ಕಂದಾಯ ಮತ್ತು ಸರ್ವೇ ಇಲಾಖೆ ರೈತರ ರಕ್ತ ಹೀರುತ್ತಿದೆ: ಕೋಲಾರ ರೈತ ಸಂಘ

ವರದಿ:ಶಬ್ಭೀರ್ ಅಹ್ಮದ್

ಕಂದಾಯ ಮತ್ತು ಸರ್ವೇ ಇಲಾಖೆ ರೈತರ ರಕ್ತ ಹೀರುತ್ತಿದೆ: ಕೋಲಾರ ರೈತ ಸಂಘ

ಕೋಲಾರ:ಮೆ.18: ಕಂದಾಯ ಮತ್ತು ಸರ್ವೇ ಇಲಾಖೆ ರೈತರ ರಕ್ತ ಹೀರುತ್ತಿದ್ದು ಇವೆರಡೂ ಇಲಾಖೆಯನ್ನು ಸರಿಪಡಿಸಿದರೆ ಮಾತ್ರ ಭ್ರಷ್ಟಾಚಾರ ಎನ್ನುವುದು 50% ಅತೋಟಿಗೆ ಬಂದು ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗುತ್ತದೆ, ಇಲ್ಲವಾದಲ್ಲಿ ಲಂಚ ಕೊಡಬೇಡಿ ಎನ್ನುವುದು ವೇದಿಕೆಗಳಿಗೆ ಸೀಮಿತವಾಗಿ ಜನರು ಪ್ರತಿನಿತ್ಯ ನರಕ ಅನುಭವಿಸಬೇಕಾಗುತ್ತದೆಂದು ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತ ಸಂಘದಿಂದ ಎಸಿಬಿ ಅಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕಂದಾಯ ಮತ್ತು ಸರ್ವೇ ಇಲಾಖೆಗಳನ್ನು ಸ್ವಂತ ಆಸ್ತಿಯಂತೆ ಮಾಡಿಕೊಂಡಿರುವ ಕೆಲವು ಅಧಿಕಾರಿಗಳು ರೈತರನ್ನು ತಿಂಗಳಾನುಗಟ್ಟಲೇ ಅಲೆದಾಡಿಸಿ, ರೈತರನ್ನು ಪ್ರತಿ ಹೆಜ್ಜೆಗೂ ಲಂಚಕ್ಕಾಗಿ ಶೋಷಿಸಲು ಆದೇಶ ಹೊರಡಿಸಿ ಈ 2 ಇಲಾಖೆಯನ್ನು ಸಂಪೂರ್ಣ ಭೂಗಳ್ಳರ ಆಸ್ತಿಯಂತೆ ಮಾಡಲು ಹೊರಟಿರುವ ಆಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿ ಅಕ್ರಮಗಳನ್ನು ತನಿಖೆ ಕೈಗೊಂಡು ಶಿಕ್ಷೆಯಾದಾಗ ಮಾತ್ರ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತದೆಂದು ಅಭಿಪ್ರಾಯಪಟ್ಟರು.
ಸರ್ಕಾರಿ ಕಚೇರಿಗಳು ಹಿಟ್ಲರ್‍ನ ಸಾಮ್ರಾಜ್ಯದಂತೆ ಲಂಚವಿಲ್ಲದೆ ಒಂದು ಅರ್ಜಿಯೂ ಕದಲುವುದಿಲ್ಲ ವರ್ಷಾನುಗಟ್ಟಲೆ ಕಚೇರಿಗಳಿಗೆ ಅಲೆದಾಡುವಂತ ಸ್ಥಿತಿ ಇದ್ದರೂ ಕೆಲವು ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ತುಟಿ ಕೂಡ ಬಿಚ್ಚುವುದಿಲ್ಲ ಇನ್ನು ಜಿಲ್ಲೆಗೆ ಬರುವ ಯಾವ ಅಧಿಕಾರಿಯು ನಾವು ಸರ್ಕಾರದ ಮಟ್ಟದಲ್ಲಿ ಲಕ್ಷಗಳ ಲೆಕ್ಕದಲ್ಲಿ ರಾಜಕಾರಣಿಗಳಿಗೆ ಹಣ ಕೊಟ್ಟು ಬಂದಿದ್ದೇವೆ. ನಾವು ಉಚಿತವಾಗಿ ಕೆಲಸ ಮಾಡಲು ರೆಡಿ ಇಲ್ಲವೆಂಬ ಮನೋಬಾವ ಹೊಂದಿರುವ ಅಧಿಕಾರಿ ವರ್ಗದ 50ರಷ್ಟು ಕಚೇರಿಗಳಲ್ಲಿ ತುಂಬಿದೆ, ಅಲೆದು ಅಲೆದು ಬೇಸತ್ತ ರೈತ ಅಧಿಕಾರಿಮೇಲೆ ಕೈಮಾಡಿದರೆ ಸರ್ಕಾರಿ ನೌಕರರ ಸಂಘ ಸತ್ಯಹರಿಚಂದ್ರರಂತೆ ಬೀದಿಗಿಳಿದು ಅಬ್ಬರಿಸುತ್ತಾರೆ. ದೊಡ್ಡಮಟ್ಟದ ಲಂಚಪಡೆಯುವ ಅಧಿಕಾರಿಗಳು ಸಿಗದೆ ಕೆಳಮಟ್ಟದ ಅಧಿಕಾರಿಗಳು ಲಂಚ ತೆಗೆದುಕೊಂಡು ಅಮಾನತ್ತಾಗಿ ಮತ್ತೆ ಯತಾಸ್ಥಿತಿ ಕಾರ್ಯಾರಂಭಕ್ಕೆ ಇಳಿದು ಜನರ ಶೋಷಣೆ ನಿರಂತರವಾಗಿ ಮಾಡುತ್ತಾರೆ. ಇದನ್ನು ಸಂಪೂರ್ಣವಾಗಿ ತೊಳೆಯಬೇಕಾದರೆ ಸರ್ಕಾರಕ್ಕೆ ಮತ್ತು ರಾಜಕಾರಣಿಗಳಿಗೆ ಇಚ್ಚಾಶಕ್ತಿ ಬೇಕಾಗಿದೆ ಎಂದು ದೂರಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಂಗಸಂದ್ರ ನಾಗೇಶ್, ವೆಂಕಟೇಶ್, ತಿಮ್ಮಣ್ಣ, ತೆರ್ನಹಳ್ಳಿ ಆಂಜಿನಪ್ಪ, ಈಕಂಬಳ್ಳಿ ಮಂಜುನಾಥ್ ಮುಂತಾದವರಿದ್ದರು.
(ಕೆ.ನಾರಾಯಣಗೌಡ)