ಕೋಲಾರ:ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ 73 ನೇ ಸ್ವಾತಂತ್ರ್ಯ ದಿನ ಆಚರಣೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ 73 ನೇ ಸ್ವಾತಂತ್ರ್ಯ ದಿನ ಆಚರಣೆ

ಕೋಲಾರ: 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ಆಚರಿಸಲಾಯಿತು. ಸ್ವಾತಂತ್ರ್ಯ ದಿನಾಚರಣಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆಯನ್ನು ಸ್ವೀಕರಿಸಿದ ಬಳಿಕ ರಾಷ್ಟ್ರಗೀತೆ ಹಾಡಲಾಯಿತು. 

ತದನಂತರ ಪ್ರೋಬೇಷನರಿ ಡಿ.ವೈ.ಎಸ್.ಪಿ ತಬ್ರಕ್‍ಪಾತಿಮಾ ಅವರು ಪಥ ಸಂಚಲನಕ್ಕೆ ಅನುಮತಿಯನ್ನು ಪಡೆದು ಪಥ ಸಂಚಲನದ ಮುಂದಾಳತ್ವ ವಹಿಸಿ ಪ್ರಾರಂಭಿಸಿದರು. ಸುಮಾರು 23 ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದು ನೋಡುಗರ ಕಣ್ಮನ ಸೆಳೆದವು. 

ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಸ್ವಾತಂತ್ರ್ಯೋತ್ಸವದ ಸಂದೇಶದ ಬಳಿಕ ಬ್ರಹ್ಮಕುಮಾರಿ ಸಮಾಜದಿಂದ ರಕ್ಷಬಂಧನವನ್ನು ಸ್ವೀಕರಿಸಿದರು. ಇದಾದ ಬಳಿಕ ಸುವರ್ಣ ಸೆಂಟ್ರಲ್ ಶಾಲಾ ಮಕ್ಕಳು ನಾಡಗೀತೆ ಮತ್ತು ರೈತಗೀತೆಗಳನ್ನು ಹಾಡಿದರು. 

ನಂತರ ಶಾಲಾ ಮಕ್ಕಳಿಂದ ಪ್ರಾರಂಭಗೊಂಡ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಳಿಸಿದವು. ಆರ್.ವಿ. ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ನೇತಾಜಿ ಸುಭಾಷ್‍ಚಂದ್ರಬೋಸ್, ಮಹಾತ್ಮ ಗಾಂಧೀಜಿಯವರನ್ನು ಸೇರಿದಂತೆ ಇತರೆ ಹೋರಾಟಗಾರರ ಸಾಧನೆಗಳನ್ನು, ವೀರ ಯೋಧರು ದೇಶಕ್ಕಾಗಿ ಹೋರಾಡಿ ತಮ್ಮ ತ್ಯಾಗ ಬಲಿದಾನಗಳÀನ್ನು ಮಾಡುತ್ತಿರುವುದು ಹಾಗೂ ಜನರಲ್ಲಿನ ದೇಶಾಭಿಮಾನವನ್ನು ನೃತ್ಯದ ಮೂಲಕ ಪ್ರದರ್ಶಿಸಿ ಜನರ ಮೆಚ್ಚಿಗೆಗೆ ಪಾತ್ರರಾದರು. 

ಬಿ.ಎಂ.ಎಸ್.ಶಾಲೆಯ ಮಕ್ಕಳು ನೀರಿನ ಸಂರಕ್ಷಣೆ ಕುರಿತು ತಮ್ಮ ನೃತ್ಯದ ಮೂಲಕ ಅರಿವು ಮೂಡಿಸಿದರು. ಮಹಿಳಾ ಸಮಾಜ ಶಾಲೆಯ ಮಕ್ಕಳ ನೃತ್ಯವು ಕ್ರೀಡಾಂಗಣದಲ್ಲಿ ರಂಗೇರಿಸಿದರೆ ಮದರ್ ತೆರೆಸಾ ಶಾಲೆಯ ಮಕ್ಕಳು ವಂದೇ ಮಾತರಂ ಗೀತೆಗೆ ನೃತ್ಯ ಪ್ರದರ್ಶನ ನೀಡಿದರು. ಭಾರತಾಂಬೆ ಮತ್ತು ಕನ್ನಡಾಂಬೆಯ ವೇಷದಾರಿಗಳಾಗಿದ್ದ ಮಕ್ಕಳು ನೋಡಗರನ್ನು ಆಕರ್ಷಿಸಿದರು. 

ಸಾಂಸ್ಕøತಿಕ ಕಾರ್ಯಕ್ರಮಗಳ ಬಳಿಕ ಸಾಮೂಹಿಕ ವ್ಯಾಯಾಮ ಕಾರ್ಯಕ್ರಮವನ್ನು ನಡೆಸಲಾಯಿತು. ಇದರಲ್ಲಿ ವಿವಿಧ ಶಾಲೆಗಳಿಂದ ಸುಮಾರು 1500 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜಗಳ ಹಾರಾಟ ಜೋರಾಗಿತ್ತು. 

ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ತಂಡಗಳ ಪೈಕಿ ಉತ್ತಮ ಸಮಸ್ತ್ರ ವಿಭಾಗದಲ್ಲಿ ಮಹಿಳಾ ಕಾಲೇಜಿನ ಎನ್.ಸಿ.ಸಿ. ತಂಡ ಪ್ರಥಮ, ಎ.ಇ.ಎಸ್ ಶಾಲೆಯ ಭಾರತ ಸೇವಾದಳ ಬಾಲಕಿಯರ ತಂಡ ದ್ವಿತೀಯ, ಗೃಹರಕ್ಷಕ ದಳದ ಪುರುಷರ ತಂಡಕ್ಕೆ ತೃತೀಯ ಬಹುಮಾನವನ್ನು ಪಡೆದುಕೊಂಡವು. 

ಶಾಲಾ ಸಮವಸ್ತ್ರ ತಂಡದ ವಿಭಾಗದಲ್ಲಿ ಆರ್.ವಿ.ಇಂಟರ್ ನ್ಯಾಷನಲ್ ಶಾಲೆಯ ಬಾಲಕರ ತಂಡ ಪ್ರಥಮ, ಸುವರ್ಣ ಸೆಂಟರ್ ಶಾಲೆಯ ಬಾಲಕಿಯರ ತಂಡ ದ್ವಿತೀಯ, ಮಹಿಳಾ ಸಮಾಜ ಶಾಲೆಯ ಬಾಲಕಿಯರ ತಂಡ ತೃತೀಯ ಬಹುಮಾನಗಳಿಗೆ ಭಾಜನರಾದರು. ಅಂತರಗಂಗೆ ವಿದ್ಯಾಸಂಸ್ಥೆಯ ವಿಶೇಷ ಚೇತನ ಮಕ್ಕಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದು ಇವರಿಗೆ ಪ್ರೋತ್ಸಾಹಕರ ಬಹುಮಾನವನ್ನು ವಿತರಿಸಲಾಯಿತು. 

ಜಿಲ್ಲೆಯ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಯಿತು. ಜಿಲ್ಲಾಡಳಿತ ವತಿಯಿಂದ ವಸತಿ ರಹಿತ ಹಾಗೂ ನಿವೇಶ ರಹಿತ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು. ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗುವ ಪ್ರವಾಸಿ ಟ್ಯಾಕ್ಸಿ ಯೋಜನೆಯ ಫಲಾನುಭವಿಗಳಿಗೆ ವಾಹನಗಳನ್ನು ಹಸ್ತಾಂತರಿಸಲಾಯಿತು. ಕಸ ವಿಲೇವಾರಿ ಮಾಡಲು ನೂತನ 17 ಕಸ ವಿಲೇವಾರಿ ವಾಹನಗಳನ್ನು ನಗರಸಭೆಗೆ ನೀಡಲಾಯಿತು. 

ಈ ಸಂದರ್ಭದಲ್ಲಿ ಕೋಲಾರ ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ, ಶಾಸಕರಾದ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಗೀತಮ್ಮ ಆನಂದರೆಡ್ಡಿ, ಉಪಾಧ್ಯಕ್ಷರಾದ ಯಶೋದ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಸೂಲೂರು ಎಂ.ಆಂಜಿನಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಜಿ.ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಕಾರ್ತೀಕ್‍ರೆಡ್ಡಿ, ಅಪರ ಜಿಲ್ಲಾಧಿಕಾರಿಯಾದ ಹೆಚ್.ಪುಷ್ಪಲತಾ, ಉಪವಿಭಾಗಾಧಿಕಾರಿ ಸೋಮಶೇಖರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.