ಉಡುಪಿ: ನಿರಂತರ ಸುರಿದ ಭಾರಿ ಮಳೆ, ನೆರೆಯಿಂದಾಗಿ ಹಲವಾರು ಮನೆಗಳು ರಸ್ತೆಗಳು ಜಲಾವೃತ,ಬೋಟುಗಳು ಮುಳುಗಡೆ

JANANUDI.COM NETWORK

ಉಡುಪಿ,ಸೆ.20:  ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಹಲವಾರು ರಸ್ತೆಗಳು ನದಿ ತೀರದಲ್ಲಿರುವ ಮನೆಗಳಿಗೆ ನೆರೆ ನೀರು ನುಗ್ಗಿದ್ದು, ರಕ್ಷಣಾ ಕಾರ್ಯ ಪ್ರಾರಂಭವಾಗಿದೆ.

   ದಾರಕಾರ ಮಳೆಯಿಂದಾಗಿ ಉಡುಪಿ ಕಲ್ಸಂಕ ಮಣಿಪಾಲ, ಗುಂಡಿಬೈಲು, ಮಲ್ಪೆ ರಸ್ತೆಗಳಲ್ಲಿ ನೀರುನಿಂತು ಸಂಚಾರ ಸ್ಥಗಿತವಾಗಿದೆ, ರಸ್ತೆಗಳು ಹೊಳೆಯಂತೆ ಆಗಿವೆ.. ಅಂಬಲಪಾಡಿ, ಮಠದಬೆಟ್ಟು, ಗುಂಡಿಬೈಲು, ಬನ್ನಂಜೆ,‌ ಕಾಪು ಸೇರಿದಂತೆ ಹಲವು ಭಾಗದಲ್ಲಿ ನೆರೆ ಹಾವಳಿ‌ ತೀವ್ರವಾಗಿದ್ದು, ಇಲ್ಲಿವರೆಗೆ 50 ಕುಟುಂಬಗಳನ್ನು ರಕ್ಷಣೆ ಮಾಡಲಾಗಿ, ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. 

     ರಾತ್ರೋ ರಾತ್ರಿ ನೆರೆ ನೀರು ಅಲೆವೂರು, ಕೆಮ್ತೂರು, ಉದ್ಯಾವಾರ, ಬೊಳ್ಜೆ, ಕಲ್ಸಂಕ, ನಿಟ್ಟೂರು, ಬಲೈಪಾದೆ, ಬನ್ನಂಜೆ, ಕಲ್ಮಾಡಿಯ ಸಹಿತ ಅನೇಕ ಮನೆಗಳಿಗೆ ನೆರೆ ನೀರು ಹರಿದು ಕೆಲವು ಮನೆಯವರನ್ನು ರಕ್ಷಿಸಿಲಾಗಿದೆ. ನಿಟ್ಟೂರು, ಅಡ್ಕದಕಟ್ಟೆ ತಡ ರಾತ್ರಿ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳೀಯ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ರಕ್ಷಣಾ ಕಾರ್ಯದಲ್ಲಿ ತಮ್ಮ ತಂಡದೊಂದಿಗೆ ಮಾಡುತ್ತಿದ್ದಾರೆ. ಶ್ರೀಕೃಷ್ಣ ಮಠದ ಪಾರ್ಕಿಂಗ್, ಬಡಗುಪೇಟೆಯ ಹಲವಾರು ಅಂಗಡಿಗಳಿಗೆ ನೆರೆ ನೀರು ನುಗ್ಗಿದ್ದು, ಅಪಾಯದ ಸ್ಥಿತಿ ಉಂಟಾಗಿದೆ.ಪ್ರಯಾಣಿಕರು ಈಭಾಗದಲ್ಲಿ ಸಂಕಷ್ಟಕ್ಕೆ ಇಡಾಗಿದ್ದಾರೆ.

ಕರಾವಳಿಯಲ್ಲಿ ಜಿಲ್ಲೆಗಳಲ್ಲಿ ಇನ್ನೂಎರಡು ದಿನ ರೆಡ್‌ ಅಲರ್ಟ್‌

ಮೂರು ದಿನ ರೆಡ್‌ ಅಲರ್ಟ್‌: ಕರಾವಳಿಯಲ್ಲಿ ಸೆ. 20, 21 ಮತ್ತು 22ರಂದು ರೆಡ್‌ ಹಾಗೂ ಸೆ. 23ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ಕೆಲವೆಡೆ ಹಾನಿಯೂ ಸಂಭವಿಸಿದ್ದು ಭಾನುವಾರ ಕೂಡ ಭಾರೀ ಪ್ರಮಾಣದ ಮಳೆಯಾಗುತಿದೆ.

ಮಲ್ಪೆಯಲ್ಲಿ 3 ಬೋಟ್ ಗಳು ಸಮುದ್ರದ ಅಬ್ಬರಕ್ಕೆ ಸಿಲುಕಿ ಕಲ್ಲು ಬಂಡೆಗೆ ಡಿಕ್ಕಿ ಹೊಡೆದು ಮುಳುಗಡೆಯಾಗಿವೆ

ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿದ ಭಾರಿ ಮಳೆಗೆ ಉಡುಪಿಯಲ್ಲಿ ಜನರು ತತ್ತರಿಸಿ ಹೋಗಿದ್ದು, ಈ ನಡುವೆ ಮಲ್ಪೆಯಲ್ಲಿ 3 ಬೋಟ್ ಗಳು ಸಮುದ್ರದ ಅಬ್ಬರಕ್ಕೆ ಸಿಲುಕಿ ಕಲ್ಲು ಬಂಡೆಗೆ ಡಿಕ್ಕಿ ಹೊಡೆದು ಮುಳುಗಡೆಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಐವರು ಮೀನುಗಾರರು ಕಲ್ಲು ಬಂಡೆಯ ಆಶ್ರಯ ಪಡೆದಿದ್ದವರನ್ನು ಇನ್ನೊಂದು ಬೋಟ್ ಮೂಲಕ ಹೋದ ಸ್ಥಳೀಯರು ರಕ್ಷಿಸಿದ್ದಾರೆ.

ಮಂಗಳೂರಿನಿಂದ ಕೇಂದ್ರ ಎನ್ ಡಿಆರ್ ಎಫ್ ನಿಂದ ರಕ್ಷಣಾ ಕಾರ್ಯ


ಮಂಗಳೂರು ಉಸ್ತುವಾರಿ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ ಮೇರೆಗೆ ವಿಶೇಷ ಸುರಕ್ಷತಾ ಉಪಕರಣಗಳು ಮತ್ತು ಬೋಟ್ ನೊಂದಿಗೆ ಉಡುಪಿ ಆಗಮಿಸಿದ ರಕ್ಷಣಾ ತಂಡ ನೆರೆಯ ನೀರಿನಿಂದ ಸಿಲುಕಿದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಂತರಿಸುತ್ತಿದ್ದಾರೆ.

ನೆರೆಪೀಡಿತ ಕುಕ್ಕೆಹಳ್ಳಿ,ಉಪ್ಪೂರು, ಕೊಳಲಗಿರಿ, ಮೂಡನಿಡಂಬೂರು, ಉದ್ಯಾವರ ಹಾಗು ಇನ್ನಿತರ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಕೋಟ ಸೂಚನೆ ನೀಡಿದ್ದಾರೆ