ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ದೇಶದ ಆರ್ಥಿಕ ಅಭಿವೃದ್ಧಿಗೆ ಎಲ್ಐಸಿ ಕೊಡುಗೆ ಅಪಾರ. ಗಳಿಸಿದ ಲಾಭಾಂಶದ ಬಹು ದೊಡ್ಡ ಮೊತ್ತವನ್ನು ದೇಶದ ಜನರ ಕ್ಷೇಮಾಭಿವೃದ್ಧಿಗಾಗಿ ಕೊಡುಗೆಯಾಗಿ ನೀಡಿದೆ ಎಂದು ಎಲ್ಐಸಿ ವಿಭಾಗೀಯ ಹಿರಿಯ ವ್ಯವಸ್ಥಾಪಕ ಆಸೀಸ್ ಕುಮಾರ್ ಹೇಳಿದರು.
ಪಟ್ಟಣದ ಎಲ್ಐಸಿ ಉಪ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಎಲ್ಐಸಿ ಪ್ರತಿನಿಧಿಗಳ ಸಭೆಯಲ್ಲಿ ಗಣನೀಯ ಸಾಧನೆ ಮಾಡಿದ ಪ್ರತಿನಿಧಿಗಳನ್ನು ಸನ್ಮಾನಿಸಿ ಮಾತನಾಡಿ, ಸಂಸ್ಥೆ ಕಳೆದ ಆರ್ಥಿಕ ವರ್ಷದಲ್ಲಿ ರೂ.53 ಸಾವಿರ ಕೋಟಿ ಲಾಭ ಗಳಿಸಿದೆ. ಆ ಪೈಕಿ ರೂ.2600 ಕೋಟಿ ಹಣವನ್ನು ಕೇಂದ್ರ ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ ಎಂದು ಹೇಳಿದರು.
ಎಲ್ಐಸಿ ಪ್ರತಿನಿಧಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲೂ ಶ್ರೀನಿವಾಸಪುರ ಶಾಖೆ ಮುಂಚೂಣಿಯಲ್ಲಿದೆ. ಪಾಲಿಸಿ ಮಾಡಿಸುವಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಗಳಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಅವಕಾಶ ಇರುವುದರಿಂದ, ಪ್ರತಿನಿಧಿಗಳು ಆ ಕಡೆ ಗಮನ ಹರಿಸಬೇಕು. ಜನರ ಮನವೊಲಿಸಿ ಪಾಲಿಸಿ ನೀಡಬೇಕು ಎಂದು ಹೇಳಿದರು.
ಎಲ್ಐಸಿ ಮಾರುಕಟ್ಟೆ ವ್ಯವಸ್ಥಾಪಕ ಶ್ರೀಕುಮಾರ್, ಮಾರುಕಟ್ಟೆ ಅಧಿಕಾರಿ ಮಹಮದ್ ಐಸಾಕ್, ವ್ಯವಸ್ಥಾಪಕ ಸತೀಶ್, ಅಧಿಕಾರಿಗಳಾದ ನಟರಾಜ್, ನಟೇಶ್, ಅಬಿವೃದ್ಧಿ ಅಧಿಕಾರಿಗಳಾದ ರವೀದ್ರಯ್ಯ ಆರ್.ಕುಲಕರ್ಣಿ, ಬಾಲಚಂದ್ರ, ಶ್ರೀನಿವಾಸ್ ಇದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ