ಜನಾಭಿಪ್ರಾಯವಿಲ್ಲವೆ ಅಧಿವೇಶನದಲ್ಲಿ ಅಂಗೀಕೃತವಾಗಿರುವ ಭೂ ಸುಧಾರಣಾ ಕಾಯ್ದೆ ಆದೇಶವನ್ನು ರದ್ದುಪಡಿಸಬೇಕೆಂದು ರೈತ ಸಂಘದಿಂದ ಆಗ್ರಹ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ-10,ಡಿ, ಜನಾಭಿಪ್ರಾಯವಿಲ್ಲವೆ ಅಧಿವೇಶನದಲ್ಲಿ ಅಂಗೀಕೃತವಾಗಿರುವ ಭೂ ಸುಧಾರಣಾ ಕಾಯ್ದೆ ಆದೇಶವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂದ ಮೆಕ್ಕೆ ಸರ್ಕಲ್‍ನಲ್ಲಿ ಮುಖ್ಯಮಂತ್ರಿ ಭೂತದಹನ ಮಾಡಿ, ಶಿರಸ್ತೇದಾರ್ ಮುಖಾಂತರ ಮಾನ್ಯ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ದೇಶವನ್ನು ಆಳ್ವಿಕೆ ಮಾಡುತ್ತಿದ್ದ ಬ್ರಿಟೀಷರು ದೇಶದಲ್ಲಿ ದುಡಿಯುವ ಕೈಗೆ ಕೆಲಸ ಕೊಡಲು ಕೃಷಿ ಭೂಮಿಯನ್ನು ನೀಡಿದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮ್ಮನ್ನಾಳುವ ಸರ್ಕಾರಗಳು ತಮಗೆ ಇಷ್ಟಬಂದ ರೀತಿ ರಾತ್ರೋರಾತ್ರಿ ಕಾಯ್ದೆಗಳನ್ನು ಜಾರಿಗೆ ತಂದು ನಾವೆ ರಾಜ, ನಾವೆ ಮಂತ್ರಿ ಎಂಬ ಹಿಟ್ಲರ್ ದೋರಣೆಯನ್ನು ಅನುಸರಿಸುತ್ತಿದ್ದಾರೆ.
ಮತ್ತೊಂದಡೆ ಕೃಷಿ ಕ್ಷೇತ್ರವನ್ನು ದಿನೇ ದಿನೇ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲವಾಗಲೆಂದು ವಿವಿಧ ಕಾನೂನುಗಳನ್ನು ಜಾರಿಗೆ ತಂದು ರೈತರ ಕೃಷಿ ಜಮೀನನ್ನು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅದರಲ್ಲಿ ಪ್ರಮುಖವಾಗಿ ರಸ್ತೆ, ಕೈಗಾರಿಕೆ ಮತ್ತಿತರ ಯೋಜನೆಗಳ ಹೆಸರಿನಲ್ಲಿ ರೈತರ ಜಮೀನನ್ನು ಕಬಳಿಸುವ ಜೊತೆಗೆ ಇಂದು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲವಾಗಲಿ ಸಣ್ಣ ತುಂಡು ಭೂಮಿ ಹೊಂದಿರುವ ವಂಶಪರಂಪರೆಯಾಗಿ ಭೂತಾಯಿಯನ್ನೇ ನಂಬಿರುವ ರೈತರ ಕೃಷಿ ಜಮೀನನ್ನು ರೈತರೇ ಖರೀದಿ ಮಾಡಬೇಕೆಂಬ ಆದೇಶವನ್ನು ಇಂದು ರಾಜಕಾರಣಿಗಳು ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಉದ್ದಿಮೆಗಳು ಒಟ್ಟಾರೆಯಾಗಿ ಹಣವಂತರು ಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯರು 450 ಎಕರೆ ಕೃಷಿ ಜಮೀನು ಖರೀದಿ ಮಾಡಲು ಅವಕಾಶ ಮಾಡಿಕೊಡುವ ಭೂ ಸುಧಾರಣೆ ಕಾಯ್ದೆ ಯಾವುದೇ ಜನಾಭಿಪ್ರಾಯ ವಿಲ್ಲದೆ ಏಕಾ ಏಕಿ ಬಿಜೆಪಿ ಮತ್ತು ಜೆ.ಡಿ.ಎಸ್ ಪಕ್ಷದವರು ಬಹುಮತ ಸೂಚನೆ ಮಾಡುವ ಮುಖಾಂತರ ಜಾರಿ ಮಾಡಿ ರೈತ ವಿರೋಧಿ ದೋರಣೆ ಅನುಸರಿಸುತ್ತಿದ್ದಾರೆಂದು ಆಕ್ರೋಷ ವ್ಯಕ್ತಪಡಿಸಿದರು.

ತಾಲ್ಲೂಕು ಅಧ್ಯಕ್ಷರು ಈಕಂಬಳ್ಳಿ ಮಂಜುನಾಥ ಮಾತನಾಡಿ, ಮಣ್ಣಿನ ರೈತರೇ ನನ್ನ ಬೆನ್ನಲಬು ರೈತರಿಗಾಗಿ ನಾನು ಬದುಕಿದ್ದೇನೆಂದು ಸಾರ್ವಜನಿಕವಾಗಿ ರೈತರ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡುವ ಬಿಜೆಪಿಯನ್ನು ರೈತ ದ್ರೋಹಿಯೆಂದ ಮಾನ್ಯ ಕುಮಾರಸ್ವಾಮಿಯವರೇ ಭೂ ಸುಧಾರಣೆ ಕಾಯ್ದೆ ವಿರೋಧಿ ಮಾಡುತ್ತಿದ್ದ ತಾವುಗಳು ರಾತ್ರೋರಾತ್ರಿ ಇದಕ್ಕೆ ಬೆಂಬಲವಾಗಿ ನಿಂತು ರೈತ ವಿರೋಧಿ ಆದೇಶಕ್ಕೆ ಕೈ ಜೋಡಿಸಿರುವುದು ಯಾವ ಲೆಕ್ಕ.
ರಾತ್ರಿ ವೇಳೆ ಬಿ.ಜೆ.ಪಿ ಜೊತೆ ಶಾಮೀಲಾಗಿ ನಾನು ಭೂ ಸುಧಾರಣೆ ಕಾಯ್ದೆಯ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಿದ್ದೇನೆಂದು ಹೇಳಿಕೊಳ್ಳುವ ತಾವು ತಿದ್ದುಪಡಿ ಅಂಶಗಳನ್ನು ಜನರ ಮುಂದೆ ತಂದು ಜನಾಭಿಪ್ರಾಯ ಸಂಗ್ರಹಿಸಿ ಆ ನಂತರ ಬೆಂಬಲ ನೀಡಬಹುದಾಗಿತ್ತಲ್ಲ.
ಇದು ಸಮಸ್ತ ರೈತರ ಪ್ರಶ್ನೆ ಮಣ್ಣಿನ ಮಗ ತಾವುಗಳಿಗೆ ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮುಖಾಂತರ ಕೃಷಿ ಭೂಮಿ ಖರೀದಿ ಮಾಡಲು ಇದ್ದಂತಹ ಕಾನೂನು ತೊಡಕುಗಳಾದ ಕಲಂ 63, ಕಲಂ 79ಎ, 79ಬಿ, 80, 109 ರ ಕಲಂಗಳನ್ನು ರದ್ದುಗೊಳಿಸಿ, ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿಸಬಹುದು ಈ ಒಂದು ಕಾಯ್ದೆಯಿಂದ ತುಂಡು ಭೂಮಿ ಹೊಂದಿರುವ ರೈತರು ಬೀದಿ ಬೀಳುವ ಜೊತೆಗೆ ಕೃಷಿ ಕ್ಷೇತ್ರವನ್ನು ತೊರೆದು ಆತ್ಮಹತ್ಯೆ ಮತ್ತು ತನ್ನ ಜೀವನ ನಿರ್ವಹಣೆಗೆ ಬೆಂಗಳೂರಿನ ಕಾರ್ಪೋರೇಟ್ ಕಂಪನಿಗಳ ಮುಂದೆ ಕೆಲಸಕ್ಕಾಗಿ ಅಂಗಲಾಚಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಪರಿಸ್ಥಿತಿ ನೀವೆ ರೈತರಿಗೆ ನೀಡುತ್ತಿದ್ದೀರಾ ಎಂದು ಕುಮಾರಸ್ವಾಮಿ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಆ ನಂತರ ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮೊದಲು ಆಯಾ ಜಿಲ್ಲಾಧಿಕಾರಿಗಳೊಡನೆ ಸಂಬಂಧಪಟ್ಟ ರೈತರ ಸಭೆ ನಡೆಸಿ ಅಭಿಪ್ರಾಯ ವರದಿ ಪಡೆದು ಕಾಯ್ದೆ ಜಾರಿಗೆ ತರಬಹುದಾಗಿತ್ತು. ಆದರೆ ರಾಜಕಾರಣಿಗಳ ತಮ್ಮ ಕಪ್ಪುಹಣವನ್ನು ಜಮೀನು ಖರೀದಿ ಮಾಡುವ ಮುಖಾಂತರ ಕಾನೂನಿನ ತೊಡಕು ತಪ್ಪಿಸಿಕೊಳ್ಳಲು ಈ ರೀತಿಯ ಕಾಯ್ದೆ ಜಾರಿಗೆ ತರುತ್ತಿರುವುದು ರೈತ ವಿರೋಧಿಯಾಗಿರುವುದರಿಂದ ಮಾನ್ಯ ಗೌರವಾನ್ವಿತ ರಾಜ್ಯಪಾಲರು ಜನಾಭಿಪ್ರಾಯವಿಲ್ಲದ ಭೂಸುಧಾರಣೆ ಕಾಯ್ದೆಗೆ ಯಾವುದೇ ಕಾರಣಕ್ಕೂ ಅಂಕಿತ ನೀಡಬಾರದೆಂದು ಸಮಸ್ಥ ಕರ್ನಾಟಕ ರೈತರ ಪರವಾಗಿ ಮಾನ್ಯರಲ್ಲಿ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರ್ ಕೊಂಡಪ್ಪ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಂಗಸಂದ್ರ ತಿಮ್ಮಣ್ಣ, ನಾಗೇಶ್, ಬಂಗಾರಪೇಟೆ ತಾ.ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಐತಂಡಹಳ್ಳಿ ಮುನ್ನ, ಕಿರಣ್, ಜಮೀರ್‍ಪಾಷ, ಮಾಸ್ತಿ ವೆಂಕಟೇಶ್, ಚಾಂದ್‍ಪಾಷ, ಮೊಹಮದ್ ಶೋಹಿಬ್, ಶ್ರೀನಿವಾಸಪುರ ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ನವೀನ್, ಕೇಶವ, ವೇಣು, ಮುಂತಾದವರು ಇದ್ದರು
.