ಕೋವಿಡ್-19 : ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್‍ನಿಂದ ಆರೋಗ್ಯ ಇಲಾಖೆಗೆ ವಾಹನ ಹಸ್ತಾಂತರ

JANANUDI.COM NETWORK

ಕೊರೋನಾ ಸೋಂಕು ನಿಯಂತ್ರಣ ಅಭಿಯಾನದಲ್ಲಿ, ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೆರವಾಗುವ ದೃಷ್ಠಿಯಿಂದ, ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮಾರುತಿ ಓಮ್ನಿ ವಾಹನವನ್ನು ಮಾದರಿ ಸಂಗ್ರಹ ಸಂಚಾರಿ ಘಟಕಕ್ಕಾಗಿ ಹಸ್ತಾಂತರಿಸಲಾಗಿದೆ.
ಕುಂದಾಪುರ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಇದನ್ನು ಒಪ್ಪಿಸಲಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಗಂಟಲು ದ್ರವ ಮಾದರಿ ಸಂಗ್ರಹ ಸಂಚಾರಿ ಘಟಕವಾಗಿ ಈ ವಾಹನವನ್ನು ಪರಿವರ್ತಿಸಿದ್ದಾರೆ. ಸ್ವಯಂ ಚಾಲಿತ ಹೊಸ ಮಾದರಿಯ ಸೆನಿಟೈಸರ್ ಹಾಗೂ ಗಂಟಲು ದ್ರವ ಸಂಗ್ರಹ ವ್ಯವಸ್ಥೆಯಲ್ಲೂ ಹೊಸತನ ಈ ಸಂಚಾರಿ ಘಟಕದಲ್ಲಿದೆ.
ಗಿಳಿಯಾರು ಕುಶಲಹೆಗ್ಡೆ ಚಾರಿಟೆಬಲ್ ಟ್ರಸ್ಟ್‍ನ ಪರವಾಗಿ ಉಪ ಆಯುಕ್ತ ಕೆ. ರಾಜು ಅವರ ಮೂಲಕ, ಕುಂದಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪರಿಗೆ ಹಸ್ತಾಂತರಿಸಲಾಯಿತು.
ಉಪವಿಭಾಗಾಧಿಕಾರಿ ಕೆ. ರಾಜು ಅವರು ಮಾತನಾಡಿ “ಕೋವಿಡ್ -19 ಸಮಸ್ಯೆಯ ಕಾರಣದಿಂದ ಲಾಕ್‍ಡೌನ್ ಆದಂದಿನಿಂದ ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್‍ನವರು ವಲಸೆ ಕಾರ್ಮಿಕ ಜೀವನ ನಿರ್ವಹಣೆಗೆ ಸುಮಾರು 4.5 ಲಕ್ಷ ರೂ. ಮೌಲ್ಯದ ಆಹಾರ ವಸ್ತುಗಳ ಕಿಟ್, ವಸ್ತ್ರ ಮುಂತಾದವುಗಳನ್ನು ನೀಡಿದ್ದರು. ಈಗ ಆರೋಗ್ಯ ಇಲಾಖೆಗೆ ಮಾದರಿ ಸಂಗ್ರಹ ಘಟಕಕ್ಕಾಗಿ ವಾಹನ ನೀಡಿ ತುಂಬ ನೆರವು ನೀಡಿದ್ದಾರೆ. ಇಂತಹ ದಾನಿಗಳ ನೆರವು ಉಡುಪಿ ಜಿಲ್ಲೆಗೆ ಕೋವಿಡ್-19 ನಿರ್ವಹಣೆಯಲ್ಲಿ ಬಹಳ ಅನುಕೂಲವಾಗಿದೆ ಎಂದರು.
ಡಾ.ನಾಗಭೂಷಣ ಉಡುಪರು ವಿವರಣೆ ನೀಡಿ “ಮಾದರಿ ಸಂಗ್ರಹ ಸಂಚಾರಿ ಘಟಕದ ಪ್ರಯೋಗ ಬಹಳ ಯಶಸ್ವಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪೇಟೆಗೆ ಬರಲಾಗದ, ಆರೋಗ್ಯ ಕೇಂದ್ರಕ್ಕೆ ಬರಲಾಗದ ಜನರ ಗಂಟಲು ದ್ರವ ತಪಾಸಣೆಗಾಗಿ ನಮಗೆ ಇನ್ನೊಂದು ವಾಹನ ಅಗತ್ಯವಾಗಿತ್ತು. ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್‍ನವರು ವಾಹನ ಬಳಕೆಗೆ ಒದಗಿಸಿ ಉಪಕಾರ ಮಾಡಿದ್ದಾರೆ” ಎಂದರು.
ಟ್ರಸ್ಟ್‍ನ ಪರವಾಗಿ ಕಾರ್ಯದರ್ಶಿ ಯು.ಎಸ್.ಶೆಣೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಟ್ರಸ್ಟಿಗಳಾದ ಉದಯ ಹೆಗ್ಡೆ, ಜಿ. ಸಂತೋಷ ಕುಮಾರ್ ಶೆಟ್ಟಿ, ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗಳನ್ನು ಅಭಿನಂದಿಸಿ ಶುಭಹಾರೈಸಿದರು.
ಖಚಾಂಚಿ ಸ್ನೇಹಾ ರೈ, ಟ್ರಸ್ಟಿಗಳಾದ ಕಿಶೋರ್ ಹೆಗ್ಡೆ, ಡಾ. ಸ್ವರೂಪ ಹೆಗ್ಡೆ, ಕೆ.ಕೆ.ರಾಮನ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ನಾರಾಯಣ ಕೆ. ವಂದಿಸಿದರು.
ರಾಜ್ಯದಲ್ಲೇ ಉಡುಪಿ ಮಾದರಿ ಜಿಲ್ಲೆ
ಕೊರೋನಾ ಸೋಂಕು ನಿಯಂತ್ರಣದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮಾದರಿ ಜಿಲ್ಲೆಯಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಗ್ರೀನ್‍ ಝೋನ್‍ಗೆ ಬಂದ ಜಿಲ್ಲೆಯಾಗಿತ್ತು. ಕೊರೋನಾ ಸಾವಿನ ಪ್ರಮಾಣದಲ್ಲೂ ದೇಶದಲ್ಲೇ ಕಡಿಮೆ ಸಂಖ್ಯೆ ಹೊಂದಿತ್ತು. ಸಮರ್ಥ ಜಿಲ್ಲಾಧಿಕಾರಿಗಳು ನಮ್ಮ ಜಿಲ್ಲೆಗೆ ದೊರೆತಿದ್ದಾರೆ. ಅವರ ನಾಯಕತ್ವ ಎಲ್ಲ ಸರಕಾರಿ ನೌಕರರಿಗೂ ಸ್ಫೂರ್ತಿ. ಶಾಸಕರು, ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ. ಪೋಲೀಸ್ ವರಿಷ್ಠಾಧಿಕಾರಿಗಳು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಮೂಲಕ ಉತ್ತಮ ಸೇವೆ ನೀಡುತ್ತಿದ್ದಾರೆ. ಆರೋಗ್ಯ ಇಲಾಖೆಯವರ ಸೇವೆ ಅನುಕರಣೀಯವಾಗಿದೆ, ಮಾದರಿಯಾಗಿದೆ. ಕೆಲವೇ ಜನರ ಅಪಸ್ವರ ಹೊರತು ಪಡಿಸಿದರೆ ಜಿಲ್ಲೆಯ ಜನರ ಸಹಕಾರವೂ ಶ್ಲಾಘನೀಯ. ದಾನಿಗಳ ಸಹಕಾರ ಮರೆಯುವಂತಿಲ್ಲ. ಕೋವಿಡ್ 19 ಸಮಸ್ಯೆಯ ಕಾಲದಲ್ಲಿ ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್‍ನ ನೆರವು ಅಭಿನಂದನೀಯ”
ಎಂದು ಕೆ. ರಾಜು, ಉಪ ಆಯುಕ್ತರು ನುಡಿದರು