ಕೋಲಾರ ಎ.ಪಿಎಂಸಿ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸಿ, ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ವೆಂಟಿಲೇಟರ್ ತಜ್ಞರು ಹಾಗೂ ವೈದ್ಯಕೀಯ ಸಿಬ್ಬಂದಿ ಕೂಡಲೇ ಖಾಯಂ ಆಗಿ ಭರ್ತಿ ಮಾಡಿ: ರೈತ ಸಂಘ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ, ಸೆ.29 : ಎ.ಪಿಎಂಸಿ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸಿ ಮತ್ತು ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ವೆಂಟಿಲೇಟರ್ ತಜ್ಞರು ಹಾಗೂ ವೈದ್ಯಕೀಯ ಸಿಬ್ಬಂದಿ ಕೂಡಲೇ ಖಾಯಂಆಗಿ ಭರ್ತಿ ಮಾಡಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಈ ಹಿಂದೆ ಮಡಿವಾಳ ಗ್ರಾಮದ ಬಳಿ ಮಾರುಕಟ್ಟೆಗೆ ಸ್ಥಳ ಪರೀಶೀಲನೆ ಮಾಡಿ, ಮಾರುಕಟ್ಟೆಯ ಜಾಗದ ಸಮಸ್ಯೆಯನ್ನು ಬಗೆಹರಿಸುವಂತೆ ಹೇಳಿದ್ದೀರಾ ಆದಷ್ಟು ಶೀಘ್ರವಾಗಿ ಮಾರುಕಟ್ಟೆಗೆ ಜಾಗದ ಸಮಸ್ಯೆ ಬಗೆಹರಿಸಬೇಕು ಮತ್ತು ಕೋಲಾರ ಜಿಲ್ಲೆಯಲ್ಲಿ ಹೆಸರಾಗಿರುವ ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯು ಕೋವಿಡ್-19 ಆಸ್ಪತ್ರೆಯಾಗಿ ಮಾರ್ಪಟ್ಟಿದ್ದು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಪ್ರತ್ಯೇಕವಾಗಿ ಎಲ್ಲ ಸೌಲಭ್ಯಗಳು ಲಭ್ಯವಿವೆ. ಕೋಟ್ಯಾಂತರರೂಪಾಯಿ ಅನುದಾನದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇದರಿಂದಾಗಿ ಲಕ್ಷಾಂತರ ಬಡ ರೋಗಿಗಳಿಗೆ ಸಾಕಷ್ಟು ಅನುಕೂಲವೂ ಆಗಿದೆ. ಗುತ್ತಿಗೆ ಆಧಾರದ ಮೇರೆಗೆ ವೈದ್ಯರನ್ನು ನೇಮಕ ಮಾಡಲಾಗಿದ್ದು, ಅದರ ಜೊತೆಗೆ ಕೊರೊನಾ ಸಮಯದಲ್ಲಿ ತುರ್ತು ಸಂದರ್ಭಕ್ಕಾಗಿ 20 ವೆಂಟಿಲೇಟರ್‍ಗಳು ಸಿದ್ಧಪಡಿಸಲಾಗಿದ್ದರೂ ನುರಿತ ತಜ್ಞರಿಲ್ಲದೆ ಬಳಕೆಯಾಗುತ್ತಿಲ್ಲವೆಂದು ಅಸಮಾದಾನ ವ್ಯಕ್ತಪಡಿಸಿದರು.

ಪ್ರಸ್ತುತ ಖಾಸಗಿ ಆಸ್ಪತ್ರೆಗಳನ್ನು ಮೆಟ್ಟಿ ನಿಂತಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ ತಜ್ಞರು, ಸಿಬ್ಬಂದಿ ಇಲ್ಲದ ಕಾರಣ ರೋಗಿಗಳು ಪರದಾಡುವಂತಾಗಿ ವಿಧಿಯಿಲ್ಲದೆ ಖಾಸಗಿ ಆಸ್ಪತ್ರೆಗಳತ್ತ ತೆರಳುವಂತಾಗಿದೆ. ಇನ್ನು ಮೆಡಿಕಲ್ ಕಾಲೇಜಿಗೆ ಹೋಗಬೇಕಾದರೆ 1 ಲಕ್ಷರೂ ಇರಲೇಬೇಕಾಗಿದ್ದು, ಅಲ್ಲಿಗೆ ಹೋದರೆ ಹೆಣ ವಾಪಸ್ಸು ಬರುತ್ತದೆಯೇ ಹೊರತು ರೋಗಿ ಗುಣಮುಖರಾಗಿ ಬರುವುದಿಲ್ಲ. ಹಾಗಾಗಿ ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಗೆ ಈಗಾಗಲೇ ಕೋಟ್ಯಂತರರೂ ಅನುದಾನ ಖರ್ಚು ಮಾಡಿ ಸೌಲಭ್ಯಗಳನ್ನು ನೀಡಿರುವಂತೆಯೇ ವೆಂಟಿಲೇಟರ್ ತಜ್ಞರು, ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿದರೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತವು ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಸ್ತುವಾರಿ ಸಚಿವರಾದ ಹೆಚ್. ನಾಗೇಶ್ ರವರು ಮುಮದಿನ ವಾರದಲ್ಲಿ ಎ.ಪಿ.ಎಂ.ಸಿ ಜಾಗದ ಸಮಸ್ಯೆಗಾಗಿ ಎಂಪೈರ್ ಹೋಟೆಲ್ ಬಳಿ ಜಮೀನನ್ನು ಪರೀಶೀಲನೆ ಮಾಡೋಣ ಮತ್ತು ಈ ಆಸ್ಪತ್ರೆಯ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ತೆರ್ನಹಳ್ಲಿ ಆಂಜಿನಪ್ಪ, ಲೋಕೇಶ್, ಕೆ.ಇ.ಬಿ ಚಂದ್ರು ಮತ್ತು ಮುಂತಾದ ಕಾರ್ಯಕರ್ತರಿದ್ದರು.