಿ, ಅನ್ನ ನೀಡುವ ಸಂಸ್ಥೆಯ ಋಣ ತೀರಿಸಲು ಬದ್ದತೆಯಿಂದ ಕೆಲಸ ಮಾಡಿ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಕೋಲಾರ – ಬ್ಯಾಂಕ್‍ನ ಹಿಂದಿನ ದುಸ್ಥಿತಿ ನೆನಪಿಸಿಕೊಳ್ಳಿ, ಅದೇ ಸ್ಥಿತಿಗೆ ಮತ್ತೆ ಹೋದರೆ ಅದಕ್ಕೆ ಅಧಿಕಾರಿ,ಸಿಬ್ಬಂದಿಯೇ ಜವಾಬ್ದಾರರಾಗುತ್ತೀರಿ, ಅನ್ನ ನೀಡುವ ಸಂಸ್ಥೆಯ ಋಣ ತೀರಿಸಲು ಬದ್ದತೆಯಿಂದ ಕೆಲಸ ಮಾಡಿ

ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಧಿಕಾರಿ,ಸಿಬ್ಬಂದಿಗೆ ತಾಕೀತು ಮಾಡಿದರು. ಭಾನುವಾರ ನಗರದ ಡಿಸಿಸಿ ಸಭಾಗಂಣದಲ್ಲಿ ನಡೆದ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎರಡೂ ಜಿಲ್ಲೆಯ ಬ್ಯಾಂಕ್‍ನ ಶಾಖೆಗಳ ವ್ಯವಸ್ಥಾಪಕರು, ಸಾಲವಸೂಲಾತಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಹಿಂದೆ ಬ್ಯಾಂಕ್ ಯಾವ ಪರಿಸ್ಥಿತಿಯಲ್ಲಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಬ್ಯಾಂಕ್ ಋಣದಲ್ಲಿ ಬದುಕುತ್ತಿದ್ದೀರಾ, ಅನ್ನ ನೀಡುವ ಸಂಸ್ಥೆಗೆ ಮೋಸ ಮಾಡಲಿಕ್ಕೆ ಹೋಗಬೇಡಿ ದೇವರು ಒಳ್ಳೆಯದನ್ನು ಮಾಡೋದಿಲ್ಲ ಎಂದು ಎಚ್ಚರಿಸಿದರು.
ಬ್ಯಾಂಕ್ ಎಂದರೆ ರೈತರು, ಮಹಿಳೆಯರು ಡಿಸಿಸಿ ಬ್ಯಾಂಕ್ ಕಡೆ ಮುಖ ಮಾಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಸಾಲ ವಿತರಿಸಲಾಗಿದ್ದು, ಅಷ್ಟೇ ಪ್ರಾಮಾಣಿಕವಾಗಿ ಮರುಪಾವತಿಯಾಗುತ್ತಿದೆ. ಕೆಲ ಮುಖಂಡರು ಮಹಿಳಾ ಸ್ವಸಹಾಯ ಸಂಘಗಳಿಂದ ಹಣ ಪಡೆದು ಬ್ಯಾಂಕಿಗೆ ಕಟ್ಟಿಲ್ಲ, ಅಂತಹವರ ವಿರುದ್ಧ ದೂರು ದಾಖಲು ಮಾಡಿ ಎಂದು ವ್ಯವಸ್ಥಾಪಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 108 ಕೋಟಿ ಬೆಳೆ ಸಾಲ ಹಾಗೂ 170 ಕೋಟಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗಿದೆ, ಫಲಾನುಭವಿಗಳಿಗೆ ಸಾಲ ನೀಡಲು ಶಿಫಾರಸ್ಸು ಮಾಡಿರುವುದು ನೀವೆ, ವಸೂಲಿ ಮಾಡುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಬದ್ಧತೆಯಿಂದ ಕೆಲಸ ಮಾಡಿದರೆ ಗುರಿ ಸಾಧನೆ ಮಾಡುವುದು ಸುಲಭ ಎಂದು ಹೇಳಿದರು.
ರೈತರಿಗೆ, ಮಹಿಳೆಯರಿಗೆ ನೀಡಿರುವ ಸಾಲದ ಮರುಪಾವತಿ ಬಗ್ಗೆ ಶಾಖಾವಾರು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದಾಗ, ಸಮಗ್ರವಾಗಿ ಮಾಹಿತಿ ನೀಡಲು ವಿವಿಧ ಶಾಖೆಯ ವ್ಯವಸ್ಥಾಪಕರು ತಡಬಡಿಸಿದರು.
ಇದಕ್ಕೆ ಗರಂ ಅದ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ನಿಮಗೆಲ್ಲಾ ಇಚ್ಛಾಶಕ್ತಿ ಕೊರತೆ ಇದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ, ಒಬ್ಬರ ಒತ್ತಾಯದ ಮೇರೆ ಕೆಲಸ ಮಾಡುವುದನ್ನು ಬಿಡಿ, ಇಲ್ಲಿ ನಾವೇನು ಸ್ವಾರ್ಥಕ್ಕೆ ಕೆಲಸ ಮಾಡುತ್ತಿಲ್ಲ. ನನ್ನಿಂದ ಹಿಂಸೆ ಆದರೆ ಹೇಳಿ ಈಗಲೇ ಬ್ಯಾಂಕ್ ಬಿಟ್ಟು ಹೋಗುತ್ತೇನೆ ಎಂದು ಆಕ್ರೋಶವ್ಯಕ್ತಪಡಿಸಿದರು.
ನಿಮ್ಮನ್ನು ಗಮನಿಸುತ್ತಿದ್ದರೆ ಇಲ್ಲಿ ಯಾರು ಬದಲಾಗಿರುವ ಲಕ್ಷಣಗಳು ಕಾಣುತ್ತಿಲ್ಲ, ಶೇ.3ರಲ್ಲಿ ಇದ್ದ ಎನ್‍ಪಿಎ ಪ್ರಮಾಣ ಈಗ ಶೇ.8ಕ್ಕೆ ಏರಿಕೆಯಾಗಿದ್ದು, ಇವರು ಎಷ್ಟು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು, ಮಹಿಳೆರು ಠೇವಣಿ ಇಟ್ಟಿರುವ ಹಣದಲ್ಲಿ ನಿವೆಲ್ಲಾ ಸಂಬಂಳ ತೆಗೆದುಕೊಳ್ಳುತ್ತಿದ್ದೀರಿ, ಬದ್ಧತೆಯಿಂದ ಕೆಲಸ ಮಾಡಿದ್ದರೆ ಈಗ ಸಮಸ್ಯೆ ಎದುರಾಗುತ್ತಿರಲಿಲ್ಲ. ರಜೆ ಯಾವಾಗ ಬರುತ್ತದೆ ಎಂದು ಕಾದು ನೋಡುವ ನಿಮಗೆ ಬಡವರ ಪರ ಕೆಲಸ ಮಾಡಲು ಮನಸ್ಸಿಲ್ಲವೆ ಎಂದು ಪ್ರಶ್ನಿಸಿದರು.
ಸೋಸೈಟಿವಾರು ಬಾಕಿ ಇರುವ ಮಹಿಳಾ ಸಂಘಗಳ ಮತ್ತು ರೈತರ ಸಾಲ ವಸೂಲಿ ಮಾಡಲು ಆಯಾ ತಾಲ್ಲೂಕಿನ ವ್ಯವಸ್ಥಾಪಕರು ಜವಬ್ದಾರಿ ವಹಿಸಿಕೊಳ್ಳಬೇಕು, ಸೆ.14ರೊಳಗೆ ಸಂಪೂರ್ಣ ಸಾಲ ವಸೂಲಿ ಆಗಬೇಕು ಎಂದು ತಾಕೀತು ಮಾಡಿದರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ ಮಾತನಾಡಿ, ಸಹಕಾರಿ ಬ್ಯಾಂಕ್ ಅಧಿಕಾರಿಗಳು ಸರ್ಕಾರಿ ನೌಕರರಲ್ಲ, ಬ್ಯಾಂಕ್ ಅಭಿವೃದ್ಧಿಯಾದಾಗ ಮಾತ್ರ ವೇತನ ಬರುತ್ತದೆ, ಸಾಲ ನೀಡುವ ಮತ್ತು ವಸೂಲಿ ಮಾಡುವಲ್ಲಿ ಸಿಬ್ಬಂದಿ ಪಾತ್ರ ಬಹಳ ಮುಖ್ಯವಾಗಿದ್ದು, ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಎಚ್ಚರಿಸಿದರು.
ಸಭೆಯಲ್ಲಿ ಸಹಾಯಕ ಮಹಾ ಪ್ರಬಂಧಕರಾದ ಬೈರೇಗೌಡ, ಶಿವಕುಮಾರ್, ಖಲೀಮುಲ್ಲಾ, ಚೌಡಪ್ಪ, ನಾಗೇಶ್, ಹುಸೇನ್ ದೊಡ್ಡಮುನಿ ಸೇರಿದಂತೆ ಎರಡೂ ಜಿಲ್ಲೆಯ ಬ್ಯಾಂಕ್ ಶಾಖೆ ವ್ಯವಸ್ಥಾಪಕರು,ಸಿಬ್ಬಂದಿ ಹಾಜರಿದ್ದರು.