

ಬರಹ ; ಸಚಿನ್ ಸುವರ್ಣ ಪಿತ್ರೋಡಿ
ಕಾಪು : ಮೊಗವೀರ ಸಮಾಜವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಸ್ಥಾನ, ದೈವಸ್ಥಾನ ಹಾಗೂ ಮಠ-ಮಂದಿರಗಳ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವಂತಹ ಸಮಾಜ. ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿಯಲ್ಲಿ ತನ್ನದೇ ಆದಂತಹ ಕೊಡುಗೆಯನ್ನು ನೀಡಿದಂತಹ ಮೊಗವೀರ ಸಮುದಾಯಕ್ಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡದಿರುವುದು – ಮೊಗವೀರ ಸಮುದಾಯದ ಬಗೆಗಿನ ಕಡೆಗಣನೆಯನ್ನು ಪ್ರತಿಬಿಂಬಿಸುತ್ತಿದೆ. ಸರಕಾರದಿಂದ ನಿಯೋಜಿತವಾಗುವ ಈ ವ್ಯವಸ್ಥಾಪನ ಸಮಿತಿಯಲ್ಲಿ ಮೋಗವೀರ ಸಮುದಾಯಕ್ಕೆ ಪ್ರಾತಿನಿಧ್ಯ ಲಭಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲಾ ಉಪಾಧ್ಯಕ್ಷ ಸಚಿನ್ ಸುವರ್ಣ ಪಿತ್ರೋಡಿ ಸರಕಾರವನ್ನು ಆಗ್ರಹಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ನಾಯಕರು ಮಾಧ್ಯಮದಲ್ಲಿ ವ್ಯಥಾರೋಪ ಮಾಡುತ್ತಿರುವುದು ಹಾಗೂ ಬಾಲಿಷ ಹೇಳಿಕೆಗಳನ್ನು ನೀಡುತ್ತಿರುವುದು ಮೊಗವೀರ ಸಮುದಾಯದ ಹಾದಿತಪ್ಪಿಸುವ ಪ್ರಯತ್ನದ ಭಾಗವಾಗಿರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿದ ಸರಕಾರವಿರುವುದು. ನಮ್ಮ ಕಾಪು ತಾಲೂಕಿನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಆಯ್ಕೆಗಳು ಯಾರ ಅಣತಿಯಂತೆ ನಡೆಯುತ್ತಿದೆ ಎನ್ನುವಂತಹದ್ದು ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಈ ಕಾಂಗ್ರೆಸ್ ಮುಖಂಡರು ತಮ್ಮಿಂದಾಗಿರುವ ಪ್ರಮಾದವನ್ನು ಮರೆಮಾಚುವ ಸಲುವಾಗಿ ದಿನಕ್ಕೊಬ್ಬರಂತೆ, ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ.
ಈ ವ್ಯವಸ್ಥಾಪನ ಸಮಿತಿಯಲ್ಲಾಗಿರುವ ಪ್ರಮಾದವನ್ನು ಒಪ್ಪಿಕೊಂಡು ಮೊಗವೀರ ಸಮಾಜದ ಶ್ರೀಧರ್ ಕಾಂಚನ್ ರವರ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನವನ್ನು ಮೋಗವೀರ ಸಮುದಾಯದವರಿಗೆ ನೀಡಬೇಕು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಮೊಗವೀರ ಸಮುದಾಯದ ಪ್ರಾತಿನಿಧ್ಯದ ವಿಚಾರದಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
