ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಕೋಲಾರ ನಗರ ಬಂದ್ ತಾತ್ಕಾಲಿಕವಾಗಿ ಮುಂದೂಡಿಕೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಕೋಲಾರ ನಗರ ಬಂದ್ ತಾತ್ಕಾಲಿಕವಾಗಿ ಮುಂದೂಡಿಕೆ

ಕೋಲಾರ: ಪ್ರಗತಿಪರ ಸಂಘಟನೆಗಳು ಸೆ.27ರಂದು ಕರೆ ನೀಡಿದ್ದ ಕೋಲಾರ ನಗರ ಬಂದ್ ವಿಚಾರವಾಗಿ ಗುರುವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿ ಜೆ ಮಂಜುನಾಥ್ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್ ರೆಡ್ಡಿ ಹಾಗೂ ಕೋಲಾರ ಶಾಸಕ ಕೆ. ಶ್ರೀನಿವಾಸಗೌಡರ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳನ್ನು ಕರೆಯಿಸಿ ನಗರದ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೆ ಮಂಜೂರು ಮಾಡಿದ್ದ ಹಣವನ್ನು ವಾಪಸ್ಸು ಪಡೆದಿದ್ದು, ಆ ಅನುದಾನವನ್ನು 15 ದಿನಗಳೊಳಗಾಗಿ ವಾಪಸ್ಸು ಜಿಲ್ಲೆಗೆ ತರುವುದಾಗಿ ಭರವಸೆ ನೀಡಿದರು.
ಅದರಂತೆ ಸಂಘಟನೆಗಳ ಮುಖಂಡರುಗಳು ಕೆಲವು ಷರತ್ತುಗಳ ಮೇರೆಗೆ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಪರೀಕ್ಷೆಯ ಹಿತದೃಷ್ಠಿಯಿಂದ ಪ್ರಗತಿಪರ ಸಂಘಟನೆಗಳು ನೀಡಿದ್ದ ಬಂದ್ ಕರೆಯನ್ನು ತಾತ್ಕಾಲಿಕವಾಗಿ 15 ದಿನಗಳ ಮಟ್ಟಿಗೆ ಮುಂದೂಡಲಾಗಿದೆ. ನಗರದ ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ಜಿಲ್ಲಾಧಿಕಾರಿ ಅಥವಾ ಶಾಸಕರು ವಾಪಸ್ಸು ತರದ ಪಕ್ಷದಲ್ಲಿ ಪ್ರಗತಿಪರ ಸಂಘಟನೆಗಳು ಕೋಲಾರ ನಗರ ಬಂದ್‍ನ್ನು ಮತ್ತೊಮ್ಮೆ ಕರೆ ನೀಡಲಾಗುವುದು ಎಂದು ತಿಳಿಸಿದೆ.
ಇದೇ ಸಂದರ್ಭದಲ್ಲಿ ಹೋರಾಟಗಾರರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳನ್ನು ನಗರದ ಹದಗೆಟ್ಟಿರುವ ರಸ್ತೆಗಳ ವೀಕ್ಷಣೆಗೆ ಬರಲು ಆಗ್ರಹಿಸಿದರು. ಅದರಂತೆ ಸಂಜೆ 4 ಗಂಟೆಗೆ ಮೆಕ್ಕೆ ವೃತ್ತದಿಂದ ಕಾಲ್ನಡಿಗೆ ಮುಖಾಂತರ ಜಿಲ್ಲಾಧಿಕಾರಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು ಹಾಗೂ ಶಾಸಕರೊಂದಿಗೆ ಪ್ರಗತಿಪರ ಸಂಘಟನೆಗಳ ಮುಖಂಡರು ನಗರ ಪ್ರದಕ್ಷಿಣೆ ಮಾಡಿ, ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ವೀಕ್ಷಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ಕರೆಯಿಸಿ ಅವರಿಗೆ ರಸ್ತೆಗಳ ದುರಸ್ಥಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ನೀರಾವರಿ ಹೋರಾಟ ಸಮಿತಿಯ ಕುರುಬರಪೇಟೆ ವೆಂಕಟೇಶ್, ಸಿಪಿಎಂ ನಾರಾಯಣಸ್ವಾಮಿ, ಅಹಿಂದ ಮಂಜುನಾಥ್, ರೈತಸಂಘದ ಕಲ್ವಮಂಜಲಿ ರಾಮುಶಿವಣ್ಣ, ಜಯ ಕರ್ನಾಟಕ ತ್ಯಾಗರಾಜ್, ರೈತ ಸಂಘದ ಶ್ರೀನಿವಾಸಗೌಡ, ನಳಿನಿಗೌಡ, ದಲಿತ ಮುಖಂಡ ಎಂ.ಆರ್.ಚೇತನ್‍ಬಾಬು, ಸಿಪಿಎಂ ಶ್ರೀರಾಮ್, ಸಿಪಿಎಂ ವೆಂಕಟೇಶ್, ಹ್ಯೂಮನ್ ರೈಟ್ಸ್ ಶಿವಕುಮಾರ್, ಗಲ್‍ಪೇಟೆ ಸಂತೋಷ್, ಚಿನ್ನಾಪುರ ಅನೀಲ್, ಕಲ್ಯಾಣ್, ಆಟೋ ಯೂನಿಯನ್ ನಾರಾಯಣಸ್ವಾಮಿ, ಲಾರಿ ಮಾಲೀಕರ ಬಾಷಾ ಖಾನ್, ವರ್ತಕರ ಸಂಘದ ಶ್ರೀಧರ್, ಚಲಪತಿ, ರಾಘವೇಂದ್ರ ಬಾಲಾಜಿ, ಕನ್ನಡ ಸೇನೆ ನಟರಾಜ್, ಚಿನ್ನಿ ಶ್ರೀನಿವಾಸ್, ಜಿ.ನಾರಾಯಣಸ್ವಾಮಿ, ಪುಟ್ಟರಾಜು ಹಾಜರಿದ್ದರು.