ಪ್ರತಿಯೊಬ್ಬರು ಮರಣ ನಂತರ ನೇತ್ರದಾನ ಮಾಡಿ – ಸಿ ಸತ್ಯಭಾಮ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ, ಪ್ರತಿಯೊಬ್ಬರು ತಮ್ಮ ಮರಣ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಿನಲ್ಲಿ ಬೆಳಕನ್ನು ನೀಡಿ. ನಾವು ಸತ್ತರು ನಮ್ಮ ಕಣ್ಣುಗಳು ಬದುಕಿರಬೇಕೆಂದರೆ ನೇತ್ರದಾನ ಮಾಡುವ ಮೂಲಕ ಸಾದ್ಯ ಎಂದು ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ಹೇಳಿದರು.

ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 35ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಪ್ರಚಾರದ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಣ್ಣು ಇಲ್ಲದವರಿಗೆ ಮಾತ್ರ ಕಣ್ಣಿನ ಬೆಲೆ ಗೊತ್ತಾಗುತ್ತದೆ. ಯಾವುದು ಯಾರ ಬಳಿ ಇರುವುದಿಲ್ಲವೋ ಅವರಿಗೆ ಅದರ ಮೌಲ್ಯ ಗೊತ್ತಾಗುತ್ತದೆ. ಕಣ್ಣು ಇದ್ದಾಗ ಅದನ್ನು ನೋಡಿ ಅನುಭವಿಸುವ ಬಗೆಯೇ ಬೇರೆ. ಡಾ ರಾಜ್ ಕುಮಾರ್ ಅವರು ನೇತ್ರದಾನ ಮಾಡಿ ಅರಿವು ಮೂಡಿಸಿದರು. ಕಣ್ಣು ದೇಹದ ಅತ್ಮಮೂಲ್ಯವಾದ ಆಂಗ. ಮರಣ ಹೊಂದಿದ 6 ಗಂಟೆಗಳೊಳಗೆ ಕಣ್ಣು ದಾನ ಮಾಡಬಹುದಾಗಿದೆ ಎಂದರು.

ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಿನ್ನಸ್ವಾಮಿಗೌಡ ಅವರು ಮಾತನಾಡಿ, ಕಣ್ಣು ಇಲ್ಲದವರಿಗೆ ಕಣ್ಣು ಕೊಟ್ಟರೆ ಅವರ ಬಾಳಿಗೆ ಬೆಳಕಾಗುತ್ತದೆ. ಕಣ್ಣು ಇಲ್ಲದವರು ಲಕ್ಷಗಟ್ಟಲೆ ಇದ್ದಾರೆ. ವ್ಯಕ್ತಿಯು ಮರಣ ಹೊಂದಿದ ನಂತರ ನೇತ್ರದಾನ ಮಾಡಿ ಎಂದರು.

ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳಾದ ಡಾ.ಎಂ.ಸಿ.ನಾರಾಯಣಸ್ವಾಮಿ ಅವರು ಮಾತನಾಡಿ, ನೇತ್ರದಾನ ಸರ್ವಕಾಲಕ್ಕೂ ಶ್ರೇಷ್ಠ ದಾನ. ಇದು ಅಂಧತ್ವ ನಿವಾರಿಸುವ ಕಾರ್ಯಕ್ರಮವಾಗಿದ್ದು, 6.5 ಮಿಲಿಯನ್ ಜನರು ಕಾಡ್ರಿಯಲ್ ಬ್ಲೈಂಡ್ ಲೇನ್ಸ್ ಸಮಸ್ಯೆಗೆ ಗುರಿಯಾಗಿದ್ದಾರೆ. 75 ಸಾವಿರ ದಿಂದ 1 ಲಕ್ಷ ದಾನಿಗಳು ಮಾತ್ರ ಇದ್ದಾರೆ. ಕರ್ನಾಟಕದಲ್ಲಿ 1 ಲಕ್ಷ 20 ಸಾವಿರ ಅಂಧತ್ವದಿಂದ ನರಳುತ್ತಿದ್ದು ಕೇವಲ 6 ಸಾವಿರ ದಾನಿಗಳು ಸಿಗುತ್ತಿದ್ದಾರೆ. ಮರಣದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿದರೆ ಅಂಧತ್ವವನ್ನು ನಿವಾರಿಸಬಹುದು ಎಂದರು.

ಅಪೌಷ್ಟಿಕತೆಯಿಂದ ಕಣ್ಣು ತೊಂದರೆಗಳು ಕಾಣಿಸಿಕೊಳ್ಳುತ್ತದೆ ನೇತ್ರದಾನ ಮಾಡಲು ನೊಂದಣಿ ಮಾಡಿಕೊಳ್ಳಿ. ಮರಣ ಸಂಭವಿಸಿದ 6 ಗಂಟೆಗಳ ಒಳಗೆ ಮಾಹಿತಿ ನೀಡಿದರೆ 20 ನಿಮಿಷಗಳಲ್ಲಿ ಕಣ್ಣನ್ನು ತೆಗೆದುಕೊಳ್ಳಲಾಗುವುದು. ಕರೋನಾ,ಜಾಂಡಿಸ್,ಮತ್ತು ಹೆಚ್.ಐ.ವಿ ಇರುವವರನ್ನು ಹೊರತು ಪಡಿಸಿ ಉಳಿದವರು ದಾನ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನೇತ್ರದಾನ ಕುರಿತಾದ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ವಿಜಯ ಕುಮಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ ಚಂದನ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ ಜಗದೀಶ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಹಾಜರಿದ್ದರು.