ಕೋಲಾರ : ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಗಾಂಧಿಜಯಂತಿ ಆಚರಣೆ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ


ಕೆಜಿಎಫ್., ಅ. 2 :ಕೋಲಾರ ಚಿನ್ನದ ಗಣಿ ಪ್ರದೇಶದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಶುಕ್ರವಾರದಂದು ಮಹಾತ್ಮಗಾಂಧಿ ಜಯಂತಿಯನ್ನು ಅರ್ಥಪೂರ್ಣವಾದ ರೀತಿಯಲ್ಲಿ ಆಚರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಮಹಾತ್ಮನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಗಾಂಧಿಜೀ ಅವರ ಕೊಡುಗೆಯನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಸ್ವಚ್ಚತೆ ಕಾರ್ಯಕ್ರಮಕ್ಕೆ ಎಸ್ಪಿ ಇಲಕ್ಕಿಯಾ ಕರುಣಾಕರನ್ ಅವರು ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ಕಛೇರಿಯ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸ್ವಚ್ಚತೆಯನ್ನು ಶ್ರಮದಾನದ ಮೂಲಕ ಮಾಡಲಾಯಿತು. ಶ್ರಮದಾನದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಡಿವೈಎಸ್ಪಿ ಉಮೇಶ್, ಸರ್ಕಲ್ ಇನ್ಸ್‍ಪೆಕ್ಟರ್ ಮುಸ್ತಾಕ್‍ಪಾಷ, ಸೂರ್ಯಪ್ರಕಾಶ್, ತಬ್ರೇಅಲಂಪಾಷ, ನಿಸ್ತಂತು ನಿರೀಕ್ಷಕ ಚಂದ್ರಶೇಖರ್, ಆರ್‍ಪಿಐ ಟಿ.ಮಂಜುನಾಥ, ಪಿಐ ಶಿವರಾಜ್‍ಮುಧೋಳ್, ವೆಂಕಟೇಶಮೂರ್ತಿ, ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಶಾಖಾಧೀಕ್ಷಕ ಎಂ.ಮೂರ್ತಿ ಮತ್ತು ಜಿಲ್ಲೆಯ ಪಿಎಸ್‍ಐಗಳು, ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕೆಜಿಎಫ್ ಪೊಲೀಸ್ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ, ವೃತ್ತ ಕಛೇರಿಗಳಲ್ಲಿ ಹಾಗೂ ಡಿ.ಎ.ಆರ್. ಆವರಣದಲ್ಲಿ ಸ್ವಚ್ಚತೆ ಕಾರ್ಯಕ್ರಮವನ್ನು ಗಾಂಧಿ ಜಯಂತಿ ಪ್ರಯುಕ್ತ ಮಾಡಲಾಯಿತು.