ಆರ್ಥಿಕ ಅಶಿಸ್ತು, ಸಂಪತ್ತು ಕುಸಿತಕ್ಕೆ ಅಸ್ತು:ಪುಸ್ತಕ ಬಿಡುಗಡೆಗೊಳಿಸಿ ಕೆ.ಜಯಪ್ರಕಾಶ ಹೆಗ್ಡೆ

JANANUDI.COM NETWORK

 

ಆರ್ಥಿಕ ಅಶಿಸ್ತು, ಸಂಪತ್ತು ಕುಸಿತಕ್ಕೆ ಅಸ್ತು:ಪುಸ್ತಕ ಬಿಡುಗಡೆಗೊಳಿಸಿ ಕೆ.ಜಯಪ್ರಕಾಶ ಹೆಗ್ಡೆ

 

 

ವ್ಯಕ್ತಿ, ಉದ್ಯಮ, ಸಂಸ್ಥೆ, ಸರಕಾರ ಯಾವುದೇ ಆಗಲಿ ಆರ್ಥಿಕ ಶಿಸ್ತು ಸರಿಯಾಗಿಲ್ಲದಿದ್ದಲ್ಲಿ ಸಂಪತ್ತಿನ ಕುಸಿತ ಅನಿವಾರ್ಯ. ದೂರದೃಷ್ಟಿ, ಅಧ್ಯಯನವಿಲ್ಲದಿದ್ದರೆ, ಅರ್ಥ ಸಚಿವರೂ ವಿಫಲರಾಗುತ್ತಾರೆ. ಉದ್ಯಮಕ್ಕಾಗಿ ಪಡೆದ ಆರ್ಥಿಕ ನೆರವು ಮರಪಾವತಿಯಲ್ಲಿ ಗಮನ ಹರಿಸದ ಉದ್ಯಮಿಗಳು, ವೃತ್ತಿ, ಉದ್ಯಮಕ್ಕಾಗಿ ಪಡೆದ ಸಾಲವನ್ನು ಅನುಪಯುಕ್ತ ಕಾರ್ಯಕ್ಕೆ ಬಳುವ ಮಾಲಕರು, ಸಾಲ ನೀಡಿಕೆ ಹಾಗೂ ವಸೂಲಾತಿ ವಿಷಯದಲ್ಲಿ ಬೇಜವಾಬ್ದಾರಿತನ ತೋರುವ ಬ್ಯಾಂಕ್ ಆಡಳಿತ ಹಾಗೂ ಅಧಿಕಾರಿಗಳು, ದೇಶದಲ್ಲಿ ಆರ್ಥಿಕ ಕುಸಿತಕ್ಕೆ ಕಾರಣರಾಗುತ್ತಾರೆ. ಬ್ಯಾಂಕುಗಳಲ್ಲಿ ಎನ್‍ಪಿಎ ಸಮಸ್ಯೆ ಹೆಚ್ಚಲು ಕಾರಣ ಎಂಬ ವಿಷಯವೂ ಸೇರಿದಂತೆ “ಭಾರತದ ಆರ್ಥಿಕ ಸಂರಕ್ಷಣೆಯ ಅನ್ವೇಷಣೆ” ಬಗ್ಗೆ ಹಿರಿಯ ಚಿಂತಕ, ಲೇಖಕ ವಿ.ಮೋಹನರಾವ್ ಅವರ ಲೇಖನಗಳು ವಿಚಾರಪೂರ್ಣವಾಗಿವೆ” ಎಂದು ಮಾಜಿ ಸಚಿವರೂ, ಮಾಜಿ ಸಂಸದರೂ ಆದ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ಕುಂದಪ್ರಭ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಭಂಡಾರ್‍ಕಾರ್ಸ್ ಕಾಲೇಜಿನ ಕುಂಭಾಶಿ ರಾಧಾಬಾೈ ವೆಂಕಟರಮಣ ಪ್ರಭು ರಂಗಮಂಟಪದಲ್ಲಿ “ಇನ್‍ಕ್ವೆಸ್ಟ್ ಆಫ್ ಎ ಸಸ್ಟೈನೆಬಲ್ ಇಂಡಿಯನ್ ಇಕಾನಮಿ” ಎಂಬ ಸದರ್ನ್ ಇಕಾನಾಮಿಸ್ಟ್ ಪ್ರಕಟಿಸಿದ ಪುಸ್ತಕ ಬಿಡುಗಡೆ ಮಾಡಿ ಅವರು ಹೇಳಿದರು.

 


ಸಾಮಾಜಿಕ ಪ್ರಗತಿಯಲ್ಲಿ ಬಹುಮುಖ್ಯವಾದ ಅರ್ಥ ವ್ಯವಸ್ಥೆ ಬಗ್ಗೆ ನಮ್ಮಲ್ಲಿ ವಿಚಾರ ವಿನಿಮಯ ನಡೆಯುವುದಿಲ್ಲ. ವಿಧಾನಸಭೆಯಲ್ಲಿ ಮಾತನಾಡದ ಶಾಸಕರು, ಯಾವುದೇ ಅಧ್ಯಯನ ಮಾಡದೇ ಪ್ರತಿಕ್ರಿಯೆ ನೀಡುವ ಜನಪ್ರತಿನಿಧಿಗಳೂ ಸಮಸ್ಯೆಗೆ ಕಾರಣರು. ಜಾಗತಿಕವಾಗಿ ನಡೆಯುವ ವಿದ್ಯಮಾನಗಳು ಆರ್ಥಿಕ ಪ್ರಗತಿಯ ನಡೆಗೆ ಸ್ವಲ್ಪ ವ್ಯತ್ಯಾಸ ಮಾಡಬಹುದಾದರೂ ನಮ್ಮ ಅರ್ಥ ವ್ಯವಸ್ಥೆಯ ಸ್ಥಿತಿಗತಿ ಶಿಸ್ತಿನಿಂದ ಕೂಡಿದ್ದರೆ, ಯಾವ ಜಾಗತಿಕ ಸಮಸ್ಯೆಗಳೂ ಏನನ್ನೂ ಮಾಡವು. ಅರ್ಥ ಸಚಿವರ ಕೆಲವು ನಡೆಗಳು ಆಕ್ಷೇಪಕ್ಕೆ ಕಾರಣವಾಗುವುದು ಅವರ ಕೆಲವು ತಪ್ಪು ನಿರ್ಧಾರಗಳಿಂದಾಗಿಯೇ ಆಗಿರುತ್ತದೆ. ಸ್ಥಳೀಯವಾಗಿಯಾಗಲಿ, ಕೇಂದ್ರದ ಮಟ್ಟಗಾಗಲಿ ಆಯವ್ಯಯ ಹಾಗೂ ಆರ್ಥಿಕ ವಿಚಾರದಲ್ಲಿ ಸಾರ್ವಜನಿಕ ಅಭಿಪ್ರಾಯಗಳಿಗೆ ಮಹತ್ವ ನೀಡಬೇಕು” ಎಂದು ಹೇಳಿದ ಅವರು ವಿ.ಮೋಹನರಾವ್ ಅವರು ಪುಸ್ತಕದಲ್ಲಿ ಪ್ರಕಟಿಸಿದ ಚಿಂತನೆಯ ವಿಷಯದಲ್ಲಿ ಚರ್ಚೆಗಳಾಗಬೇಕು” ಎಂದರು.
ಬೆಂಗಳೂರಿನ ಸದರ್ನ್ ಇಕಾನಾಮಿಸ್ಟ್ ಈ ಪುಸ್ತಕ ಪ್ರಕಟಿಸಿರುವುದಕ್ಕೆ ಅವರನ್ನು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಭಂಡಾರ್‍ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ|ಎನ್.ಪಿ.ನಾರಾಯಾಣ ಶೆಟ್ಟಿ, “ಭಾರತ ಎಲ್ಲಾ ವಿಚಾರಗಳಲ್ಲೂ ಶ್ರೀಮಂತ ರಾಷ್ಟ್ರವಾಗಿದ್ದು, ಆರ್ಥಿಕ ಸಾಮಾಜಿಕ ವಿಷಯದಲ್ಲಿ ಶಿಸ್ತು ಮೂಡಿದರೆ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ. ವಿ.ಮೋಹನರಾವ್ ಅವರ ಪುಸ್ತಕ ಹಲವು ಉತ್ತಮ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ” ಎಂದರು.
ಲೆಕ್ಕ ಪರಿಶೋಧಕರ ಸಂಘಟನೆಯ ಉಡುಪಿ ಘಟಕದ ಅಧ್ಯಕ್ಷ ಸಿಎ. ಪ್ರದೀಪ್ ಜೋಗಿ ಮಾತನಾಡಿ “ಜೀವನದಲ್ಲಿ ನಾಲ್ಕು ಗುರುಗಳು ನಮಗೆ ಮಾರ್ಗದರ್ಶನ ಮಾಡುತ್ತಾರೆ. ಅವುಗಳನ್ನು ಸರಿಯಾಗಿ ಅನುಸರಿಸಿದರೆ, ಸಮಾಜದ ಉತ್ತಮ ನಾಗರಿಕ, ನಾಯಕರಾಗಲು ನಾವು ಸಾಧ್ಯ. ಹೆತ್ತವರು, ಶಿಕ್ಷಕರು, ಉತ್ತಮ ಪುಸ್ತಕ ಜೀವನದ ಗುರುವಿನ ಸ್ಥಾನ ಪಡೆಯುತ್ತವೆ. ಇನ್ನೊಂದು ನಮಗೆ ನಾವೇ ಗುರುವಾಗಿರುವುದು. ಲೇಖಕ ವಿ.ಮೋಹನರಾವ್ ಇಂತಹ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜದ ಆರ್ಥಿಕ ಸಮಸ್ಯೆಗಳ ವಿಚಾರದಲ್ಲಿ ತಳಮಟ್ಟದ ಚಿಂತನೆ ನಡೆಸಲು ಸಾಧ್ಯವಾಗಿದೆ . ಉಳಿತಾಯವೂ ಲಾಭ ಎಂಬ ಅಂಶ ಗಮನದಲ್ಲಿರಿಸಿಕೊಳ್ಳಬೇಕು ” ಎಂದರು.
ಕುಂದಾಪುರ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ “ಆರ್ಥಿಕ ವಿಚಾರಗಳ ಸಮತೋಲನ, ಕೌಟುಂಬಿಕ ವಿಚಾರದಿಂದ ಸರಕಾರದ ಸಂಸ್ಥೆಗಳಲ್ಲಿ ಒಂದೇ ಆಗಿರುತ್ತದೆ. ಹಣ ಸಂಪಾದನೆಯ ಮಾರ್ಗದಷ್ಟೇ ಅದರ ಸದುಪಯೋಗದ ಮಾರ್ಗವೂ ಬಹಳ ಮುಖ್ಯ. ಆರ್ಥಿಕ ಸಂರಕ್ಷಣೆಯ ಅನ್ವೇಷಣೆ ವಿಷಯದಲ್ಲಿ ವಿ.ಮೋಹನರಾವ್ ಪುಸ್ತಕ ಮಾರ್ಗದರ್ಶಿ ಗ್ರಂಥವಾಗಿದೆ” ಎಂದರು.
ಬ್ಯಾಂಕರ್ ಆಗಿ ನ್ಯಾಯವಾದಿಯಾಗಿ, ಪತ್ರಕರ್ತರಾಗಿ 77 ರ ಹರೆಯದಲ್ಲೂ ಕ್ರಿಯಾಶೀಲರಾಗಿರುವ ವಿ.ಮೋಹನರಾವ್ ಹಾಗೂ ಅವರ ಪತ್ನಿ ಶ್ರೀಮತಿ ಸವಿತಾ ಎಂ.ರಾವ್ ಅವರನ್ನು ಅಭಿನಂದಿಸಲಾಯಿತು.
ಲೇಖಕ ವಿ.ಮೋಹನರಾವ್ ಸ್ವಾಗತಿಸಿದರು. ಶ್ರೀನಿವಾಸ ಶೇಟ್, ಕೆ.ಕೆ.ರಾಮನ್, ಹಂದಕುಂದ ಸೋಮಶೇಖರ ಶೆಟ್ಟಿ, ಅತಿಥಿಗಳನ್ನು ಪರಿಚಯಸಿದರು. ಎಸ್.ದಿನಕರ ಶೆಟ್ಟಿ, ವಿವೇಕ ಪೈ, ಕುಮಾರ್, ರಾಮಚಂದ್ರ ಆಚಾರ್ ಅತಿಥಿಗಳನ್ನು ಗೌರವಿಸಿದರು.
ಕುಂದಪ್ರಭ ಅಧ್ಯಕ್ಷ ಯು.ಎಸ್.ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು.  ಡಿ.ಕೆ.ಪ್ರಭಾಕರ ವಂದಿಸಿದರು.